ADVERTISEMENT

ಶರಣರ ಬದುಕು ಮರಣದಲ್ಲಿ ಅನಾವರಣ

ಸಿದ್ಧೇಶ್ವರ ಶ್ರೀಗಳ ಇಚ್ಛೆಯಂತೆ ಅಗ್ನಿಸ್ಪರ್ಶ l ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಬಂದ ಭಕ್ತರು

ಬಸವರಾಜ ಸಂಪಳ್ಳಿ
Published 3 ಜನವರಿ 2023, 22:38 IST
Last Updated 3 ಜನವರಿ 2023, 22:38 IST
ನಡೆದಾಟ ನಿಲ್ಲಿಸಿದ ದೇವರಿಗೆ ಪುಟಾಣಿಯಿಂದ ಮುತ್ತಿನ ನಮನ – ಚಿತ್ರ: ರಾಜು ಢವಳಗಿ
ನಡೆದಾಟ ನಿಲ್ಲಿಸಿದ ದೇವರಿಗೆ ಪುಟಾಣಿಯಿಂದ ಮುತ್ತಿನ ನಮನ – ಚಿತ್ರ: ರಾಜು ಢವಳಗಿ   

ವಿಜಯಪುರ: ‘ಶರಣರ ಬದುಕನ್ನು ಮರಣದಲ್ಲಿ ಕಾಣು’ ಎನ್ನುವ ಮಾತು ಮಂಗಳವಾರ ನಡೆದ ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳ ಅಂತಿಮ ದರ್ಶನ, ಅಂತ್ಯ ಸಂಸ್ಕಾರದಲ್ಲಿ ಅಕ್ಷರಶಃ ನಿಜವಾಯಿತು.

ಶ್ರೀಗಳ ಪ್ರವಚನವನ್ನು ಆಲಿಸಿದ್ದ ಅಪಾರ ಸಂಖ್ಯೆಯ ಜನರು ಅವರ ಅಂತಿಮ ದರ್ಶನ ಪಡೆದರು. ಕರ್ನಾಟಕ ಮಾತ್ರವಲ್ಲದೇ ನೆರೆಯ ಮಹಾರಾಷ್ಟ್ರ, ತೆಲಂಗಾಣ, ಗೋವಾ ರಾಜ್ಯಗಳಿಂದಲೂ ಸಹಸ್ರಾರು ಜನರು ಬಂದು ನಡೆದಾಡುವ ದೇವರಿಗೆ ಅಂತಿಮ ನಮನ ಸಲ್ಲಿಸಿ, ಭಾರದ ಹೃದಯದಿಂದ ವಿದಾಯ ಹೇಳಿದರು.

ಶ್ರೀಗಳು ಸರಿಯಾಗಿ 45 ನಿಮಿಷ ಪ್ರವಚನ ನೀಡುತ್ತಿದ್ದರು. ಆ ವೇಳೆ ನಿಶ್ಶಬ್ದ ಆವರಿಸಿರುತ್ತಿತ್ತು. ಆದರೆ, ಮಂಗಳವಾರ ಸೈನಿಕ ಶಾಲೆಯ ವಿಶಾಲವಾದ ಆವರಣದಲ್ಲಿ ಪ್ರವಾಹದೋಪಾದಿಯಲ್ಲಿ ತಮ್ಮ ಬಳಿಗೆ ಹರಿದು ಬಂದ ಭಕ್ತರು, ಮಠಾಧೀಶರು, ಜನಪ್ರತಿನಿಧಿಗಳ ಮಾತುಗಳನ್ನು ಶ್ರೀಗಳು ಮೌನದಿಂದ ಆಲಿಸುತ್ತಿದ್ದಂತೆ ಭಾಸವಾಯಿತು.

ADVERTISEMENT

ಸದಾಕಾಲ ಶ್ವೇತ ವಸ್ತ್ರಧಾರಿಯಾಗಿರುತ್ತಿದ್ದ ಸಿದ್ಧೇಶ್ವರ ಶ್ರೀಗಳ ಅಂತಿಮ ದಿನದಂದೂ ಶುಭ್ರ, ಶ್ವೇತಧಾರಿಯಾಗಿ ಕಂಗೊಳಿಸುತ್ತಿದ್ದರು. ಗೌರವಾರ್ಥ ತ್ರಿವರ್ಣ ಧ್ವಜವನ್ನು ಶ್ರೀಗಳ ಪಾರ್ಥಿವ ಶರೀರ ಮುಂದೆ ಹಾಸಿಡಲಾಗಿತ್ತು.

ಶ್ರೀಗಳ ಪಾರ್ಥಿವ ಶರೀರವನ್ನು ದರ್ಶನಕ್ಕೆ ಇಡಲಾಗಿದ್ದ ವೇದಿಕೆ ಮೇಲೆ ಮಂತ್ರಿ, ಮಹೋದಯರ ನುಡಿ–ನಮನಗಳ ಜೊತೆಗೆ ದೂರದಿಂದಲೇ ಕೈಮುಗಿದು ನಿಂತ ಶ್ರೀಸಾಮಾನ್ಯರ ಅಂತರಂಗದ ಮಾತುಗಳು ಸಿದ್ಧೇಶ್ವರ ಶ್ರೀಗಳಿಗೆ ಅರ್ಪಿತವಾದವು.

ಲಕ್ಷೋಪಲಕ್ಷ ಸಂಖ್ಯೆಯ ಭಕ್ತರು...

ಸಿದ್ಧೇಶ್ವರರು ಅಸ್ತಂಗತರಾದ ಸುದ್ದಿ ತಿಳಿಯುತ್ತಲೇ ರಾಜ್ಯ, ನೆರೆ ರಾಜ್ಯದ ಹಾದಿಗಳೆಲ್ಲವೂ ವಿಜಯಪುರ ನಗರದತ್ತಲೇ ಮುಖ ಮಾಡಿರುವಂತೆ ಕಂಡುಬಂದಿತು. ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಬಂದಿದ್ದ ಭಕ್ತರ ಭಜನೆ, ಕೀರ್ತನೆ, ಜಯಘೋಷಗಳು ಗುಮ್ಮಟ ನಗರಿಯಲ್ಲಿ ಪ್ರತಿಧ್ವನಿಸಿದವು.

ಜ್ಞಾನ ಯೋಗಾಶ್ರಮದತ್ತ ಸೋಮವಾರ ರಾತ್ರಿಯಿಂದಲೇ ಬರತೊಡಗಿದ್ದ ಜನ, ವಾಹನಗಳು ಮಂಗಳವಾರ ರಾತ್ರಿವರೆಗೂ ಬರುತ್ತಲೇ ಇದ್ದವು. ಎಷ್ಟೆಂದು ಅವುಗಳಿಗೆ ಲೆಕ್ಕ ಇಟ್ಟವರಿಲ್ಲ. ‘ಜ್ಞಾನ ಗುಮ್ಮಟ’ದ ಅಂತಿಮ ದರ್ಶನಕ್ಕೆ ಬಂದ ಭಕ್ತರಿಗೆ ಇಡೀ ನಗರವೇ ಅಡುಗೆ ಮಾಡಿ, ಉಣ ಬಡಿಸಿತು. ನೀರುಣಿಸಿ ದಾಹ ನೀಗಿತು.

ತಮ್ಮೂರ ‘ಮುಕುಟಮಣಿ’ಯನ್ನು ಕಳೆದುಕೊಂಡ ವಿಜಯಪುರ ನಗರ ದಿನವಿಡೀ ಮೌನಕ್ಕೆ ಶರಣಾಗಿತ್ತು. ಶ್ರೀಗಳ ಲಿಂಗೈಕ್ಯದ ಗೌರವಾರ್ಥ ಅಂಗಡಿ, ಮಳಿಗೆ, ಸಿನಿಮಾ ಮಂದಿರಗಳು ಸೇರಿದಂತೆ ಎಲ್ಲ ಬಗೆಯ ವ್ಯಾಪಾರ, ವಹಿವಾಟು ಸ್ಥಗಿತಗೊಳಿಸಿ, ಬಾಗಿಲು ಮುಚ್ಚಲಾಗಿತ್ತು.

ಅಂತಿಮಯಾತ್ರೆ ಮೆರವಣಿಗೆ:

ವಿಶೇಷವಾಗಿ ಸಿದ್ಧಪಡಿಸಲಾಗಿದ್ದ ತೆರದ ವಾಹನದಲ್ಲಿ ಸೈನಿಕ ಶಾಲಾವರಣದಿಂದ ಶಿವಾಜಿ ವೃತ್ತ, ಗಾಂಧಿ ಚೌಕಿ, ಸಿದ್ಧೇಶ್ವರ ದೇವಾಲಯ, ಬಿಎಲ್‌ಡಿಇ ಆಸ್ಪತ್ರೆ ಮಾರ್ಗವಾಗಿ ಜ್ಞಾನಯೋಗಾಶ್ರಮದವರೆಗೆ ಶ್ರೀಗಳ ಅಂತಿಮಯಾತ್ರೆ ನಡೆಯಿತು. ಯಾತ್ರೆ ಸಾಗಿದ ಮಾರ್ಗದುದ್ದಕ್ಕೂ ಮಹಿಳೆಯರು ರಂಗೋಲಿ ಬಿಡಿಸಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ಸಹಸ್ರಾರು ಜನರು ಭಕ್ತಿ,ಭಾವದಿಂದ ಕೈಮುಗಿದು ಕಳುಹಿಸಿಕೊಟ್ಟರು.

‘ಶರಣರಿಗೆ ಮರಣವೇ ಮಹಾನವಮಿ’ ಎಂಬಂತೆ ನಡೆದ ಶ್ರೀಗಳ ಅಂತಿಮ ದರ್ಶನ ಮತ್ತು ಯಾತ್ರೆ ಸಾಕ್ಷೀಕರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.