ADVERTISEMENT

ಖಿನ್ನತೆಯಿಂದ ವಿದ್ಯಾರ್ಥಿನಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 15:50 IST
Last Updated 23 ಜನವರಿ 2023, 15:50 IST

ಮುದ್ದೇಬಿಹಾಳ: ತನಗೆ ಇಷ್ಟವಿಲ್ಲದ ವಿಷಯ ಓದುತ್ತಿರುವುದರಿಂದ ಖಿನ್ನತೆಗೆ ಒಳಗಾಗಿದ್ದಳೆನ್ನಲಾದ ವಿದ್ಯಾರ್ಥಿನಿಯೊಬ್ಬಳು ವಸತಿ ಶಾಲೆಯ ಸ್ನಾನದ ಕೋಣೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ನಾಗರಬೆಟ್ಟದ ಆಕ್ಸ್‌ಫರ್ಡ್‌ ಪಾಟೀಲ್ಸ್‌ ಪಿಯು ಸೈನ್ಸ್‌ ಕಾಲೇಜಿನಲ್ಲಿ ಸೋಮವಾರ ನಡೆದಿದೆ.

ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲ್ಲೂಕು ಕೋಮಲಾಪೂರದ ದ್ವಿತೀಯ ಪಿಯು ವಿದ್ಯಾರ್ಥಿನಿ ಪದ್ಮಾವತಿ ಸಂಜಯ ಮೇಟಿ (18) ಆತ್ಮಹತ್ಯೆಗೆ ಶರಣಾದ ದುರ್ದೈವಿ.

15 ದಿನಗಳಿಂದ ಶಾಲೆ ಬಿಟ್ಟಿದ್ದ ಪದ್ಮಾವತಿಯನ್ನು ಅವರ ಪಾಲಕರು ನಿನ್ನೆಯಷ್ಟೇ ಮರಳಿ ಶಾಲೆಗೆ ತಂದು ಸೇರಿಸಿದ್ದರು. ಸ್ನಾನಗೃಹದ ಒಳಗಿನಿಂದಲೇ ಚಿಲಕ ಹಾಕಿಕೊಂಡು ನಲ್ಲಿ ನೀರು ಚಾಲೂ ಇರಿಸಿ ಪ್ಲಾಸ್ಟಿಕ್ ವಯರ್ ನಿಂದ ನೇಣು ಬಿಗಿದುಕೊಂಡಿದ್ದಾಳೆ. ಕೆಲವು ಸಮಯ ಕಳೆದರೂ ಹೊರಗೆ ಬಾರದಿರುವುದನ್ನು ಕಂಡು ಕಿಟಕಿ ಮೂಲಕ ನೋಡಿದಾಗ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ.

ADVERTISEMENT

ಕೂಡಲೇ ಶಾಲೆಯ ಸಿಬ್ಬಂದಿ ಪೋಷಕರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಸಿಪಿಐ ಮಲ್ಲಿಕಾರ್ಜುನ ತುಳಸೀಗೇರಿ, ಎಚ್.ಬಿ.ಸುತಗುಂಡಾರ ನೇತೃತ್ವದ ತಂಡ ಘಟನಾ ಸ್ಥಳಕ್ಕೆ ಬಂದು ಬಾಗಿಲು ಒಡೆದು ಪರಿಶೀಲಿಸಿದಾಗ ವಿದ್ಯಾರ್ಥಿನಿ ಸಾವನ್ನಪ್ಪಿರುವುದು ದೃಢಪಟ್ಟಿದೆ.

ಪೊಲೀಸರು ತನಿಖೆ ನಡೆಸಿದ ಸಂದರ್ಭ ಆಕೆಯ ನೋಟ್‌ ಬುಕ್‌ನಲ್ಲಿ ಡೆತ್ ನೋಟ್ ಸಿಕ್ಕಿದೆ ಎನ್ನಲಾಗಿದೆ.

ತನಗೆ ವಿಜ್ಞಾನ ವಿಷಯ ಓದಲು ಇಷ್ಟವಿಲ್ಲ ಎಂದು ಬರೆದುಕೊಂಡಿದ್ದಾಳೆ. ಅಲ್ಲದೇ, ಪಾಲಕರ ಮನಸ್ಸು ನೋಯಿಸಲು ಇಷ್ಟವಿಲ್ಲದಿರುವುದನ್ನು ಬರೆದು, ತನ್ನನ್ನು ಕ್ಷಮಿಸುವಂತೆ ಕೋರಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ವಿದ್ಯಾರ್ಥಿನಿಯ ತಂದೆ ಸಂಜಯ ಕನಕಪ್ಪ ಮೇಟಿ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.