
ತಿಕೋಟಾ: ವಿದ್ಯಾರ್ಥಿಗಳನ್ನು ಬೌದ್ಧಿಕ ಮತ್ತು ದೈಹಿಕವಾಗಿ ಸದೃಢರನ್ನಾಗಿ ಮಾಡಲು ಸಿ.ಎಸ್.ಆರ್ ಅನುದಾನಡಿ ಸ್ಮಾರ್ಟ್ ಕ್ಲಾಸ್ ಮತ್ತು ಕ್ರೀಡಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದರು.
ತಾಲ್ಲೂಕಿನ ಹೊನವಾಡ ಗ್ರಾಮದಲ್ಲಿ ಶುಕ್ರವಾರ ಉನ್ನತೀಕರಿಸಿದ ಸರಕಾರಿ ಪ್ರೌಢಶಾಲೆ ಪ್ರಾರಂಭೋತ್ಸವದ ಅಂಗವಾಗಿ 9ನೇ ತರಗತಿ ಉದ್ಘಾಟನೆ, ಸರಸ್ವತಿ ಪೂಜೆ ಹಾಗೂ ಸಿ.ಎಸ್.ಆರ್ ಅನುದಾನದಲ್ಲಿ ಶಾಲಾ ಮಕ್ಕಳಿಗಾಗಿ ಅಳವಡಿಸಿರುವ ಕ್ರೀಡಾ ಸಲಕರಣೆಗಳನ್ನು ವಿದ್ಯಾರ್ಥಿಗಳಿಂದ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.
‘ಇಲ್ಲಿನ ವಿದ್ಯಾರ್ಥಿಗಳು ಹೈಸ್ಕೂಲು ಶಿಕ್ಷಣಕ್ಕಾಗಿ ಅಲೆದಾಡುವುದನ್ನು ತಪ್ಪಿಸಲು ಮತ್ತು ಪೋಷಕರ ಕಾಳಜಿಗೆ ಸ್ಪಂದಿಸಲು ಸರಕಾರಿ ಪ್ರೌಢ ಶಾಲೆ ಪ್ರಾರಂಭಿಸಬೇಕು ಎಂಬ ಬಹುದಿನಗಳ ಬೇಡಿಕೆಯನ್ನು ಈಗ ಈಡೇರಿಸಿದ್ದೇನೆ. ವಿಶೇಷವಾಗಿ ವಿದ್ಯಾರ್ಥಿನಿಯರು ತಮ್ಮೂರಿನಲ್ಲಿಯೇ ಹೈಸ್ಕೂಲಿನಲ್ಲಿ ವಿದ್ಯಾಭ್ಯಾಸ ಮಾಡಲು ಇದರಿಂದ ಅನುಕೂಲವಾಗಲಿದೆ. ಮಕ್ಕಳಿಂದಲೇ ಈಗ ಉದ್ಘಾಟನೆ ಮಾಡಿಸಿದ್ದೇನೆ. ಕೆಂಪೆಗೌಡ ಅಂತಾರಾಷ್ಡ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಸಿ.ಎಸ್.ಆರ್ ಅನುದಾನ ಬಳಸಿ ಇಲ್ಲಿ ಶಾಲೆ ಉನ್ನತೀಕರಿಸಲಾಗಿದೆ. ಈ ಶಾಲೆಗೆ ಅಲ್ಲಿನ ಅಧಿಕಾರಿಗಳು ಭೇಟಿ ನೀಡಿದ್ದು, ಈ ಶಾಲೆಯನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲಿದ್ದಾರೆ. ಬಬಲೇಶ್ವರ ಮತಕ್ಷೇತ್ರದಲ್ಲಿ ಸಿ.ಎಸ್.ಆರ್ ಅನುದಾನದಡಿ ₹ 200 ಕೋಟಿ ವೆಚ್ಚದಲ್ಲಿ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಒಟ್ಟು 211 ಕೊಠಡಿಗಳನ್ನು ನಿರ್ಮಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, ಈವರೆಗೆ ₹ 53 ಕೋಟಿ ವೆಚ್ಚ ಮಾಡಲಾಗಿದೆ. ಹೊಂಡಾ ಕಂಪನಿಯವರು ಇಲ್ಲಿ ₹ 2.50 ಕೋಟಿ ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಿಸಲಿದ್ದಾರೆ’ ಎಂದು ಅವರು ತಿಳಿಸಿದರು.
ಮತಕ್ಷೇತ್ರದ ಎಲ್ಲ ಹೈಸ್ಕೂಲುಗಳ 10ನೇ ತರಗತಿಗಳಲ್ಲಿ ಈಗಾಗಲೇ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮಾಡಲಾಗಿದೆ. ಮುಂದಿನ ವರ್ಷ 8 ಮತ್ತು 9 ತರಗತಿಗಳಿಗೂ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಒದಗಿಸಲಾಗುವುದು ಎಂದು ಅವರು ತಿಳಿಸಿದರು.
ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಹೈನೋದ್ಯಮಕ್ಕೆ ಮತ್ತು ಆಹಾರ ಸಂಸ್ಕರಣೆ ಘಟಕ ಪ್ರಾರಂಭಿಸಲು ಸಹಾಯ ಮಾಡಲಾಗುತ್ತಿದೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.
ನಿವೃತ್ತ ಶಿಕ್ಷಕ ಅರವಿಂದ ಮಸಳಿ ಮಾತನಾಡಿ, ಗ್ರಾಮದ ವಿದ್ಯಾರ್ಥಿಗಳು ಹೈಸ್ಕೂಲು ಶಿಕ್ಷಣ ಪಡೆಯಲು ಪಕ್ಕದ ಊರಿಗೆ ತೆರಳಲು ಪರದಾಡುತ್ತಿದ್ದರು. ಸಚಿವರು ಈ ಶಾಲೆ ಉನ್ನತೀಕರಿಸಿ ವಿದ್ಯಾರ್ಥಿಗಳು ಮತ್ತು ಪೋಷಕರ ಸಮಸ್ಯೆ ಬಗೆಹರಿಸಿದ್ದಾರೆ ಎಂದರು.
ವಿಜಯಪುರ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಮಾತನಾಡಿ, ಸಚಿವರು ಗ್ರಾಮಸ್ಥರ ಬಹುದಿನಗಳ ಬೇಡಿಕೆಯನ್ನು ಈ ಶಾಲೆ ಉನ್ನತೀಕರಣ ಮಾಡುವ ಮೂಲಕ ಈಡೇರಿಸಿದ್ದಾರೆ. ರಾಜ್ಯದಲ್ಲಿಯೇ ಬಬಲೇಶ್ವರ ಮತಕ್ಷೇತ್ರದಲ್ಲಿ ಅತೀ ಹೆಚ್ಚು ಅಂದರೆ ಆರು ಪ್ರೌಢ ಶಾಲೆಗಳನ್ನು ಮಂಜೂರು ಮಾಡಲು ಕ್ರಮ ಕೈಗೊಂಡಿದ್ದಾರೆ. ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳ ಕನಸು ನನಸು ಮಾಡಲು ಶಿಕ್ಷಕರು ಮತ್ತು ಸಿಬ್ಬಂದಿ ಶ್ರಮಿಸಲಿದ್ದೇವೆ ಎಂದು ಹೇಳಿದರು.
ಇದೇ ವೇಳೆ ವಿದ್ಯಾರ್ಥಿಗಳು ಸಚಿವ ಎಂ. ಬಿ. ಪಾಟೀಲ ಅವರನ್ನು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ವಿಜಯಕುಮಾರ ಗುರಸಿದ್ದಯ್ಯ ಹಿರೇಮಠ, ತುಕಾರಾಮ ದಡಕೆ, ರಾಮನಗೌಡ ಸಿದ್ಧನಗೌಡ ಚಾವರ, ನಬಿರಸೂಲ ತೆಲಸಂಗ, ಸಿದ್ದು ಗೌಡನವರ, ಸಿದ್ದು ಬೆಳಗಾವಿ, ಯಾಕೂಬ ಜತ್ತಿ, ಶೈಲೇಂದ್ರ ಬಾವಿಮನಿ, ಸಾಬು ಖಂಡೇಕರ, ಮುರಿಗೆಪ್ಪ ಕೋಟಿ, ಶೋಭಾ ಶೀಳಿನ, ಸುರೇಶಗೌಡ ಪಾಟೀಲ, ಬಸವರಾಜ ನರಳೆ, ಸೀತಾರಾಮ ನರಳೆ, ದುಂಡಪ್ಪ ವಾಲಿಕಾರ, ಅಕ್ಬರ ತಿಕೋಟಿ, ತಹಶೀಲ್ದಾರ್ ಸುರೇಶ ಚವಲರ, ತಾ. ಪಂ. ಇಒ ಬಸವಂತರಾಯ ಬಿರಾದಾರ, ಸಿಪಿಐ ರಮೇಶ ಅವಜಿ, ಶೋಭಾ ಮುಂತಾದವರು ಉಪಸ್ಥಿತರಿದ್ದರು.
ಪ್ರಭು ಬಿರಾದಾರ ಕಾರ್ಯಕ್ರಮ ನಿರ್ವಹಿಸಿದರು. ಮೆಹತಾಬ್ ಕಾಗವಾಡ ಪ್ರಾರ್ಥಿಸಿದರು. ಎಸ್.ಎ.ಮಾಲಗಾರ ಸ್ವಾಗತಿಸಿದರು, ವಂದನಾರ್ಪಣೆಯನ್ನು ಎಚ್.ಎನ್. ಮೋಹಿತೆ ನೆರವೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.