ವಿಜಯಪುರ: ‘ಹಿಂದುಳಿದ ವರ್ಗ 2ಎ, 2ಬಿಗೆ ಯಾವುದೇ ಹೊಸ ಸೇರ್ಪಡೆ ಮಾಡುವಂತಿಲ್ಲ. 2ಬಿಗೆ ಇರುವ ಶೇ 4ರಷ್ಟು ಮೀಸಲಾತಿಯನ್ನು ರದ್ದು ಮಾಡದೇ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂದು ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ ಹೆಗಡೆ ಅವರ ನಿರ್ದೇಶನ ಇದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
‘ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಬೇಡಿಕೆಗೆ ಸರ್ಕಾರದ ಮುಂದಿನ ಕ್ರಮ ಏನು?’ ಎಂಬ ಸುದ್ದಿಗಾರರ ಪ್ರಶ್ನೆಗೆ ವಿಜಯಪುರದಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ‘2ಎ ಮೀಸಲಾತಿ ಸಂಬಂಧ ಪಂಚಮಸಾಲಿ ಸಮಾಜದವರು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಬಳಿ ಹೋಗಬೇಕು. ಆಯೋಗವು ಪಂಚಮಸಾಲಿ ಸಮಾಜ ಹಿಂದುಳಿದ ವರ್ಗಗಳಿಗೆ ಸೇರ್ಪಡೆಯಾಗಲು ಅರ್ಹವಿದೆಯೇ ಅಥವಾ ಇಲ್ಲವೇ ಎಂಬುದನ್ನು ಸಮೀಕ್ಷೆ ಕೈಗೊಂಡು ಬಳಿಕ ಸರ್ಕಾರಕ್ಕೆ ಏನು ಶಿಫಾರಸು ಮಾಡಲಿದೆ ಎಂಬುದನ್ನು ನೋಡಬೇಕು’ ಎಂದರು.
ಟೋಪಿ ಹಾಕಿದ ಬಿಜೆಪಿ:
‘ಬಿಜೆಪಿಯವರು ಈ ಹಿಂದೆ ಮುಸ್ಲಿಮರಿಗೆ ಇದ್ದ ಶೇ 4ರ ಮೀಸಲಾತಿಯನ್ನು ರದ್ದುಗೊಳಿಸಿ, ಒಕ್ಕಲಿಗರಿಗೆ ಶೇ 2 ಮತ್ತು ಲಿಂಗಾಯತರಿಗೆ ಶೇ 2ರಷ್ಟು ಮೀಸಲಾತಿ ನೀಡಿ ಟೋಪಿ ಹಾಕಿದ್ದರು. ಇದನ್ನು ಪ್ರಶ್ನಿಸಿ ರಸೂಲ್ ಎಂಬುವರು ಕೋರ್ಟ್ ಮೆಟ್ಟಿಲೇರಿದ್ದರು. ಈ ವೇಳೆ ಹಿಂದಿನ ಬಿಜೆಪಿ ಸರ್ಕಾರವೇ ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಕೋರ್ಟ್ನಲ್ಲಿ ಒಪ್ಪಿಕೊಂಡಿದೆ’ ಎಂದರು.
ಕಲ್ಲು ಹೊಡೆದಿದ್ದಕ್ಕೆ ಸಾಕ್ಷಿ:
‘ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ಸಂದರ್ಭದಲ್ಲಿ ಪಂಚಮಸಾಲಿ ಸಮುದಾಯದ ಉದ್ರಿಕ್ತರು ಪೊಲೀಸರ ಮೇಲೆ ಕಲ್ಲು ಹೊಡೆದಿರುವುದಕ್ಕೆ ಮತ್ತು ಬ್ಯಾರಿಕೇಡ್ ತಳ್ಳಿ ಒಳಗೆ ನುಗ್ಗಿರುವುದಕ್ಕೆ ಸಾಕ್ಷಿಯಾಗಿ ಚಿತ್ರಗಳಿವೆ’ ಎಂದರು.
‘ಪ್ರತಿಭಟನಕಾರರು ಕಲ್ಲು ತೂರಿಲ್ಲ’ ಎಂಬ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆಯನ್ನು ತಳ್ಳಿ ಹಾಕಿದ ಅವರು, ‘ಪ್ರತಿಭಟನಕಾರರು ಕಲ್ಲು ತೂರದಿದ್ದರೆ 20ಕ್ಕೂ ಹೆಚ್ಚು ಪೊಲೀಸರಿಗೆ ಗಾಯ ಹೇಗಾಯಿತು? ಪೊಲೀಸರೇ ಕಲ್ಲು ಎಸೆದುಕೊಂಡಿದ್ದಾರೆಯೇ’ ಎಂದು ಪ್ರಶ್ನಿಸಿದರು.
ಕಣ್ಣು ಮುಚ್ಚಿ ಕೂರಲು ಆಗದು:
‘ಪಂಚಮಸಾಲಿ ಹೋರಾಟಗಾರರು ಟ್ರ್ಯಾಕ್ಟರ್ ಹೋರಾಟ ಮಾಡಲು ಪೊಲೀಸರು ಅನುಮತಿ ನೀಡಿರಲಿಲ್ಲ. ಅವರು ಕೋರ್ಟ್ ಮೊರೆ ಹೋಗಿದ್ದರು. ಹೋರಾಟವನ್ನು ಶಾಂತಿಯುತ, ಸಾರ್ವಜನಿಕರಿಗೆ ತೊಂದರೆ ಅಗದಂತೆ ನಡೆಸಲು ಕೋರ್ಟ್ ಸೂಚಿಸಿತ್ತು. ಆದರೆ, ಹೋರಾಟಗಾರರು ಕಾನೂನನ್ನು ಕೈಗೆ ತೆಗೆದುಕೊಳ್ಳಲು ಪ್ರಯತ್ನಿಸಿದರು. ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ನೋಡಿಕೊಂಡು ಸರ್ಕಾರ ಕಣ್ಣುಮುಚ್ಚಿ ಕೂರಲು ಸಾಧ್ಯವಿರಲಿಲ್ಲ’ ಎಂದರು.
ಸಂಧಾನಕ್ಕೆ ಕಳುಹಿಸಲಾಗಿತ್ತು:
‘ಮೂವರು ಸಚಿವರನ್ನು ಪ್ರತಿಭಟನಕಾರರ ಬಳಿಗೆ ಕಳುಹಿಸಲಾಗಿತ್ತು. ಆದರೆ, ಶ್ರೀಗಳು ಸೇರಿ ಯಾರೊಬ್ಬರೂ ಮಾತುಕತೆಗೆ ಬರಲಿಲ್ಲ’ ಎಂದು ತಿಳಿಸಿದರು.
‘ಮುಖ್ಯಮಂತ್ರಿಗಳು ಹೃದಯಹೀನರು, ಲಿಂಗಾಯತ ವಿರೋಧಿಗಳು’ ಎಂಬ ಜಯಮೃತ್ಯುಂಜಯ ಸ್ವಾಮೀಜಿ ಟೀಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಈ ಬಗ್ಗೆ ಜನರು ತೀರ್ಮಾನಿಸುತ್ತಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.