
ಬಬಲೇಶ್ವರ: ‘ಉತ್ತಮ ಮೂಲಸೌಕರ್ಯ, ಸುಸಜ್ಜಿತ ತರಗತಿ ಕೊಠಡಿಗಳು ಮತ್ತು ಕಲಿಕೆಗೆ ಅನುಕೂಲವಾದ ವಾತಾವರಣ ಮಕ್ಕಳ ಭವಿಷ್ಯಕ್ಕೆ ಹೊಸ ಚೈತನ್ಯ ತುಂಬುತ್ತವೆ’ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದರು.
ತಾಲ್ಲೂಕಿನ ಕಣಮುಚನಾಳದಲ್ಲಿ ಟೊಯೋಟಾ ಕಿರ್ಲೋಸ್ಕರ್ ಸಂಸ್ಥೆಯ ₹2.50 ಕೋಟಿ ಸಿ.ಎಸ್.ಆರ್ ಅನುದಾನದಲ್ಲಿ ನಿರ್ಮಿಸಲಾಗಿರುವ ಸರ್ಕಾರಿ ನೂತನ ಪ್ರೌಢಶಾಲೆ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
‘ಈ ಪ್ರೌಢಶಾಲೆ ಕಟ್ಟಡ ನಿರ್ಮಾಣಕ್ಕೆ ಅದೇ ವರ್ಷದ ಜನವರಿಯಲ್ಲಿ ಭೂಮಿಪೂಜೆ ನೆರವೇರಿಸಿ, ಇದೇ ವರ್ಷಾಂತ್ಯದೊಳಗೆ ಲೋಕಾರ್ಪಣೆ ಮಾಡುವ ಭರವಸೆ ನೀಡಿದ್ದೆ. ಅದು ಈಗ ಸಾಕಾರವಾಗಿದೆ. ಸಕಾಲಕ್ಕೆ ಅನುದಾನ ನೀಡಿರುವ ಸಂಸ್ಥೆಗೆ ಕೃತಜ್ಞತೆಗಳು’ ಎಂದರು.
‘ಈ ಶಾಲೆಯಲ್ಲಿ ಮಕ್ಕಳಿಗೆ ಬಿಸಿ ಊಟ ತಯಾರಿಸಲು ಗುಣಮಟ್ಟದ ಅಡುಗೆ ಮನೆ, ಭೋಜನ ಶಾಲೆ, ಉಪಾಧ್ಯಾಯರಿಗೆ ವಿರಮಿಸಿಕೊಳ್ಳಲು ಸ್ಟಾಫ್ ರೂಂ, ಶೌಚಾಲಯ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಈ ಆಧುನಿಕ ಶಾಲಾ ಕಟ್ಟಡವು ಗ್ರಾಮೀಣ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಹೊಸ ದಿಕ್ಕು ನೀಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಲ್ಲಯ್ಯ ಅರಕೇರಿಮಠ ಸ್ವಾಮೀಜಿ, ಮಲ್ಲಿಕಾರ್ಜುನ ಹಿರೇಮಠ ಸ್ವಾಮೀಜಿ, ಟೊಯೋಟಾ ಕಿರ್ಲೋಸ್ಕರ್ ಸಂಸ್ಥೆಯ ಉಪಾಧ್ಯಕ್ಷ ರಮೇಶ ರಾವ್ ಮತ್ತು ಜನರಲ್ ಮ್ಯಾನೇಜರ್ ಕಿರಣ, ಸಚಿವರ ಆಪ್ತ ಕಾರ್ಯದರ್ಶಿ ನರೇಂದ್ರ, ಬಿಇಒ ಬಸವರಾಜ ತಳವಾರ, ಎಸ್.ಡಿ.ಎಂ.ಸಿ ಅಧ್ಯಕ್ಷ ಲಕ್ಷ್ಮಣಗೌಡ ಬಿರಾದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ, ಮುಖಂಡರಾದ ವಿದ್ಯಾರಾಣಿ ತುಂಗಳ, ಮಹಾದೇವ ನಾಟೀಕಾರ, ಮಲ್ಲು ಕಲಾದಗಿ, ವಿಠ್ಠಲ ನಾಟೀಕಾರ, ಮಾದುರಾಯಗೌಡ ಬಿರಾದಾರ, ನಿಂಗೊಂಡ ಬಿರಾದಾರ, ದೇವಾನಂದ ಲಚ್ಯಾಣ, ಶಾಲೆಯ ಮುಖ್ಯಶಿಕ್ಷಕರಾದ ಆರ್. ಬಿ. ಪಾಟೀಲ, ಸಹಶಿಕ್ಷಕ ಪ್ರಕಾಶ ಮನ್ನಿಕೇರಿ, ಕಣಮುಚನಾಳ, ಸಾರವಾಡ, ಧನ್ಯಾಳ, ಅತಾಲಟ್ಟಿಯ ಮುಖಂಡರು ಇದ್ದರು.
ಟೊಯೋಟಾ ಕಿರ್ಲೋಸ್ಕರ್ ಅನುದಾನ | ₹2.50 ಕೋಟಿಯಲ್ಲಿ ಶಾಲೆ ನಿರ್ಮಾಣ | ಗುಣಮಟ್ಟದ ಭೋಜನ ಶಾಲೆ, ಸ್ಟಾಫ್ ರೂಂ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.