
ನಾಲತವಾಡ ಸಮೀಪ ರೈತರೊಬ್ಬರ ಜಮೀನಿಗೆ ಕುದುರೆಗಳ ಹಿಂಡು ನುಗ್ಗಿರುವುದು
ನಾಲತವಾಡ: ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಕುದುರೆಗಳ ಕಾಟ ಹೆಚ್ಚಾಗಿದ್ದು, ಸಂಚಾರಕ್ಕೆ ಸಮಸ್ಯೆಯಾಗಿದೆ. ಹಗಲಿನಲ್ಲಿ ರೈತರ ಹೊಲಗಳಿಗೆ ದಾಂಗುಡಿ ಇಡುವ ಕುದುರೆಗಳ ಹಿಂಡು, ಸಂಜೆ ಆಗುತ್ತಿದ್ದಂತೆ ರಸ್ತೆಗೆ ಅಡ್ಡಲಾಗಿ ಬರುತ್ತಿವೆ.
ನಾಲತವಾಡ ಸುತ್ತಮುತ್ತಲ ಹೊಲಗಳು ಸೇರಿದಂತೆ ಸಮೀಪದ ಅರಸನಾಳ, ಆಲೊರ, ಕೆಸಾಪೂರ, ಮುರಾಳ, ನಾಗರಬೆಟ್ಟ, ವೀರೇಶನಗರ, ನಾಗಬೇನಾಳ, ಆರೇಶಂಕರ ಸೇರಿದಂತೆ ನದಿದಂಡೆ ಗ್ರಾಮ ಬಿಜ್ಜೂರ, ಲೊಟಗೇರಿ, ಘಾಳಪೂಜಿ ಸೇರಿ ವಿವಿಧೆಡೆ ಬೀಡಾಡಿ ಕುದುರೆಗಳು ಹಿಂಡು ಹಿಂಡಾಗಿ ಲಗ್ಗೆ ಹಾಕುತ್ತಿವೆ. ಇದರಿಂದ ಬೆಳೆಗಳಿಗೆ ರಕ್ಷಣೆ ಇಲ್ಲದಂತಾಗಿದ್ದು, ತೊಗರಿ ಕಾಳುಕಟ್ಟುವ ಹಂತದಲ್ಲಿ ಕುದುರೆಗಳ ಹಾವಳಿಗೆ ರೈತರು ಬೇಸತ್ತಿದ್ದಾರೆ.
‘ಬಿತ್ತಿದ ಬೆಳೆ ವಿಪರೀತ ಮಳೆಯಿಂದ ಈಗಾಗಲೇ ಹಾಳಾಗಿದೆ. ಉಳಿದ ಅಲ್ಪಸ್ವಲ್ಪ ಬೆಳೆಯನ್ನೂ ಕುದುರೆಗಳಿಂದ ಕಾಪಾಡಿಕೊಳ್ಳಲು ಆಗದ ಸ್ಥಿತಿ ನಿರ್ಮಾಣವಾಗಿದೆ’ ಎನ್ನುತ್ತಾರೆ ರೈತ ನಿಂಗಪ್ಪ ಪೂಜಾರಿ.
ಒಣ ಬೇಸಾಯದ ಬೆಳೆಗಳಾದ ತೊಗರಿ, ಹತ್ತಿ, ಸಜ್ಜೆ ಮೆಣಸಿನಕಾಯಿ, ಹಿಂಗಾರು ಜೋಳ, ಕಡಲೆ, ಗೋದಿ ಸೇರಿ ಹಿಂಗಾರು ಬೆಳೆಗಳನ್ನು ಕುದುರೆ ಹಿಂಡು ಹಾಳು ಮಾಡುತ್ತಿವೆ. ಒಂದೊಂದು ಗುಂಪಿನಲ್ಲಿ 20ರಿಂದ 30 ಕುದುರೆಗಳಿವೆ. ರೈತರು ಅವುಗಳನ್ನು ಓಡಿಸಿದರೂ ಒಬ್ಬರ ಹೊಲದಿಂದ ಮತ್ತೊಬ್ಬರ ಹೊಲಕ್ಕೆ ಲಗ್ಗೆ ಹಾಕುತ್ತಿವೆ.
ಕಳೆದ ಎರಡು ತಿಂಗಳಿನಿಂದ ಬಿಡಾಡಿ ಕುದುರೆಗಳ ಹಾವಳಿಗೆ ರೈತರು ಬೆಳೆದ ಬೆಳೆಗಳನ್ನು ನಾಶ ಮಾಡುತ್ತಿದ್ದು, ಬೇಸತ್ತ ಬಹುತೇಕ ರೈತರು ಕುದುರೆಯನ್ನು ತಾವೇ ಸ್ವತಃ ಹಿಡಿದು ಕಟ್ಟಿ ಹಾಕಲು ಮುಂದಾದರೂ ಕೈಗೆ ಸಿಗುತ್ತಿಲ್ಲ. ಕುದುರೆ ಹಿಡಿಯುವಾಗ ಅನೇಕರು ಬಿದ್ದು, ಮತ್ತೆ ಕೆಲವರಿಗೆ ಕುದುರೆ ಕಚ್ಚಿ ಗಾಯಗಳಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.