ತಾಳಿಕೋಟೆ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲ್ಲೂಕ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮ ವಹಿಸುವಂತೆ ಒತ್ತಾಯಿಸಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ, ಶಾಸಕ ಅಪ್ಪಾಜಿ ನಾಡಗೌಡ ಅವರಿಗೆ ಎಪಿಜೆ ಅಬ್ದುಲ್ ಕಲಾಂ ಫೌಂಡೇಶನ್ ಪದಾಧಿಕಾರಿಗಳು ಬುಧವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಫೌಂಡೇಶನ್ ಅಧ್ಯಕ್ಷ ಮೊಹಮ್ಮದ್ ಶಫೀಕ ಇನಾಮದಾರ ಅವರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಹಲವು ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದು ಇವುಗಳ ಪರಿಹಾರಕ್ಕಾಗಿ ಆದಷ್ಟು ಬೇಗ ಕ್ರಮವಹಿಸುವಂತೆ ಮನವಿ ಮಾಡಿಕೊಂಡರು.
ಮನವಿ ಪತ್ರ ಸ್ವೀಕರಿಸಿ ಶಾಸಕ ಅಪ್ಪಾಜಿ ನಾಡಗೌಡರು ಮಾತನಾಡಿ, ತಾಳಿಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅತ್ಯಗತ್ಯವಾದ ಡಯಾಲಿಸಿಸ್ ಕೇಂದ್ರವನ್ನು ಕಳೆದ ವರ್ಷ ಆರಂಭಿಸಲು ಕ್ರಮವಹಿಸಿದ್ದೆ. ಇದರಿಂದ ಬಡವರಿಗೆ ಹೆಚ್ಚು ಅನುಕೂಲವಾಗಿದೆ.ಇದೇ ರೀತಿ ನಾಲತವಾಡದ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇತ್ತು ಅದನ್ನೂ ಸಹ ಸರಿಪಡಿಸಿದ್ದೇನೆ. ತಾಳಿಕೋಟೆ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲ್ಲೂಕ ಆಸ್ಪತ್ರೆಯನ್ನಾಗಿ ಉನ್ನತಿಕರಿಸಿದರೆ ಬಹುತೇಕ ಇಲ್ಲಿಯ ಸಮಸ್ಯೆಗಳು ಪರಿಹಾರ ಆಗಲು ಸಾಧ್ಯವಿದೆ. ಈಗಾಗಲೇ ನಾನು ಈ ವಿಷಯವನ್ನು ಆರೋಗ್ಯ ಸಚಿವರ ಗಮನಕ್ಕೆ ತಂದಿದ್ದೇನೆ ಈಗ ಇದನ್ನು ಮುಖ್ಯಮಂತ್ರಿಗಳ ಜೊತೆಯಲ್ಲಿ ಮಾತನಾಡಿ ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದರು.
ಅಂಬೇಡ್ಕರ್ ಸೇನೆ ತಾಲೂಕ ಅಧ್ಯಕ್ಷ ಗೋಪಾಲ ಕಟ್ಟಿಮನಿ, ಸಾಲಿಡಾರಿಟಿ ಯೂಥ್ ಮೂವಮೆಂಟ್ ಅಧ್ಯಕ್ಷ ಮೈನು ಮಕಾಂದಾರ, ಸದಸ್ಯ ಯಾಸೀನ ಬಾಗವಾನ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.