ವಿಜಯಪುರ: ‘ಒಳ ಮೀಸಲಾತಿ ಜಾರಿಗೊಳಿಸದೇ ಇದ್ದರೇ ಕಾಂಗ್ರೆಸ್ ಸರ್ಕಾರಕ್ಕೆ ಆಡಳಿತ ನಡೆಸಲು ಬಿಡುವುದಿಲ್ಲ, ಮುಖ್ಯಮಂತ್ರಿ, ಸಚಿವರು ರಸ್ತೆ ಮೇಲೆ ಓಡಾಡಲು ಬಿಡುವುದಿಲ್ಲ, ರಾಜ್ಯದಲ್ಲಿ ರಕ್ತಪಾತವಾಗಲಿದೆ’ ಎಂದು ಸಂಸದ ಗೋವಿಂದ ಕಾರಜೋಳ ಎಚ್ಚರಿಕೆ ನೀಡಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಗಸ್ಟ್ 19ರ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಜಾರಿಗೆ ಅಂತಿಮ ತೀರ್ಮಾನ ಸರ್ಕಾರ ಕೈಗೊಳ್ಳಲೇಬೇಕು. ಇಲ್ಲವಾದರೆ ರಾಜ್ಯದ 29 ಸಾವಿರ ಹಳ್ಳಿಗಳಲ್ಲಿರುವ ಅಸ್ಪೃಶ್ಯ ಸಮಾಜದವರು ಬೀದಿಗಳಿದು ‘ಮಾಡು ಇಲ್ಲವೇ ಮಡಿ’ ಹೋರಾಟ ನಡೆಸಲಿದ್ದಾರೆ’ ಎಂದು ತಿಳಿಸಿದರು.
‘ಒಳ ಮೀಸಲಾತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರವೇ ಈ ಹಿಂದೆ ರಚಿಸಿದ ಹಾವನೂರು ಆಯೋಗ, ಎ.ಜೆ. ಸದಾಶಿವ ಆಯೋಗ, ಕಾಂತರಾಜ ಆಯೋಗ ಮತ್ತು ನಾಗಮೋಹನ್ ದಾಸ್ ಆಯೋಗಗಳು ಸಲ್ಲಿಸಿರುವ ವರದಿಗಳಿವೆ. ಜೊತೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಚನೆಯಾದ ಮಾಧುಸ್ವಾಮಿ ವರದಿ ಇದೆ. ಈ ಐದು ವರದಿಯಲ್ಲಿ ಯಾವುದಾದರು ಒಂದು ವರದಿಯನ್ನು ಸರ್ಕಾರ ಒಪ್ಪಿಕೊಳ್ಳಲೇಬೇಕು. ಅಗತ್ಯವಿದ್ದರೆ ವರದಿಯಲ್ಲಿ ತಿದ್ದುಪಡಿ ಮಾಡಿಯಾದರೂ ಜಾರಿಗೊಳಿಸಲೇಬೇಕು’ ಎಂದು ಆಗ್ರಹಿಸಿದರು.
‘ಒಳ ಮೀಸಲಾತಿ ವಿಷಯವಾಗಿ ಅಸ್ಪೃಶ್ಯ ಸಮಾಜದವರಿಗೆ ಇತರೆ ಯಾರೊಂದಿಗೂ ತಕರಾರು ಇಲ್ಲ. ಯಾರಿಗೂ ಅನ್ಯಾಯ ಮಾಡಿ ಎಂದು ಹೇಳುವುದಿಲ್ಲ, ಯಾರನ್ನೂ ಕೈಬಿಡಿ ಎಂದು ಹೇಳುವುದಿಲ್ಲ, ಯಾರನ್ನೂ ಹೊರಹಾಕಿ ಎಂದು ಹೇಳುವುದಿಲ್ಲ, ಸರ್ಕಾರ ತಂದೆ ಸ್ಥಾನದಲ್ಲಿ ನಿಂತು ಅವರವರ ಪಾಲು ಅವರಿಗೆ ಸಿಗುವಂತೆ ಮಾಡಬೇಕು, ಒಳ ಮೀಸಲಾತಿಯಿಂದ ಯಾರೂ ವಂಚಿತವಾದಂತೆ ನೋಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.
‘ಒಳಮೀಸಲಾತಿ ನೀಡಬೇಕು ಎಂಬುದರ ಹಿಂದೆ ಯಾವುದೇ ರಾಜಕೀಯ ಅಜೆಂಡಾ ಅಲ್ಲ, ಇದು ಅಸ್ಪೃಶ್ಯ ಸಮಾಜದ ಸಮಸ್ಯೆಯಾಗಿದೆ. ಸಾಮಾಜಿಕ ನ್ಯಾಯಕ್ಕಾಗಿ ಪಕ್ಷಾತೀತವಾಗಿ ರಾಜ್ಯದಾದ್ಯಂತ ಹೋರಾಟ ಆಯೋಜಿಸಲಾಗುವುದು’ ಎಂದರು.
‘ದಲಿತರು ಸದಾ ಕಾಲ ಕಚ್ಚಾಡಿಕೊಂಡು ಇರಬೇಕು, ದಲಿತರು ವೋಟ್ ಬ್ಯಾಂಕ್ ಆಗಿರಬೇಕು ಎಂಬುದಷ್ಟೇ ಕಾಂಗ್ರೆಸ್ ಮನಸ್ಥಿತಿ. ಈ ಕಾರಣಕ್ಕಾಗಿ ಒಳ ಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ’ ಎಂದು ಆರೋಪಿಸಿದರು.
‘ಒಳ ಮೀಸಲಾತಿ ಜಾರಿಗೆ ಯಾವುದೇ ಬಲವಾದ ತಾಂತ್ರಿಕ ಅಡಚಣೆ ಇಲ್ಲ, ಇಷ್ಟಾದರೂ ಜಾರಿಗೆ ಮೀನಾಮೇಷ ಎಣಿಸಲು ಕಾರಣವೇನು? ಹಾಗಾದರೆ ಕಾಂಗ್ರೆಸ್ಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ ಎಂದಾದರೂ ಹೇಳಲಿ’ ಎಂದು ಸವಾಲು ಹಾಕಿದರು.
‘ನಾಗಮೋಹನದಾಸ್ ಅವರು ಬಹಳ ವೈಜ್ಞಾನಿಕವಾಗಿ ಹಾಗೂ ಸಮಾಜಗಳ ಬಗ್ಗೆ ಕಳಕಳಿ ಇಟ್ಟುಕೊಂಡು ಒಳಮೀಸಲಾತಿ ವರದಿ ಮಾಡಿದ್ದಾರೆ. ಈ ವರದಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಒಂದು ಕಡೆ ಸಂವಿಧಾನ, ಇನ್ನೊಂದು ಕಡೆ ಸುಪ್ರೀಂಕೋರ್ಟ್ ಆದೇಶವನ್ನು ಮುಂದಿಟ್ಟುಕೊಂಡು ಒಳ ಮೀಸಲಾತಿ ಜಾರಿಗೆ ಅಂತಿಮ ತೀರ್ಮಾನಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.
ಒಳ ಮೀಸಲಾತಿ ಜಾರಿಯಾಗದೇ ಇರುವುದಕ್ಕೆ ಕೆಲವು ಕಾಣದ ಕೈಗಳು ಕೆಲಸ ಮಾಡುತ್ತಿವೆ. ಜೊತೆಗೆ ಕೆಲವು ಸಚಿವರು ಸೇರಿಕೊಂಡಿದ್ದಾರೆ–ಗೋವಿಂದ ಕಾರಜೋಳ, ಸಂಸದ
‘ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಉದ್ದೇಶಕ್ಕಾಗಿ ಒಳ ಮೀಸಲಾತಿ ಜಾರಿಗೆ ವಿಳಂಬ ಮಾಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಇಲ್ಲವಾದರೆ ನಮಗೆ ಜಾರಿ ಮಾಡಲು ಆಗುವುದಿಲ್ಲ ಎಂದಾದರೂ ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಲಿ. ಕೇವಲ ಅಕ್ಕಿ ಕೊಟ್ಟು ನುಡಿದಂತೆ ನಡೆದ ಸರ್ಕಾರ ಎಂದು ಹೇಳಿದರೆ ಆಗುವುದಿಲ್ಲ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಅನುಷ್ಠಾನಕ್ಕೆ ತರುವುದೇ ಸರ್ಕಾರದ ಆದ್ಯ ಕರ್ತವ್ಯ’ ಎಂದು ಹೇಳಿದರು.
ದಲಿತರಿಗೊಂದು ನೀತಿ: ಕಾರಜೋಳ
ವಿಜಯಪುರ: ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಮೆಚ್ಚಿಸುವ ಸಲುವಾಗಿ ಕೆ.ಎನ್. ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿದ್ದಾರೆ’ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದರು.
‘ಈ ಹಿಂದೆ ಸರ್ಕಾರ ಸಚಿವರ ವಿರುದ್ಧ ಅವರೇ ಪಕ್ಷದ ರಾಜು ಕಾಗೆ ಬಸವರಾಜ ಶಿವಗಂಗೆ ಬಸವರಾಜ ರಾಯರೆಡ್ಡಿ ಬಿ.ಆರ್.ಪಾಟೀಲ ಅನೇಕ ಟೀಕೆಗಳನ್ನು ಮಾಡಿದ್ದರು. ಅವರನ್ನೇಕೆ ವಜಾ ಮಾಡಲಿಲ್ಲ’ ಎಂದು ಪ್ರಶ್ನಿಸಿದರು.
‘ದಲಿತರಿಗೆ ಒಂದು ನೀತಿ ಮುಂದುವರಿದವರಿಗೆ ಒಂದು ನೀತಿ ಕಾಂಗ್ರೆಸ್ ಅನುಸರಿಸುತ್ತಿದೆ. ರಾಜಣ್ಣ ಸತ್ಯ ಮಾತನಾಡಿದ್ದಾರೆ. ದಲಿತರನ್ನು ಬಯದಲ್ಲಿ ಇಟ್ಟು ಆಡಳಿತ ನಡೆಸಲಾಗುತ್ತಿದೆ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.