ADVERTISEMENT

ಬಸವನಬಾಗೇವಾಡಿ | ನಿವೃತ್ತಿ ವೃತ್ತಿಗೆ ಹೊರತು, ಉತ್ಸಾಹಕ್ಕಲ್ಲ: ಹಂಚಲಿ

ತಾಲ್ಲೂಕು ನಿವೃತ್ತ‌ ನೌಕರರ ಸಂಘದ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 5:08 IST
Last Updated 6 ಫೆಬ್ರುವರಿ 2026, 5:08 IST
<div class="paragraphs"><p>ಬಸವನಬಾಗೇವಾಡಿ ಪಟ್ಟಣದ ವಿರಕ್ತಮಠದಲ್ಲಿ ರಾಜ್ಯ ನಿವೃತ್ತ ಸರ್ಕಾರಿ‌ ನೌಕರರ ಸಂಘ ತಾಲ್ಲೂಕು ಘಟಕದ ವಾರ್ಷಿಕೋತ್ಸವ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು</p></div>

ಬಸವನಬಾಗೇವಾಡಿ ಪಟ್ಟಣದ ವಿರಕ್ತಮಠದಲ್ಲಿ ರಾಜ್ಯ ನಿವೃತ್ತ ಸರ್ಕಾರಿ‌ ನೌಕರರ ಸಂಘ ತಾಲ್ಲೂಕು ಘಟಕದ ವಾರ್ಷಿಕೋತ್ಸವ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು

   

ಬಸವನಬಾಗೇವಾಡಿ: ನಿವೃತ್ತಿ ನಂತರದ ಬದುಕು ಬಹಳ ಚೆಂದ. ನಿವೃತ್ತಿ ಎನ್ನುವುದು ವೃತ್ತಿಗಷ್ಟೇ ಹೊರತು ಪ್ರವೃತ್ತಿ, ಉತ್ಸಾಹ ಅಥವಾ ಸಮಾಜಮುಖಿ ಕಾರ್ಯ ಚಟುವಟಿಕೆಗಳಿಗಲ್ಲ ಎಂದು ಶಿಕ್ಷಕ ಅಶೋಕ‌ ಹಂಚಲಿ ಹೇಳಿದರು.

ರಾಜ್ಯ ನಿವೃತ್ತ ಸರ್ಕಾರಿ‌ ನೌಕರರ ಸಂಘದ ತಾಲ್ಲೂಕು ಘಟಕದ ವಾರ್ಷಿಕೋತ್ಸವ ಹಾಗೂ 75 ವರ್ಷದ ಪೂರೈಸಿದ ಹಿರಿಯ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ADVERTISEMENT

ಕಳೆದ 25 ವರ್ಷಗಳಿಂದ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಕೊಡಿಸುವ ಕಾಯಕದಲ್ಲಿ ತೊಡಗಿಸಿಕೊಂಡು ಈವರೆಗೆ ಸುಮಾರು 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಒಟ್ಟು ₹5 ಕೋಟಿ ಮೌಲ್ಯದ ಸ್ಕಾಲರ್‌ಶಿಪ್‌ಗಳನ್ನು ಕೊಡಿಸುವಲ್ಲಿ ನೆರವಾಗಿರುವ ಬಂಟ್ವಾಳದ ಕೆ. ನಾರಾಯಣ ನಾಯಕ್ ಅವರು ಎಲ್ಲಾ ಹಿರಿಯ ಚೇತನರಿಗೂ ಸ್ಫೂರ್ತಿಯಾಗಿದ್ದಾರೆ. ಈ ನೆಲದಲ್ಲಿ ಹಿರಿಯರಿರುವುದೇ ಸೌಭಾಗ್ಯ, ಎಲ್ಲಾ ಹಿರಿಯರು ಉತ್ಸಾಹದ ಮೂರ್ತಿಗಳಾಗಿ ಬದುಕಿನ ಸವಿ ಅನುಭವಿಸಬೇಕು ಎಂದರು.

ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ‌ ಮಾತನಾಡಿ, ತಾಲ್ಲೂಕಿನ ನಿವೃತ್ತ ಸರ್ಕಾರಿ ನೌಕರರ ಸಂಘಕ್ಕೆ ಕಚೇರಿಗಾಗಿ ಸಚಿವ ಶಿವಾನಂದ ಪಾಟೀಲರ ಮಾರ್ಗದರ್ಶನದಲ್ಲಿ ಪಟ್ಟಣದ ಮೆಗಾ ಮಾರುಕಟ್ಟೆ, ಬಸವನಬಾಗೇವಾಡಿ ಪ್ರತ್ಯೇಕ ಪ್ರಾಧಿಕಾರ ಮಳಿಗೆಯಲ್ಲಿ ಅಥವಾ ಸ್ಥಳೀಯ ಪುರಸಭೆ ವ್ಯಾಪ್ತಿಯಲ್ಲಿ‌ ಸ್ಥಳ ಕೊಡಿಸುವ ಕಾರ್ಯ ಮಾಡುತ್ತೇನೆ. ತಾಲ್ಲೂಕಿನ ನಿವೃತ್ತ ಸರ್ಕಾರಿ ನೌಕರರ ಸಂಘದ ಬೆಳವಣಿಗೆ ಹಾಗೂ ಹಿರಿಯರ ಸೇವೆ‌‌ಗೆ ಸದಾ ಸಿದ್ದ ಎಂದು ಭರವಸೆ ನೀಡಿದರು.

ನಿವೃತ್ತ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಪಿ.ಬಿರಾದಾರ (ಕಡ್ಲೇವಾಡ), ತಾಲ್ಲೂಕು ನಿವೃತ್ತ ಸರ್ಕಾರಿ‌ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ. ಸೋಮನಕಟ್ಟಿ ಮಾತನಾಡಿದರು. ನಿವೃತ್ತ ನೌಕರರ ಸಂಘದ ಕಟ್ಟಡ ಸಹಾಯಾರ್ಥ ಹಿರಿಯರಾದ ಎಂ.ಜಿ. ಆದಿಗೊಂಡ ಅವರು ₹50 ಸಾವಿರ ದೇಣಿಗೆ ನೀಡಿದರು. ತಾಲ್ಲೂಕಿನಲ್ಲಿ 75 ವರ್ಷ ಪೂರೈಸಿದ ಹಲವಾರು ಹಿರಿಯ ನಿವೃತ್ತ ನೌಕರರಿಗೆ, ಎಸ್ಎಸ್ಎಲ್ಸಿಯಲ್ಲಿ ₹98 ಅಂಕ ಗಳಿಸಿದ ವಿದ್ಯಾರ್ಥಿನಿ ಪೂರ್ಣಿಮಾ ರವಿ ಚಿಕ್ಕೊಂಡ ಅವರಿಗೆ, ಸಿಎ ಮುಗಿಸಿರುವ ಪೂರ್ಣಿಮಾ ಕಲ್ಲೂರ ಅವರಿಗೆ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಿ.ಡಿ.ಕೊಟ್ನಾಳ ಹಾಗೂ ಅನೇಕರಿಗೆ ಸನ್ಮಾನಿಸಲಾಯಿತು.

ನಿವೃತ್ತ‌ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎಫ್.ಡಿ. ಮೇಟಿ,ನಿವೃತ್ತ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ರೇಣುಕಾ ಎಸ್., ಜಿಲ್ಲಾ ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಶಿವನಗೌಡ ಬಿರಾದಾರ, ಹಿರಿಯ ಸಾಹಿತಿ ಲ.ರು. ಗೊಳಸಂಗಿ, ಹಿರಿಯ ವಕೀಲ ಬಿ.ಕೆ.ಕಲ್ಲೂರು, ಎಂ.ಜಿ.ಆದಿಗೊಂಡ, ಆರ್.ಜಿ.‌ಅಳ್ಳಗಿ, ಸುರೇಶ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.