ADVERTISEMENT

ಸಿದ್ಧೇಶ್ವರ ಶ್ರೀಗಳ ಚಿತಾಭಸ್ಮ ಸಂಗ್ರಹ: ಕೂಡಲಸಂಗಮ, ಗೋಕರ್ಣದಲ್ಲಿ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2023, 13:09 IST
Last Updated 5 ಜನವರಿ 2023, 13:09 IST
ಸಿದ್ಧೇಶ್ವರ ಶ್ರೀಗಳ ಚಿತಾಭಸ್ಮ
ಸಿದ್ಧೇಶ್ವರ ಶ್ರೀಗಳ ಚಿತಾಭಸ್ಮ   

ವಿಜಯಪುರ: ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳ ಚಿತಾಭಸ್ಮವನ್ನು ಗುರುವಾರ ಮುಂಜಾನೆ ಎರಡು ಮಡಿಕೆಗಳಲ್ಲಿ ಸಂಗ್ರಹಿಸಲಾಯಿತು.

ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಶ್ರೀಗಳ ನೇತೃತ್ವದಲ್ಲಿ ಆಶ್ರಮದ ಶಿಷ್ಯ ವೃಂದವು ಚಿತಾಭಸ್ಮ ಸಂಗ್ರಹಕ್ಕೂ ಮೊದಲು ನೀರು, ಹಾಲು, ತುಪ್ಪು ಹಾಕಿ ಅಗ್ನಿಯನ್ನು ಆರಿಸಿ, ಆರತಿ ಬೆಳಗಿ ಚಿತಾಭಸ್ಮವನ್ನು ಸಂಗ್ರಹಿಸಿದರು.

ಶ್ರೀಗಳ ಅಂತಿಮ ಇಚ್ಛೆಯಿಂತೆ ಅವರ ಅಸ್ತಿ ಮತ್ತು ಚಿತಾಭಸ್ಮವನ್ನು ಬಾಗಲಕೋಟೆ ಜಿಲ್ಲೆಯ ಸುಕ್ಷೇತ್ರ ಕೂಡಲಸಂಗಮದಲ್ಲಿ ಕೃಷ್ಣೆಯಲ್ಲಿ ಹಾಗೂ ಉತ್ತರಕನ್ನಡ ಜಿಲ್ಲೆ ಗೋಕರ್ಣದ ಬಳಿ ಅರಬ್ಬಿ ಸಮುದ್ರದಲ್ಲಿ ಜನವರಿ 8ರಂದು ವಿಸರ್ಜನೆ ಮಾಡಲು ನಿರ್ಧರಿಸಲಾಗಿದೆ ಎಂದು ಆಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ತಿಳಿಸಿದರು.

ADVERTISEMENT

ಜನವರಿ 8 ರಂದು ಬೆಳಿಗ್ಗೆ 7ಕ್ಕೆ ಕೂಡಲಸಂಗಮದಲ್ಲಿ ಮೊದಲಿಗೆ ಅಸ್ತಿ ವಿಸರ್ಜನೆ ಮಾಡಿದ ಬಳಿಕ ಅಲ್ಲಿಂದ ಹೊರಟು ಗೋಕರ್ಣದಲ್ಲಿ ಅದೇ ದಿನ ಸಂಜೆ 5ಕ್ಕೆ ಸಮುದ್ರದಲ್ಲಿ ಪೂಜೆ ಸಲ್ಲಿಸಿ ವಿಸರ್ಜನೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಶ್ರೀಗಳ ಚಿತಾಭಸ್ಮವನ್ನು ಈ ಮೊದಲು ನದಿ, ಸಮುದ್ರ ಸೇರಿದಂತೆ ಐದು ಕಡೆ ವಿಸರ್ಜಿಸಲಾಗುವುದು ಎಂದು ಆಶ್ರಮದಿಂದ ತಿಳಿಸಲಾಗಿತ್ತು. ಆದರೆ, ಇದೀಗ ಎರಡು ಕಡೆ ಮಾತ್ರ ಚಿತಾಭಸ್ಮವನ್ನು ವಿಸರ್ಜಿಸಲು ನಿರ್ಧರಿಸಲಾಗಿದೆ ಎಂದರು.

ಭಕ್ತರ ದಂಡು:

ಸಿದ್ಧೇಶ್ವರ ಶ್ರೀಗಳು ಅಸ್ತಂಗತರಾಗಿ ಮೂರು ದಿನವಾದರೂ ಭಕ್ತರಲ್ಲಿ ಶ್ರೀಗಳ ಅಗಲಿಕೆಯ ನೋವು ಕಡಿಮೆಯಾಗಿಲ್ಲ. ಗುರುವಾರವೂ ಸಹಸ್ರಾರು ಭಕ್ತರು ತಂಡೋಪತಂಡವಾಗಿ ಆಶ್ರಮಕ್ಕೆ ಭೇಟಿ ನೀಡಿದರು. ಶ್ರೀಗಳ ಅಂತ್ಯಕ್ರಿಯೆ ನಡೆದ ಸ್ಥಳದ ದರ್ಶನ ಮಾಡಿ ನಮಿಸಿ, ಕಣ್ಣೀರಾದರು.

ಕೃತಜ್ಞತೆ:

ಶ್ರೀಗಳ ಅಂತಿಮ ಯಾತ್ರೆ, ಅಂತಿಮ ಸಂಸ್ಕಾರವನ್ನು ವ್ಯವಸ್ಥಿತವಾಗಿ, ಅಚ್ಚುಕಟ್ಟಾಗಿ ನೆರವೇರಲು ಸಹಕರಿಸಿದ ರಾಜ್ಯ ಸರ್ಕಾರ, ಜಿಲ್ಲಾಡಳಿತ, ಜನ ಪ್ರತಿನಿಧಿಗಳು, ಸಂಘ–ಸಂಸ್ಥೆಗಳಿಗೆ ಹಾಗೂ ಶ್ರೀಗಳ ದರ್ಶನ ಪಡೆಯಲು ದೂರದ ಸ್ಥಳಗಳಿಂದ ವಿಜಯಪುರಕ್ಕೆ ಬಂದಿದ್ದ ಭಕ್ತರಿಗೆ ಆಶ್ರಮದಿಂದ ಕೃತಜ್ಞತೆ ಸಲ್ಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.