ಆಲಮಟ್ಟಿ(ವಿಜಯಪುರ): ಆಲಮಟ್ಟಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಜಲಾಶಯದ ಮಟ್ಟ 516.75 ಮೀ. ಗೆ ತಲುಪಿದೆ. ಮುಂಜಾಗ್ರತೆ ಕ್ರಮವಾಗಿ ನಾರಾಯಣಪುರ ಜಲಾಶಯ ಭರ್ತಿ ಮಾಡುವ ಉದ್ದೇಶದಿಂದ ಬುಧವಾರದಿಂದ ಕೆಪಿಸಿಎಲ್ ಮೂಲಕ ನೀರು ಬಿಡಲು ಸಿದ್ಧತೆ ಆರಂಭಗೊಂಡಿದೆ.
ಜಲಾಶಯದಿಂದ ಹಂತ, ಹಂತವಾಗಿ ನೀರು ಬಿಡಲು ಉದ್ದೇಶಿಸಲಾಗಿದೆ. ಬೆಳಿಗ್ಗೆ 20 ಸಾವಿರ ಕ್ಯುಸೆಕ್, ಸಂಜೆಯ ವೇಳೆಗೆ 45 ಸಾವಿರ ಕ್ಯುಸೆಕ್ಗೆ ಹೆಚ್ಚಳ ಮಾಡಲು ಉದ್ದೇಶಿಸಲಾಗಿದೆ ಎಂದು ಕೆಬಿಜೆಎನ್ಎಲ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಕೆಪಿಸಿಎಲ್ ಮೂಲಕ ಮಾತ್ರ ನೀರು ಹರಿಸಲು ಉದ್ದೇಶಿಸಲಾಗಿದ್ದು, ಗೇಟ್ ಮೂಲಕ ಇಲ್ಲ. ನಾರಾಯಣಪುರ ಜಲಾಶಯ ಇನ್ನೂ ಭರ್ತಿಯಾಗಿಲ್ಲ. ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಸಾಕಷ್ಟಿದೆ, ಮೊದಲು ಕೇವಲ 38 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ನಾರಾಯಣಪುರ ಜಲಾಶಯ ಭರ್ತಿ ಮಾಡಲು ಉದ್ದೇಶಿಸಲಾಗಿದೆ. 123.081 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಆಲಮಟ್ಟಿ ಜಲಾಶಯದಲ್ಲಿ 81.42 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
45 ಸಾವಿರ ಕ್ಯುಸೆಕ್ ಅಗತ್ಯ:
ಆಲಮಟ್ಟಿ ವಿದ್ಯುತ್ ಉತ್ಪಾದನಾ ಕೇಂದ್ರದ ಆರು ಘಟಕಗಳು ಪೂರ್ಣ ಪ್ರಮಾಣಧಲ್ಲಿ ಕಾರ್ಯಾರಂಭ ಮಾಡಲು 45 ಸಾವಿರ ಕ್ಯುಸೆಕ್ ನೀರಿನ ಹರಿವು ಅಗತ್ಯವಿದೆ. ಬೇಸಿಗೆಯಲ್ಲಿ ಎಲ್ಲಾ ಘಟಕಗಳ ನಿರ್ವಹಣೆ ಮಾಡಲಾಗಿದೆ. ಈಗಾಗಲೇ ಆರು ಘಟಕಗಳು ಪರಿಕ್ಷಾರ್ಥವಾಗಿ ವಿದ್ಯುತ್ ಉತ್ಪಾದಿಸಲಾಗಿದೆ. ಹೀಗಾಗಿ ನೀರು ಬಿಟ್ಟ ತಕ್ಷಣ ವಿದ್ಯುತ್ ಘಟಕ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸಲು ಸಿದ್ಧಗೊಂಡಿದೆ ಎಂದು ಕೆಪಿಸಿಎಲ್ ನ ಸುಪರಿಂಟೆಂಡಿಂಗ್ ಎಂಜಿನಿಯರ್ ಕೆ.ವೈ. ಶಿರಾಲಿ ತಿಳಿಸಿದರು.
13.35 ಟಿಎಂಸಿ ಅಡಿ ನೀರು:
ಆಲಮಟ್ಟಿ ಜಲಾಶಯಕ್ಕೆ ಮಂಗಳವಾರ 13.35 ಟಿಎಂಸಿ ಅಡಿ ನೀರು(1,55,056 ಕ್ಯುಸೆಕ್) ಒಂದೇ ದಿನ ಹರಿದು ಬಂದಿದೆ. ಆದರೆ, ಜಲಾಶಯದ ಒಳಹರಿವು ಸಂಜೆಯ ವೇಳೆಗೆ 1.30 ಲಕ್ಷ ಕ್ಯುಸೆಕ್ ಇಳಿಕೆಯಾಗಿದೆ. ಜಲಾಶಯದಲ್ಲಿ 81.42 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
ಇಳಿದ ಮಳೆ ಅಬ್ಬರ:
ಮಹಾರಾಷ್ಟ್ರದ ಕೃಷ್ಣಾ ಕಣಿವೆಯ ಕೊಯ್ನಾದಲ್ಲಿ 1.9 ಸೆಂ.ಮೀ, ನವಜಾ 2.5 ಸೆಂ.ಮೀ, ಮಹಾಬಳೇಶ್ವರ 2.4 ಸೆಂ.ಮೀ, ರಾಧಾನಗರಿ 1.5 ಸೆಂ.ಮೀ, ದೂಧ್ಗಂಗಾದಲ್ಲಿ 0.4 ಸೆಂ.ಮೀ, ಕನ್ಹೇರ್ ದಲ್ಲಿ 0.1 ಸೆಂ.ಮೀ, ಉರ್ಮೋದಿ 0.6 ಸೆಂ.ಮೀ, ವಾರಣಾ 0.5 ಸೆಂ.ಮೀ, ತರಳಿ 0.4 ಸೆಂ.ಮೀ ಮಳೆಯಾಗಿದೆ. ಕರ್ನಾಟಕಕ್ಕೆ ಬಂದು ಸೇರುವ ರಾಜಾಪುರ ಬ್ಯಾರೇಜ್ ಬಳಿ ಕೃಷ್ಣೆಯ ಹರಿವು 75,625 ಕ್ಯುಸೆಕ್ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.