ADVERTISEMENT

ಇಬ್ಬರ ಅಮಾನತು; ಮೂವರಿಗೆ ಷೋಕಾಸ್‌ ನೋಟಿಸ್‌

ಹೊರ್ತಿ ಸರ್ಕಾರಿ ಆಸ್ಪತ್ರೆ: ಡ್ರೆಸ್ಸಿಂಗ್‌ ದ್ರಾವಣದಲ್ಲಿ ‘ಇರುವೆ’ ಪ್ರಕರಣ

​ಪ್ರಜಾವಾಣಿ ವಾರ್ತೆ
Published 7 ಜುಲೈ 2018, 10:57 IST
Last Updated 7 ಜುಲೈ 2018, 10:57 IST

ವಿಜಯಪುರ:‘ಗಾಯಾಳುವಿಗೆ ಡ್ರೆಸ್ಸಿಂಗ್‌ ಮಾಡಲು ಬಳಸಿದ ದ್ರಾವಣದಲ್ಲಿ ಇರುವೆಗಳಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ನಿರ್ಲಕ್ಷ್ಯ ವಹಿಸಿದ ಹೊರ್ತಿ ಸರ್ಕಾರಿ ಆಸ್ಪತ್ರೆಯ ಇಬ್ಬರು ನೌಕರರನ್ನು ಅಮಾನತುಗೊಳಿಸಲಾಗಿದೆ. ಮೂವರಿಗೆ ಷೋಕಾಸ್‌ ನೋಟಿಸ್ ನೀಡಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜಕುಮಾರ ಯರಗಲ್ಲ ತಿಳಿಸಿದರು.

‘ಶುಕ್ರವಾರ ಈ ಘಟನೆ ನಡೆದ ಬೆನ್ನಿಗೆ ತಾಲ್ಲೂಕು ಆರೋಗ್ಯಾಧಿಕಾರಿ ಐ.ಎಸ್‌.ಧಾರವಾಡಕರ ಸ್ಥಳಕ್ಕೆ ಭೇಟಿ ನೀಡಿ, ತನಿಖೆ ನಡೆಸಿ ವರದಿ ಸಲ್ಲಿಸಿದ್ದರು. ಈ ವರದಿಯ ಆಧಾರದ ಮೇರೆಗೆ ಕರ್ತವ್ಯ ಲೋಪ ಎಸಗಿರುವ ಫಾರ್ಮಾಸಿಸ್ಟ್‌ ಸುರೇಶ ಜಾಧವ, ಡಿ ಗ್ರೂಪ್ ನೌಕರ ಪುಂಡಲೀಕ ಲಗಳಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ’ ಎಂದು ಶನಿವಾರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಆಸ್ಪತ್ರೆಯ ಪ್ರಭಾರ ವೈದ್ಯಾಧಿಕಾರಿ ಡಾ.ಜಾರ್ಜ್‌ ಅವರಿಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಷೋಕಾಸ್‌ ನೋಟಿಸ್‌ ನೀಡಲಾಗಿದೆ. ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆಯುಷ್‌ ವೈದ್ಯ ಅಶೋಕ ಕೋರಿ, ಸ್ಟಾಫ್‌ ನರ್ಸ್‌ ನಂದ ಕಲಾಲ ಅವರನ್ನು ವಜಾಗೊಳಿಸುವ ಸಂಬಂಧ ಈಗಾಗಲೇ ಷೋಕಾಸ್‌ ನೋಟಿಸ್‌ ನೀಡಿ, ವಜಾ ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದು ಡಿಎಚ್‌ಓ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.