ADVERTISEMENT

ಮುದ್ದೇಬಿಹಾಳ: ಟಿಎಪಿಸಿಎಂಎಸ್ ಆಡಳಿತ ಮತ್ತೆ ಮನೋಹರ ಮೇಟಿ ‘ಕೈ’ಗೆ 

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 6:02 IST
Last Updated 28 ಅಕ್ಟೋಬರ್ 2025, 6:02 IST
ಮುದ್ದೇಬಿಹಾಳ ಪಟ್ಟಣದ ಟಿಎಪಿಸಿಎಂಎಸ್‌ನ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಮನೋಹರ ಮೇಟಿ, ಉಪಾಧ್ಯಕ್ಷರಾಗಿ ಚಿದಾನಂದ ಸೀತಿಮನಿ ಅವರು ಶಾಸಕ ಸಿ.ಎಸ್.ನಾಡಗೌಡ ಸಮ್ಮುಖದಲ್ಲಿ ವಿಜಯೋತ್ಸವ ಆಚರಿಸಿದರು
ಮುದ್ದೇಬಿಹಾಳ ಪಟ್ಟಣದ ಟಿಎಪಿಸಿಎಂಎಸ್‌ನ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಮನೋಹರ ಮೇಟಿ, ಉಪಾಧ್ಯಕ್ಷರಾಗಿ ಚಿದಾನಂದ ಸೀತಿಮನಿ ಅವರು ಶಾಸಕ ಸಿ.ಎಸ್.ನಾಡಗೌಡ ಸಮ್ಮುಖದಲ್ಲಿ ವಿಜಯೋತ್ಸವ ಆಚರಿಸಿದರು   

ಮುದ್ದೇಬಿಹಾಳ: ಇಲ್ಲಿನ ಟಿ.ಎ.ಪಿ.ಸಿ.ಎಂ.ಎಸ್ ಆಡಳಿತ ಮಂಡಳಿಗೆ ಎರಡನೇ ಬಾರಿಗೆ ಅಧ್ಯಕ್ಷರಾಗಿ ಮನೋಹರ ಮೇಟಿ ಅವಿರೋಧವಾಗಿ ಆಯ್ಕೆಯಾಗಿದ್ದು ಟಿಎಪಿಸಿಎಂಎಸ್‌ನಲ್ಲಿ ತಮ್ಮ ಹಿಡಿತ ಸಡಿಲಗೊಂಡಿಲ್ಲ ಎಂಬ ಸಂದೇಶವನ್ನು ತಮ್ಮ ವಿರೋಧಿಗಳಿಗೆ ರವಾನಿಸಿದ್ದಾರೆ.

ಪಟ್ಟಣದ ಏಪಿಎಂಸಿಯಲ್ಲಿರುವ ಸಂಘದ ಕಚೇರಿಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಲಾಯಿತು. ಅಧ್ಯಕ್ಷ ಸ್ಥಾನಕ್ಕೆ ಮನೋಹರ ಎಸ್. ಮೇಟಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚಿದಾನಂದ ಎಂ. ಸೀತಿಮನಿ ಎರಡೂ ಸ್ಥಾನಗಳಿಗೆ ತಲಾ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಆರ್.ಎನ್.ಆಳೂರ ಅವಿರೋಧ ಆಯ್ಕೆ ಘೋಷಣೆ ಮಾಡಿದರು.

ಅಧ್ಯಕ್ಷ ಸ್ಥಾನಕ್ಕೆ ಮುತ್ತಣ್ಣ ಮುತ್ತಣ್ಣವರ ಸೂಚಕರಾಗಿ, ನೀಲಕಂಠಗೌಡ ಗೌಡರ ಅನುಮೋದಕರಾಗಿ ಸಹಿ ಮಾಡಿದರು. ಉಪಾಧ್ಯಕ್ಷ ಸ್ಥಾನಕ್ಕೆ ಬಸವರಾಜ ಬಗಲಿ ಸೂಚಕರಾಗಿ, ಗುರಣ್ಣ ಹತ್ತೂರ ಅನುಮೋದಕರಾಗಿ ಸಹಿ ಮಾಡಿದರು. ನಿರ್ದೇಶಕರಾದ ಬಸವರಾಜ ಇಸ್ಲಾಂಪುರ, ಸುರೇಶ ಹಳೇಮನಿ, ಮಲ್ಲನಗೌಡ ಬಿರಾದಾರ, ಗುರುಲಿಂಗಪ್ಪ ಹಡ್ಲಗೇರಿ, ವನಮಾಲಾ ಮೇಟಿ, ಮಲ್ಲಮ್ಮ ಪಾಟೀಲ ಇದ್ದರು.

ADVERTISEMENT

ಚುನಾವಣಾ ಕಾರ್ಯಕ್ಕೆ ಸಹಾಯಕ ಚುನಾವಣಾಧಿಕಾರಿ ಸಹಕಾರ ಇಲಾಖೆಯ ಅಧಿಕಾರಿ ಸಂತೋಷ ಇಲಕಲ್, ವ್ಯವಸ್ಥಾಪಕ ವಿ.ಎಸ್. ಉತ್ನಾಳ, ಸಹಾಯಕ ವ್ಯವಸ್ಥಾಪಕ ಗುರುರಾಜ ಕೋನರೆಡ್ಡಿ, ಸಿಬ್ಬಂದಿ ಎಂ.ಎ. ಪಾಟೀಲ, ಎಸ್.ಬಿ. ಚಿನಿವಾರ, ಸವಿತಾ ಚೌಧರಿ ಕಾರ್ಯನಿರ್ವಹಿಸಿದರು.

ರಹಸ್ಯ ಬಿಟ್ಟುಕೊಡದ ನಾಡಗೌಡ : ಟಿಎಪಿಸಿಎಂಎಸ್‌ನಲ್ಲಿ ಅಧಿಕಾರ ಹಂಚಿಕೆ ಸೂತ್ರವೇನಾದರೂ ನಡೆದಿದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕ ನಾಡಗೌಡ, ‘ಸದ್ಯಕ್ಕೆ ಅಧ್ಯಕ್ಷರಾಗಿ ಮೇಟಿ, ಉಪಾಧ್ಯಕ್ಷರಾಗಿ ಸೀತಿಮನಿ ಆಯ್ಕೆಯಾಗಿದ್ದಾರೆ. ಇವರು ಹೇಗೆ ಕೆಲಸ ಮಾಡಲಿದ್ದಾರೆ ಎಂಬುದನ್ನು ಗಮನಿಸುತ್ತೇವೆ. ಇದು ರಾಜಕಾರಣ, ಇಲ್ಲಿ ಏನು ನಡೆಯುತ್ತದೆ ಎಂದು ಹೇಳಲಾಗದು. ಒಪ್ಪಂದ ಸೂತ್ರದ ಕುರಿತು ಚರ್ಚೆ ನಡೆಸಿದ್ದೇವೆ. ಈಗಲೇ ಏನೂ ಹೇಳಲಾಗದು’ ಎಂದು ಹೇಳಿದ ನಾಡಗೌಡ ಅಧಿಕಾರ ಹಂಚಿಕೆ ಸೂತ್ರವನ್ನು ಬಿಟ್ಟುಕೊಡಲಿಲ್ಲ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಮಾತನಾಡಿ, ಟಿಎಪಿಸಿಎಂಎಸ್‌ನಲ್ಲಿ ಶಾಸಕರ ನಿರ್ದೇಶನದಂತೆ ಕಾಂಗ್ರೆಸ್ ಪಕ್ಷದ ಬೆಂಬಲಿತರ ಕೈಗೆ ಅಧಿಕಾರ ಸಿಕ್ಕಿದೆ. ಮುಂಬರುವ ದಿನಗಳಲ್ಲಿ ರೈತರಿಗೆ ಅನುಕೂಲ ಒದಗಿಸುವ ಕಾರ್ಯ ಮಾಡಲಿ ಎಂದು ತಿಳಿಸಿದರು. ವಿಜಯೋತ್ಸವದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಮೇಟಿ, ಸೀತಿಮನಿ ಅಭಿಮಾನಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.