ADVERTISEMENT

‘ಪ್ರಜಾವಾಣಿ’ ವರದಿಗೆ ಸ್ಪಂದನೆ; ಸಭೆಗೆ ಹಾಜರಾದ ಸಂಸದ

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 15:32 IST
Last Updated 9 ಜೂನ್ 2021, 15:32 IST
ರಮೇಶ ಜಿಗಜಿಣಗಿ
ರಮೇಶ ಜಿಗಜಿಣಗಿ   

ವಿಜಯಪುರ: ಕೋವಿಡ್ ಎರಡನೇ ಅಲೆ ಆರಂಭವಾದ ಬಳಿಕ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸದೇ ಇದ್ದ ಹಾಗೂ ಸಚಿವರು, ಅಧಿಕಾರಿಗಳ ಸಭೆಗಳಿಗೂ ಹಾಜರಾಗದೇ ಟೀಕೆಗೆ ಗುರಿಯಾಗಿದ್ದ ಸಂಸದ ರಮೇಶ ಜಿಗಜಿಣಗಿ ಬುಧವಾರ ನಡೆದ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ಭಾಗವಹಿಸುವ ಮೂಲಕ ಎಲ್ಲ ಟೀಕೆ, ಟಿಪ್ಪಣಿಗಳಿಗೆ ತೆರೆ ಎಳೆದಿದ್ದಾರೆ.

‘ಪ್ರಜಾವಾಣಿ’ಯಲ್ಲಿ ಬುಧವಾರ ಕಾಳಜಿ ಪೂರ್ವಕವಾಗಿ ಪ್ರಕಟವಾದ ವರದಿಯನ್ನು ನೋಡಿದೆ. ಜಿಲ್ಲೆಯ ಜನರ ಸಂಕಷ್ಟಕ್ಕೆ ಈ ಸಂದರ್ಭದಲ್ಲಿ ಸ್ಪಂದಿಸಬೇಕು ಎಂಬ ಕಾರಣಕ್ಕೆ ವೈಯಕ್ತಿಕ ಸಮಸ್ಯೆಗಳನ್ನು ಬದಿಗಿರಿಸಿ ಸಭೆಗೆ ಹಾಜರಾಗಿರುವೆ’ ಎಂದು ಹೇಳಿದರು.

‘ಎರಡು ಬಾರಿ ಕೋವಿಡ್‌ ಪೀಡಿತನಾಗಿದ್ದೆ. ಬಿಪಿ, ಶುಗರ್‌ ಇರುವುದರಿಂದ ಈ ಸಂದರ್ಭದಲ್ಲಿ ಎಲ್ಲಿಯೂ ಅಡ್ಡಾಡದಂತೆ ವೈದ್ಯರು ಸೂಚಿಸಿದ್ದರು. ಹೀಗಾಗಿ ಸ್ವಲ್ಪ ದಿನಗಳ ಕಾಲ ಮನೆಯಲ್ಲೇ ಇದ್ದೆ. ಈಗಾಗಲೇ ಕೋವಿಡ್‌ ಲಸಿಕೆ ಎರಡು ಡೋಸ್‌ ಪಡೆದಿರುವುದರಿಂದ ಧೈರ್ಯವಾಗಿದ್ದೇನೆ’ ಎಂದು ತಿಳಿಸಿದರು.

ADVERTISEMENT

‘ಪ್ರಾಯದವರು, ಮಧ್ಯ ವಯಸ್ಸಿನವರು ಈ ಬಾರಿ ಕೋವಿಡ್‌ನಿಂದ ಭಾರೀ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದನ್ನು ಕಣ್ಣಾರೆ ಕಂಡಿದ್ದೇನೆ. ಹೀಗಾಗಿ ನನಗೂ ಅಂಜಿಕೆಯಾಗಿತ್ತು’ ಎಂದರು.

‘ಬಹಳಷ್ಟು ಜನ ಕೋವಿಡ್‌ ಬಂದರೂ ವೈದ್ಯರನ್ನು ಭೇಟಿಯಾಗದೇ, ಸರಿಯಾಗಿ ಚಿಕಿತ್ಸೆ ಪಡೆಯದೇ ನಿರ್ಲಕ್ಷ್ಯ ವಹಿಸಿದ ಪರಿಣಾಮ ಸಾವು–ನೋವು ಅನುಭವಿಸಿದ್ದಾರೆ. ಹೀಗಾಗದಂತೆ ಎಲ್ಲರೂ ಎಚ್ಚರವಹಿಸಬೇಕು. ಆಸ್ಪತ್ರೆ, ಚಿಕಿತ್ಸೆ, ಲಸಿಕೆ ಅಗತ್ಯ ಇರುವವರಿಗೆ ಕೈಲಾದಷ್ಟು ಸಹಾಯ ಮಾಡುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.