ವಿಜಯಪುರ: ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡುವಂತೆ ಒತ್ತಾಯಿಸಿ ವಿಶ್ವ ಹಿಂದು ಪರಿಷತ್, ಬಜರಂಗದಳ ಕಾರ್ಯಕರ್ತರು ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕಳಸದ ಅವರಿಗೆ ಮನವಿ ಸಲ್ಲಿಸಿದರು.
ಕೋವಿಡ್ ಮೂರನೇ ಅಲೆಯ ಭೀತಿಯ ಕಾರಣವನ್ನು ನೀಡಿಸರ್ಕಾರವು ಸಾರ್ವಜನಿಕ ಗಣೇಶೋತ್ಸವ ಆಚರಣೆಯ ಮೇಲೆ ನಿರ್ಬಂಧ ಹಾಕಿದೆ. ಆದರೆ, ಮಾಲ್, ಮೆಟ್ರೊ, ಕೈಗಾರಿಕೆ, ಉದ್ಯಮ, ಮಾರುಕಟ್ಟೆ ವ್ಯಾಪಾರ, ವಹಿವಾಟಿಗೆ ಅವಕಾಶ ನೀಡಿದೆ. ಗಣೇಶೋತ್ಸವದ ಮೇಲೆ ನಿರ್ಬಂಧ ಹೇರಿರುವುದು ಕೋಟ್ಯಂತರ ಹಿಂದು ಸಮಾಜದವರ ಭಾವನೆಗೆ ದಕ್ಕೆ ಉಂಟಾಗಿದೆ ಎಂದು ಆರೋಪಿಸಿದರು.
ಮೂರ್ತಿಕಾರರು, ಹೂವು ಬೆಳೆಗಾರರು, ಪೆಂಡಾಲ್ನವರು ಸೇರಿ ಸಾವಿರಾರು ಕುಟುಂಬಗಳ ಜೀವನ ಈ ಉತ್ಸವದ ಮೇಲೆ ಅವಲಂಬನೆಯಾಗಿದೆ. ಇಂತಹ ಗಣೇಶೋತ್ಸವದ ಪರಂಪರೆಯ ಮೇಲೆ ನಿರ್ಬಂಧ ಹಾಕಿರುವುದು ಹಿಂದು ಸಮಾಜಕ್ಕೆ ಮಾಡಿದ ಅಪಮಾನ ಎಂದು ದೂರಿದರು.
ರಾಜ್ಯ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಹಿಂದುಗಳ ಧಾರ್ಮಿಕ ಉತ್ಸವದ ಮೇಲೆ ನಿರ್ಬಂಧ ತೆಗೆಯಬೇಕು ಮತ್ತು ನಿಯಮಪಾಲನೆಯೊಂದಿಗೆ ಸಾರ್ವಜನಿಕ ಗಣೇಶೋತ್ಸವವನ್ನು ಆಚರಣೆ ಮಾಡಲು ಅವಕಾಶ ಮಾಡಕೊಡಬೇಕು ಎಂದು ಆಗ್ರಹಿಸಿದರು.
ಉತ್ತರ ಪ್ರಾಂತ ಪ್ರಮುಖ ಸುನೀಲ ಭೈರವಾಡಗಿ, ವಿಶ್ವ ಹಿಂದು ಪರಿಷತ್ ಜಿಲ್ಲಾ ಕಾರ್ಯದರ್ಶಿ ಸಂತೋಷ ನಾಯಕ, ಸಿದ್ದಣ್ಣ ಹೂಗಾರ, ಸುನೀಲ ಜಮಖಂಡಿ, ಶೇಖರಗೌಡ ಹರನಾಳ, ಪ್ರಕಾಶ ಬಿರಾದಾರ, ಉತ್ತರ ಪ್ರಾಂತ ದುರ್ಗಾವಾಹಿನಿ ಪ್ರಮುಖ ಮಾಯಕ್ಕ ಚೌಧರಿ, ಜಿಲ್ಲಾ ಬಜರಂಗದಳ ಸಂಯೋಜಕ ಈರಣ್ಣ ಹಳ್ಳಿ, ಪ್ರವೀಣ ಹೌದೆ, ಕುಮಾರ ಕೋಟಿಮಠ, ಗೊಲ್ಲಾಳೇಶ ಹಿರೇಮಠ, ಶಿವಾಜಿ ಮೊರೆ, ಸಂತೋಷ ಹಿರೇಮಠ, ಭೀಮಾಶಂಕರ, ಪ್ರಕಾಶ ಇಂಡಿ, ಸಂತೋಷ ಹಿರೇಮಠ, ಜಯಪ್ರಕಾಶ ಅಂಬಳಿ, ದೇವಾನಂದ ನಾಗರಾಳ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.