
ವಿಜಯಪುರ: ‘ಜೀವನದಲ್ಲಿ ಸಾಧನೆ ಮಾಡಬೇಕೆಂದು ಬಯಸಿ ಅಭ್ಯಾಸ ಮಾಡುವವರಿಗೆ ವಿದ್ಯೆಯ ಫಲಗಳು ದೊರಕುತ್ತವೆ. ಶಿವಯೋಗಿ ಸಿದ್ದರಾಮರು ಇದನ್ನು ತಮ್ಮ ವಚನದಲ್ಲಿ ಪ್ರಸ್ತಾಪಿಸಿದ್ದಾರೆ’ ಎಂದು ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದ ಸಂಯೋಜನಾಧಿಕಾರಿ ವಿ.ಡಿ.ಐಹೊಳ್ಳಿ ಹೇಳಿದರು.
ನಗರದ ಆಶ್ರಮ ರಸ್ತೆಯ ಐಶ್ವರ್ಯ ಬಡಾವಣೆಯ ವರದಾಂಜನೇಯ ದೇವಸ್ಥಾನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ 549ನೇ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಅನುಭವಿ ಆದವನು ಪಂಡಿತನಾಗುತ್ತಾನೆ. ಅವನಿಗೆ ಎಲ್ಲೆಲ್ಲೂ ಗೌರವ ಸಿಗುತ್ತದೆ. ಅಧ್ಯಾತ್ಮದಲ್ಲಿ ಆಗಲಿ, ಅಭ್ಯಾಸದಲ್ಲಿ ಆಗಲಿ, ಸೇವೆಯಲ್ಲಿ ಆಗಲಿ ನಾವೆಲ್ಲ ಸಾಧಕರೆಂದು ಭಾವಿಸಿಕೊಂಡು ಮುನ್ನಡೆಯಬೇಕು ಎಂದರು.
ಸಿದ್ದೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ರವೀಂದ್ರ ಬಿಜ್ಜರಗಿ ಮಾತನಾಡಿ, ‘ಸತ್ಸಂಗ ಕಾರ್ಯಕ್ರಮಗಳು ನಮ್ಮನ್ನು ಸನ್ಮಾರ್ಗದತ್ತ ಒಯ್ಯುತ್ತವೆ. ಇಲ್ಲಿ ಪಡೆಯುವ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ ಮುನ್ನಡೆಯುವ ಅವಶ್ಯಕತೆ ಇದೆ’ ಎಂದು ತಿಳಿಸಿದರು.
ಮುಖ್ಯ ಶಿಕ್ಷಕ ಜಿ.ಕೆ.ಪಟ್ಟಣದ ಮಾತನಾಡಿ, ‘ತನು ಮನ ಶುದ್ಧತೆಯಿಂದ ನಡೆದುಕೊಳ್ಳುವ ಅವಶ್ಯಕತೆಯಿದೆ. ಸದ್ವಿವೇಕ ನಮಗೆಲ್ಲ ಸತ್ಸಂಗ ನೀಡುತ್ತದೆ’ ಎಂದರು.
ನಿವೃತ್ತ ಬ್ಯಾಂಕ್ ಅಧಿಕಾರಿ ಕಮಲಾಕರ ಕುಮಟಗಿ ಮಾತನಾಡಿದರು. ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕುಸುಮಾ ಕುಮಟಗಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಮಾರುತಿ ದೇವಸ್ಥಾನದ ಅರ್ಚಕ ಮಲ್ಲಯ್ಯ ಸ್ವಾಮಿ ಹಿರೇಮಠ, ಮಾರುತಿ ಸೇವಾ ಸಮಿತಿಯ ಅಧ್ಯಕ್ಷ ಬಿ.ಎನ್.ಬಿರಾದಾರ, ಉಪಾಧ್ಯಕ್ಷ ಬಸವರಾಜ ರೂಗಿ, ಕೋಶಾಧ್ಯಕ್ಷ ಎಸ್.ಕೆ.ಬಿರಾದಾರ್, ಎಂ.ಕೆ. ಬಿಸನಾಳ, ನಿವೃತ್ತ ಪ್ರಾಧ್ಯಾಪಕ ಆರ್.ಎನ್.ದಿಂಡೂರ, ನಿವೃತ್ತ ಪ್ರಾಚಾರ್ಯ ಪಿ.ಎಂ. ಬಿರಾದಾರ, ಚಂದ್ರಶೇಖರ ಸರಸಂಬಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.