ADVERTISEMENT

ವಿಜಯಪುರ: ಹೈದರ್‌ ನದಾಫ್‌ ಹತ್ಯೆ ಆರೋಪಿಯ ಅಳಿಯ ಶೋಯಬ್‌ ಮೇಲೆ ಶೂಟೌಟ್

ಶೋಯಬ್‌ ಕಕ್ಕಳಮೇಲಿ ಮೇಲೆ ಶೂಟೌಟ್

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2023, 14:46 IST
Last Updated 10 ನವೆಂಬರ್ 2023, 14:46 IST
<div class="paragraphs"><p>ಶೋಯಬ್‌ ಕಕ್ಕಳಮೇಲಿ ಮೇಲೆ ಶೂಟೌಟ್</p></div>

ಶೋಯಬ್‌ ಕಕ್ಕಳಮೇಲಿ ಮೇಲೆ ಶೂಟೌಟ್

   

ವಿಜಯಪುರ: ಗೋಳಗುಮ್ಮಟ ಪೊಲೀಸ್ ಠಾಣೆ ವ್ಯಾಪ್ತಿಯ ವಡ್ಡರ ಒಣಿಯಲ್ಲಿ ಶುಕ್ರವಾರ ಸಂಜೆ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ, ಪರಾರಿಯಾಗಿದ್ದಾರೆ.

ಘಟನೆಯಲ್ಲಿ ಶೋಯಬ್‌ ಕಕ್ಕಳಮೇಲಿ ಎಂಬುವವರ ಕಿವಿಗೆ ಗುಂಡು ತಾಗಿದೆ. ತೀವ್ರವಾಗಿ ಗಾಯಗೊಂಡಿರುವ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಮೂರು ಬೈಕುಗಳಲ್ಲಿ ಬಂದು ದುಷ್ಕರ್ಮಿಗಳು ಸ್ನೇಹಿತರೊಂದಿಗೆ ಹೋಗುತ್ತಿದ್ದ ಶೋಯಬ್‌ ಕಕ್ಕಳಮೇಲಿ ಮೇಲೆ ಎರಡು ಸುತ್ತು ಗುಂಡಿನ ದಾಳಿ ನಡೆಸಿ, ಬಳಿಕ ಸ್ಥಳದಲ್ಲೇ ಬೈಕುಗಳನ್ನು ಬಿಟ್ಟು ಪರಾರಿಯಾಗಿದ್ದಾರೆ.

ಮೇ 6ರಂದು ಮಹಾನಗರ ಪಾಲಿಕೆ ಸದಸ್ಯೆ ನಿಶಾತಾ ನದಾಫ್ ಅವರ ಪತಿ ಹೈದರ್‌ ನದಾಫ್‌ ಎಂಬುವವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಹೈದರ್‌ ಸಹಚರರು ಇದೀಗ ಪ್ರತಿಕಾರವಾಗಿ ಈ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

‘ಹೈದರ್‌ ನದಾಫ್‌ ಸಹೋದರ ಮೊಹಮ್ಮದ್ ನದಾಫ್ ಹಾಗೂ ಚಾರ್ಲೆ ಸಮೀರ್ ಗುಂಡಿನ ದಾಳಿ ಮಾಡಿದ್ದಾರೆ‘ ಎಂದು ಗಾಯಗೊಂಡಿರುವ ಶೊಯೇಬ್ ಕಕ್ಕಳಮೇಲಿ ಜೊತೆಗಿದ್ದ ಅಮನ್‌ವುಲ್ಲಾ ಲೋಣಿ ಪೊಲೀಸರ ಬಳಿ ಹೇಳಿಕೆ ನೀಡಿದ್ದಾನೆ.

ಗುಂಡಿನ ದಾಳಿಯಲ್ಲಿ ಗಾಯಗೊಂಡಿರುವ ಶೋಯಬ್‌ ಕಕ್ಕಳಮೇಲಿ ಅವರು ಹೈದರ್‌ ನದಾಫ್‌ ಹತ್ಯೆಯ ಮುಖ್ಯ ಆರೋಪಿಯಾದ ಶೇಕ್‍ ಅಹ್ಮದ ಮೋದಿ ಅಳಿಯನಾಗಿದ್ದಾನೆ.

ಹೈದರ್‌ ನದಾಫ್‌ ಹತ್ಯೆ ಪ್ರಕರಣದಲ್ಲಿ ಶೇಕ್‍ ಅಹ್ಮದ ಮೋದಿ ಸಹಿತ ಏಳು ಆರೋಪಿಗಳ ಬಂಧನವಾಗಿತ್ತು. ಈ‌ ಪೈಕಿ ನಾಲ್ವರು ಜಾಮೀನಿನ ಮೇಲೆ ಹೊರ ಬಂದಿದ್ದಾರೆ. 

ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಸೋನಾವಣೆ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್‌ ಭದ್ರತೆ ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.