ವಿಜಯಪುರ: ‘2018-19ನೇ ಸಾಲಿನಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ವಾರದೊಳಗೆ ಬಾಕಿ ಹಣ ಪಾವತಿಸಿ ಪ್ರಗತಿ ವರದಿ ಸಲ್ಲಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಮಾಲೀಕರು, ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಕಬ್ಬಿನ ಬಾಕಿ ಪಾವತಿ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.
‘2018-19ನೇ ಸಾಲಿನ ಮಾತ್ರವಲ್ಲದೇ ಕಾರ್ಖಾನೆಗಳಿಂದ ಇನ್ನಾವುದೇ ಹಳೆಯ ಬಾಕಿ ಉಳಿಸಿಕೊಂಡಿದ್ದರೆ ಪಾವತಿಗೆ ಕ್ರಮ ಕೈಗೊಳ್ಳಬೇಕು. ನಿಗದಿತ ಸಮಯದೊಳಗೆ ಬಾಕಿ ಪಾವತಿಸದಿದ್ದರೆ ಶೀಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಶೇ 100ರಷ್ಟು ಬಾಕಿ ಪಾವತಿಸಿದ ಜಮಖಂಡಿ ಶುಗರ್ಸ್ ಮತ್ತು ಕೆಪಿಆರ್ ಶುಗರ್ಸ್ ಕಾರ್ಖಾನೆಗಳಿಗೆ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸಿದ ಅವರು, ಜ್ಞಾನಯೋಗಿ ಶುಗರ್ಸ್, ಇಂಡಿಯನ್ ಶುಗರ್ಸ್, ನಂದಿ ಶುಗರ್ಸ್, ಮನಾಲಿ ಶುಗರ್ಸ್, ಬಸವೇಶ್ವರ ಶುಗರ್ಸ್, ಬಾಲಾಜಿ ಶುಗರ್ಸ್ ಮತ್ತು ಭೀಮಾಶಂಕರ ಶುಗರ್ಸ್ ಸೇರಿ ಏಳು ಕಾರ್ಖಾನೆಗಳಿಗೆ ವಾರದ ಗಡುವು ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.