ADVERTISEMENT

ಮೀಸಲಾತಿ ಅಸ್ತ್ರವಾಗಿಸದಿರಿ

ದಸಂಸ ಅಧ್ಯಯನ ಶಿಬಿರ; ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2019, 20:15 IST
Last Updated 13 ಸೆಪ್ಟೆಂಬರ್ 2019, 20:15 IST
ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಶುಕ್ರವಾರ ಆರಂಭವಾದ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ಅಧ್ಯಯನ ಶಿಬಿರವನ್ನು ಶಾಸಕ ಶಿವಾನಂದ ಪಾಟೀಲ ಉದ್ಘಾಟಿಸಿದರು
ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಶುಕ್ರವಾರ ಆರಂಭವಾದ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ಅಧ್ಯಯನ ಶಿಬಿರವನ್ನು ಶಾಸಕ ಶಿವಾನಂದ ಪಾಟೀಲ ಉದ್ಘಾಟಿಸಿದರು   

ಆಲಮಟ್ಟಿ (ವಿಜಯಪುರ ಜಿಲ್ಲೆ): ‘ಸಾಮಾನ್ಯ ವರ್ಗಕ್ಕೆ ಸೇರಿದ ಆರ್ಥಿಕವಾಗಿ ಹಿಂದುಳಿದವರಿಗೆ ಕೇಂದ್ರ ಸರ್ಕಾರ ಶೇ 10ರಷ್ಟು ಮೀಸಲಾತಿ ಕಲ್ಪಿಸುವ ಬದಲು, ಬಡಜನರ ಆರ್ಥಿಕ ಮಟ್ಟವನ್ನು ಸುಧಾರಿಸಬೇಕು. ಮೀಸಲಾತಿಯನ್ನು ಪ್ರಚಾರದ ಅಸ್ತ್ರವನ್ನಾಗಿ ಬಳಸಿಕೊಳ್ಳಬಾರದು’ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ.ಜಿ.ಸಾಗರ ಒತ್ತಾಯಿಸಿದರು.

ದಲಿತ ಸಂಘರ್ಷ ಸಮಿತಿ ಶುಕ್ರವಾರ ಇಲ್ಲಿ ಏರ್ಪಡಿಸಿದ್ದಮೂರು ದಿನಗಳ ರಾಜ್ಯಮಟ್ಟದ ಪದಾಧಿಕಾರಿಗಳ ಅಧ್ಯಯನ ಶಿಬಿರದಲ್ಲಿ ಅವರು ಮಾತನಾಡಿದರು.

‘ಸದ್ಯ ಶೇ 50ರಷ್ಟು ಮೀಸಲಾತಿ ಸಾಮಾನ್ಯ ವರ್ಗದವರಿಗೇ ಇದೆ. ದಲಿತ ಚಳವಳಿಗಳು ವಿಮುಖವಾಗುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ದಲಿತ ಸಂಘರ್ಷ ಸಮಿತಿ ಯಾವುದೇ ಸರ್ಕಾರ ಅಥವಾ ಪಕ್ಷದ ಪರ– ವಿರೋಧವಾಗಿ ಕೆಲಸ ಮಾಡದೇ, ಶೋಷಣೆ, ಬಡತನ, ದಬ್ಬಾಳಿಕೆ, ಜಾತೀಯತೆ ವಿಷ ಬೀಜ ಬಿತ್ತುವವರ ವಿರುದ್ಧ ಹೋರಾಟದಲ್ಲಿ ತೊಡಗಿಸಿಕೊಂಡಿದೆ’ ಎಂದರು.

ADVERTISEMENT

ರಾಜ್ಯ ಸಂಘಟನಾ ಸಂಚಾಲಕ ಎಂ.ಬಿ.ಶ್ರೀನಿವಾಸ ಮಾತನಾಡಿ, ‘ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ವಾತಂತ್ರ್ಯ ಪೂರ್ವದಲ್ಲಿಯೇ ಶೂದ್ರರಿಗೆ ಶೇ 50ರಷ್ಟು ಮೀಸಲಾತಿ ಜಾರಿಗೆ ತಂದಿದ್ದರು. ಇದರ ಪ್ರಭಾವ ಅಂಬೇಡ್ಕರ್ ಅವರ ಮೇಲಾಯಿತು. ಆದರೆ, ಇತ್ತೀಚಿನ ದಿನಗಳಲ್ಲಿ ಯುವಜನರ ಅಧ್ಯಯನ, ತಿಳಿವಳಿಕೆ ಕೊರತೆಯಿಂದ ದಲಿತ ಚಳವಳಿ ಬಲಹೀನವಾಗುತ್ತಿದ್ದು, ಅದನ್ನು ಗಟ್ಟಿಗೊಳಿಸಬೇಕಾಗಿದೆ’ ಎಂದು ಅವರು ಹೇಳಿದರು.

ಶಾಸಕ ಶಿವಾನಂದ ಪಾಟೀಲ, ‘ಸದ್ಯ ದೇಶದ ಜನರ ಭಾವನೆಗಳು ಸೂಕ್ಷ್ಮ ಕಾಲಘಟ್ಟದತ್ತ ಹೊರಳುತ್ತಿವೆ. ಕೆಲ ಮೂಲಭೂತವಾದಿಗಳು ಮಹಾತ್ಮ ಗಾಂಧಿ ಅವರನ್ನೇ ನಿಂದಿಸುವ ಹಂತ ತಲುಪಿದ್ದಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.

28 ಜಿಲ್ಲೆಗಳ 200 ಪದಾಧಿಕಾರಿಗಳು ಶಿಬಿರದಲ್ಲಿ ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.