ವಿಜಯಪುರ: ಕಬ್ಬು ಬೆಳೆದ ರೈತರಿಗೆ ನ್ಯಾಯಸಮ್ಮತ ಲಾಭದಾಯಕ ಬೆಲೆ ನೀಡಲು ಸರ್ಕಾರ ಕ್ರಮ ಕೈಗೊಂಡು ರಾಜ್ಯದಾದ್ಯಂತ ನಡೆಯುತ್ತಿರುವ ರೈತರ ಹೋರಾಟವನ್ನು ಅಂತ್ಯಗೊಳಿಸಲು ಮುಂದಾಗಬೇಕು ಎಂದು ಶಾಸಕ ದೇವಾನಂದ ಚವ್ಹಾಣ ಒತ್ತಾಯಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಮೀಪ ಅಖಂಡ ಕರ್ನಾಟಕ ರೈತ ಸಂಘ ವತಿಯಿಂದ ರೈತರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ, ಬೆಂಬಲ ಸೂಚಿಸಿ ಅವರು ಮಾತನಾಡಿದರು.
ಕಳೆದ ಮೂರು ದಿನಗಳಿಂದ ನಾಲ್ಕು ಜನ ರೈತ ಮುಖಂಡರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ಸರ್ಕಾರ ಸುಮ್ಮನೆ ಕುಳಿತಿರುವುದು ಸರಿಯಲ್ಲ, ಸರ್ಕಾರ ಮೌನ ವಹಿಸಿರುವುದು ರೈತ ವಿರೋಧಿ ನೀತಿ ಎತ್ತಿ ತೋರಿಸುತ್ತಿದೆ ಎಂದು ಆರೋಪಿಸಿದರು.
ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸ್ಪಷ್ಟ ಆದೇಶ ಹೊರಡಿಸಬೇಕು. ಮುಂಬರುವ ಅಧಿವೇಶನದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಪ್ರಶ್ನೆ ಹಾಕಲಾಗಿದ್ದು, ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದರು.
ಧರಣಿಗೆ ರೈತರ ಮುಂಖಡರಾದ ಪಂಚಪ್ಪ ಕಲಬುರ್ಗಿ, ಭೀಮಶಿ ಕಲಾದಗಿ, ಎಸ್.ವಿ.ಪಾಟೀಲ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಉಪವಾಸ ಧರಣಿ ನಿರತ ಅರವಿಂದ ಕುಲಕರ್ಣಿ, ಬಾಲಪ್ಪಗೌಡ ಲಿಂಗದಳ್ಳಿ, ಯಲ್ಲಲಿಂಗ ಹೂಗಾರ, ಚನ್ನನಗೌಡ ಬಿರಾದಾರ ಆಮರಣ ಉಪವಾಸ ಮುಂದುವರೆಸಿದ್ದಾರೆ.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ, ದಾವಲಸಾಬ ನಧಾಪ, ಚನ್ನಬಸಪ್ಪ ಸಿಂಧೂರ, ವಿಜಯ ಪೂಜಾರ, ಪಿರು ಕೊರುರ, ಸಿದ್ದು ಯಂಕಂಚಿ, ತಿರುಪತಿ ಬಂಡಿವಡ್ಡರ, ಗುರುಲಿಂಗ ಹಜೇರಿ, ಮಹಿಳಾ ಮುಖಂಡರಾದ ಶಬಲಾ ಬಕ್ಷಿ, ರೇಣುಕಾ ಬಕ್ಷಿ, ಸೋಮನಗೌಡ ಕೋಳುರ ಧರಣಿಯಲ್ಲಿ ಪಾಲ್ಗೊಂಡಿದ್ದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.