ಇಂಡಿ: ಸಾಧುಸಂತರ ಸಂಗ, ವೇದಾಂತ, ಆಧ್ಯಾತ್ಮ ಸಾಧನೆಗಳಿಂದ ಹೃದಯ ಪರಿವರ್ತನೆ ಸಾಧ್ಯ ಎಂದು ಬೀದರದ ಚಿದಂಬರಾಶ್ರಮದ ಶಿವಕುಮಾರ ಸ್ವಾಮೀಜಿ ಹೇಳಿದರು.
ಅವರು ಶನಿವಾರ ಸಂಜೆ ತಾಲ್ಲೂಕಿನ ಆಳೂರ ಗ್ರಾಮದಲ್ಲಿ ನಡೆದ ಸಿದ್ಧಾರೂಢರ ನೂತನ ಮಂದಿರದ ಕಳಸಾರೋಹಣ ಹಾಗೂ ಲಕ್ಷ್ಮೀಬಾಯಿ ತಾಯಿಯವರ, ಪಾರ್ವತೆಮ್ಮನವರ ಮೂರ್ತಿ ಪ್ರಾಣಪ್ರತಿಷ್ಠಾಪನೆ ಹಾಗೂ 55ನೇ ವರ್ಷದ ಆಧ್ಯಾತ್ಮಿಕ ಪ್ರವಚನ ಮಹೋತ್ಸವದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಇಂಚಲ ಮಠದ ಪೀಠಾಧ್ಯಕ್ಷ ಸದ್ಗುರು ಶಿವಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿ, ಪರಮಾತ್ಮ ಮತ್ತು ನಮ್ಮ ಸಂಬಂಧದ ಸಾಕ್ಷಾತ್ಕಾರವೇ ಜ್ಞಾನ. ಆಧ್ಯಾತ್ಮದಿಂದ ಸ್ವರ್ಗ ಸೃಷ್ಟಿಸುವ ಸಾಮರ್ಥ್ಯ ಮಹಾತ್ಮನಲ್ಲಿದೆ ಎಂದು ಹೇಳಿದರು.
ಹುಬ್ಬಳ್ಳಿ-ವಿಜಯಪುರದ ಷಣ್ಮುಖಾರೂಢ ಮಠದ ಅಭಿನವ ಸಿದ್ಧಾರೂಢ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರಲ್ಲಿರುವ ಆತ್ಮಚೈತನ್ಯವು ಇಡೀ ಬ್ರಹ್ಮಾಂಡವನ್ನು ವ್ಯಾಪಿಸಿದೆ. ಕಣ್ಣಿಗೆ ಕಾಣುವುದೆಲ್ಲ ಸತ್ಯವಲ್ಲ. ಅದು ಸುಳ್ಳಾಗಿರಬಹುದು. ಈ ಮಿಥ್ಯೆಯನ್ನು ಅರಿತು ಆತ್ಮಚೈತನ್ಯದೆಡೆ ಹೊರಳುವುದೇ ಸತ್ಯದ ಹಾದಿ ಎಂದು ವೇದಾಂತ ಹೇಳುತ್ತದೆ. ಆತ್ಮಚೈತನ್ಯ ಸಾಮಾನ್ಯ ದೃಷ್ಟಿಗೆ ಕಾಣುವುದಿಲ್ಲ. ಅದನ್ನು ಕಾಣಲು ಗುರುಕೃಪೆ, ದೈವಕೃಪೆ ಬೇಕು. ಅದಕ್ಕೆ ಸಿದ್ಧಾರೂಢರಂಥ ಮಹಾತ್ಮರ ಮಾರ್ಗದರ್ಶನ ಅಗತ್ಯ ಎಂದರು.
ವಿಜಯಪುರದ ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ, ಕಲಬುಗಿಯ ಲಕ್ಷ್ಮೀದೇವಿ ತಾಯಿಯವರು, ಮುಚಳಂಬ ನಾಗಭೂಶಣ ಮಠದ ಪ್ರಷಣಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ವೇದಿಕೆಯಲ್ಲಿ ಬಂಥನಾಳದ ವೃಷಬಲಿಂಗ ಮಹಾಶಿವಯೋಗಿಗಳು, ಗೋಳಸಾರದ ಅಭಿನವ ಪುಂಡಲಿಂಗ ಮಹಾಸ್ವಾಮಿಗಳು, ಪಾನ ಮಂಗಳೂರಿನ ಶಿವಾನಂದ ಶಿವಾಚಾರ್ಯರು, ಬೀದರ ಶಶಿಕಲಾ ತಾಯಿಯವರು, ಆಳೂರ ಮಠದ ಶಂಕರಾನಂದ ಮಹಾಸ್ವಾಮಿಗಳು, ಶಿವೂರ ಗಂಗಾಧರ ಸ್ವಾಮಿಗಳು, ಸೋಲಾಪುರದ ಶಿವಪುತ್ರ ಮಹಾಸ್ವಾಮಿಗಳು, ಸೈದಾಪೂರದ ವಿದ್ಯಾದೇವಿ ತಾಯಿಯವರು, ಗದಗದ ಪರಿಪೂರ್ಣ ಆನಂದ ಭಾರತಿ ಶ್ರೀಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.