ತಿಕೋಟಾ: ಮಹಾರಾಷ್ಟ್ರದ ಗಡಿಭಾಗಕ್ಕೆ ಹೊಂದಿಕೊಂಡಿರುವ ತಾಲ್ಲೂಕಿನ ಘೋಣಸಗಿ ಎಲ್.ಟಿ. ನಂ.1 ಶಾಲೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಈಚೆಗೆ ಭೇಟಿ ನೀಡಿದರು.
ವರ್ಗ ಕೋಣೆಗೆ ತೆರಳಿ ಮಕ್ಕಳ ಕಲಿಕಾ ಪ್ರಗತಿಯನ್ನು ಪರೀಕ್ಷಿಸಿದರು. ಮಕ್ಕಳಿಂದ ಪ್ರಶ್ನೆಗಳಿಗೆ ಉತ್ತರ ಪಡೆದು ಪ್ರಶಂಸೆ ವ್ಯಕ್ತಪಡಿಸಿದರು.
‘ಜಿಲ್ಲೆಯು ಶೈಕ್ಷಣಿಕವಾಗಿ ಹಿಂದುಳಿದಿದ್ದು, ಇದನ್ನು ಸುಧಾರಿಸಲು ಪ್ರತಿಯೊಬ್ಬ ಶಿಕ್ಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು’ ಎಂದು ಮುಖ್ಯ ಶಿಕ್ಷಕ ಪಿ.ಎಸ್.ಗದ್ಯಾಳ ಅವರಿಗೆ ಸಲಹೆ ನೀಡಿದರು.
ಕಲಿತ ಶಾಲೆಗೆ ಭೇಟಿ: ನಂತರ ತಾವು 5ನೇ ತರಗತಿ ಓದಿದ ಘೋಣಸಗಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಬಿಸಿಯೂಟ ಸೇವಿಸಿದರು.
‘ನಮ್ಮ ತಂದೆ ಇದೇ ಭಾಗದಲ್ಲಿ ಶಿಕ್ಷಕರಾಗಿದ್ದರಿಂದ ನನ್ನನ್ನು ಈ ಶಾಲೆಗೆ ಸೇರಿಸಿದ್ದರು. ಈ ಶಾಲೆಯಲ್ಲಿ 5ನೇ ತರಗತಿ ಕಲಿತು, ನಂತರ ಸೈನಿಕ ಶಾಲೆಗೆ ಸೇರಿದೆ. ನೀವು ಕೂಡ ಉತ್ತಮ ಶಿಕ್ಷಣವನ್ನು ಪಡೆದು, ನನಗಿಂತಲೂ ಉನ್ನತ ಹುದ್ದೆಯನ್ನು ಅಲಂಕರಿಸಬೇಕು’ ಎಂದು ಮಕ್ಕಳಿಗೆ ಶುಭ ಹಾರೈಸಿದರು.
ವಿಜಯಪುರ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎನ್.ಹುರಳಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.