ವಿಜಯಪುರ: ಸೂಫಿ, ಸಂತರು ಮಾನವ ಕುಲವನ್ನು ಸೌಹಾರ್ದದಿಂದ ಬದುಕಲು ಸಂದೇಶ ನೀಡಿದ್ದಾರೆ ಎಂದು ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ರಾಜ್ಯ ಘಟಕದ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.
ಸೂಫಿ ಹಜರತ್ ಹಮ್ಜಾಹುಸೇನಿ ಲಾಠಿ ಉಸ್ತಾದ ಸಂಸ್ಥೆಯ ಆಶ್ರಯದಲ್ಲಿಏರ್ಪಡಿಸಿದ್ದ ‘ಸೂಫಿ ಸಂತರು; ಶಾಂತಿಗಾಗಿ ಶ್ರಮ’ ಎಂಬ ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಎಲ್ಲ ಧರ್ಮಗಳನ್ನು ಸಮಾನವಾಗಿ ಕಂಡು, ಇಸ್ಲಾಮಿನ ಮೌಲ್ಯಗಳನ್ನು ಸಾರುತ್ತಾ ಸೂಫಿ ಸಂತರು ವಿಶ್ವದಲ್ಲಿ ಶಾಂತಿ ಸ್ಥಾಪನೆಗೆ ಪ್ರಯತ್ನಿಸಿ ಜಯಶೀಲರಾದರು. ಧರ್ಮವನ್ನು ಮೀರಿ ಮಾನವೀಯತೆಗೆ ಪ್ರಾಧ್ಯಾನತೆ ನೀಡಿದರು. ಪ್ರಪಂಚವನ್ನು ತೊರೆದು ಜಗತ್ತಿಗಾಗಿ ಜೀವನವನ್ನು ಸಮರ್ಪಣೆ ಮಾಡಿ, ವಿಶ್ವ ಬಾಂಧತ್ವದ ರೂವಾರಿಗಳಾದರು. ಸೂಫಿ, ಸಂತರ, ಶರಣರ ಸಂದೇಶಗಳನ್ನು ನಾವೆಲ್ಲರೂ ಪರಿಪಾಲಿಸಬೇಕು ಎಂದರು.
ಚಿಂತಕ ಇಮಾಮ್ ನದಾಫ್ ಸಿಂದಗಿ ಮಾತನಾಡಿ, ಜಗತ್ತು ಮಾನವೀಯ ನೆಲೆಗಟ್ಟಿನ ಮೇಲೆ ಬದುಕುತ್ತಿದೆ. ಶಾಂತಿ, ಸೌಹಾರ್ದತೆ ಸೂಫಿ, ಸಂತರ, ಶರಣ ಉಸಿರಾಗಿತ್ತು ಎಂದು ಹೇಳಿದರು.
ಅಜ್ಞಾನಿಗಳು ಸಮಾಜದ ಸಾಮರಸ್ಯವನ್ನು ಕಲುಷಿತ ಮಾಡುವುದನ್ನು ತಡೆಗಟ್ಟುವಲ್ಲಿ ಸೂಫಿ, ಸಂತರ ತತ್ವ ಮತ್ತು ಆದರ್ಶಗಳು ಉಪಯುಕ್ತವಾಗಿವೆ. ವಿಶಾಲ ಮನೋಭಾವನೆ, ನಂಬಿಕೆಯ ಜೀವನ ಸೂಫಿ, ಸಂತರ ತತ್ವವಾಗಿತ್ತು. ದೇವರನ್ನು ಸ್ಮರಿಸುವ ಹಾಗೂ ಭಕ್ತಿಯಿಂದ ನಡೆದುಕೊಳ್ಳುವ ಸದ್ಗುಣ ಅವರಲ್ಲಿತ್ತು. ಆದ್ದರಿಂದಲೇ ಸಮಾಜದಲ್ಲಿ ಇಂದಿಗೂ ಸೌಹಾರ್ದ ಜೀವನ ನಡೆಸುತ್ತಿದ್ದೇವೆ ಎಂದರು.
ಮಹಾನಗರ ಪಾಲಿಕೆಯ ಮಾಜಿ ಸದಸ್ಯ ರೌಫ್ ಶೇಖ್, ಮುಖಂಡ ರಫೀಕ ಅಹ್ಮದ ಕಾಣೆ, ಹಜರತ್ ಇಮ್ರಾನ್ ಲಾಠಿ ಉಸ್ತಾದ, ಬಶೀರ ಅಹ್ಮದ್ ಲಾಠಿ ಉಸ್ತಾದ, ಅಸದುಲ್ಲಾ ಹುಸೇನಿ ಸಜ್ಜಾದೆ, ನಶೀನ್ ಖ್ವಾಜಾ ಅಮೀನ ದರ್ಗಾ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.