ADVERTISEMENT

ವಿಜಯಪುರ: ಹಿರಿಯ ಸಾಹಿತಿ ಈಶ್ವರಚಂದ್ರ ಚಿಂತಾಮಣಿ ನಿಧನ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 2:59 IST
Last Updated 9 ಆಗಸ್ಟ್ 2021, 2:59 IST
ಹಿರಿಯ ಸಾಹಿತಿ ಈಶ್ವರಚಂದ್ರ ಚಿಂತಾಮಣಿ
ಹಿರಿಯ ಸಾಹಿತಿ ಈಶ್ವರಚಂದ್ರ ಚಿಂತಾಮಣಿ   

ವಿಜಯಪುರ: ಶ್ರೇಷ್ಠ ಶಿಕ್ಷಕ ರಾಷ್ಟ್ರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ ಹಿರಿಯ ಸಾಹಿತಿ ಈಶ್ವರಚಂದ್ರ ಚಿಂತಾಮಣಿ (96) ಸೋಮವಾರ ಬೆಳಿಗ್ಗೆ ನಿಧನರಾದರು.

ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ನಗರದಲ್ಲಿ ಇರುವ ತಮ್ಮ ಮನೆಯಲ್ಲಿ ಬೆಳಗಿನ ಜಾವ 3 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.

ಅವರಿಗೆ ಪತ್ನಿ ಹಾಗೂ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ‌ ಕನ್ನಡ ವಿಭಾಗದ ಡೀನ್ ಡಾ.ಮಹೇಶ ಚಿಂತಾಮಣಿ ಸೇರಿ ಇಬ್ಬರು ಪುತ್ರರು, ಮೂವರು ಪುತ್ರಿಯರು ಇದ್ದಾರೆ.

ADVERTISEMENT

ಹಲಸಂಗಿ ಗೆಳೆಯರ ಬಳಗದ ಸದಸ್ಯರಾಗಿದ್ದ ಈಶ್ವರಚಂದ್ರ ಚಿಂತಾಮಣಿ ಅವರು, ಜಾನಪದ ಸಂಶೋಧನೆ, ಸಂಗ್ರಹ, ವಿಶೇಷವಾಗಿ ಮಕ್ಕಳ ಸಾಹಿತ್ಯದ ವೈವಿಧ್ಯಮಯ ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ.

ರಾಜ್ಯದ ನವ ಸಾಕ್ಷರರಿಗಾಗಿ ಇವರು ರಚಿಸಿದ ಕಥೆಗಳು, ನಾಟಕಗಳು ಪಠ್ಯವಾಗಿದ್ದು, ರಾಜ್ಯದ ಬಹುತೇಕ ಎಲ್ಲ ಆಕಾಶವಾಣಿ ಕೇಂದ್ರಗಳಲ್ಲಿ ಪ್ರಸಾರವಾಗಿವೆ.

ಕಳೆದ ಮೂರು ವರ್ಷದ ಹಿಂದೆ ಕೇಂದ್ರ ಸರ್ಕಾರದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ರಾಷ್ಟ್ರೀಯ ವಯೋಶ್ರೇಷ್ಠ ಪ್ರಶಸ್ತಿಗೂ ಚಿಂತಾಮಣಿ ಅವರು ಭಾಜನರಾಗಿದ್ದರು.

ಮೃತ ಈಶ್ವರಚಂದ್ರ ಚಿಂತಾಮಣಿ ಅವರು ವೈದ್ಯಕೀಯ ಸಂಶೋಧನೆಗಾಗಿ ವಿಜಯಪುರದ ಬಿಎಲ್ ಡಿಇ ಸಂಸ್ಥೆಯ ಬಿ.ಎಂ.ಪಾಟೀಲ ವೈದ್ಯಕೀಯ ಸಂಶೋಧನಾ ಕಾಲೇಜಿಗೆ ತಮ್ಮ ದೇಹ ದಾನದ ವಾಗ್ದಾನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಇಚ್ಛಾನುಸಾರ ದೇಹವನ್ನು ಸೋಮವಾರ ಬೆಳಿಗ್ಗೆ 11 ಕ್ಕೆ ವೈದ್ಯಕೀಯ ಕಾಲೇಜಿಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ಅವರ ಪುತ್ರ ಡಾ.ಮಹೇಶ ಚಿಂತಾಮಣಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.