ದೇವರಹಿಪ್ಪರಗಿ: ಬಸವಣ್ಣನ ಸಮಕಾಲೀನ ಶರಣ ಮಡಿವಾಳ ಮಾಚಿದೇವ ಒಬ್ಬ ಆದರ್ಶ ವ್ಯಕ್ತಿ, ಅವರ ಪ್ರತಿಮೆ ಸ್ಥಾಪನೆ ಅತ್ಯಗತ್ಯ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ನೂತನವಾಗಿ ನಿರ್ಮಾಣಗೊಂಡ ವೀರಶರಣ ಮಡಿವಾಳ ಮಾಚಿದೇವ ಬಸ್ ನಿಲ್ದಾಣದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಮಡಿವಾಳ ಹೆಸರಲ್ಲಿ ರಾಜ್ಯದಲ್ಲಿ ಹಲವಾರು ಸ್ಥಳಗಳಿವೆ. ಇಂದು ಬಸ್ ನಿಲ್ದಾಣಕ್ಕೆ ಮಾಚಿದೇವರ ಹೆಸರು ನಾಮಕರಣಗೊಳಿಸುವಂತೆ ದೇವರಹಿಪ್ಪರಗಿ ಬಳಗ ಹಲವು ದಿನಗಳ ಹಿಂದೆಯೇ ನನ್ನನ್ನು ಭೇಟಿಯಾಗಿ ಮನವಿ ಮಾಡಿತ್ತು ಎಂದು ಹೇಳುತ್ತಾ, ರಾಜ್ಯದ ಜನತೆಗೆ ಬಸ್ಗಳ ಕೊರತೆ ಕಾಡುತ್ತಿದೆ. ಆದ್ದರಿಂದ ನೂತನವಾಗಿ 800 ಬಸ್ಗಳನ್ನು ಇಲಾಖೆಗೆ ನೀಡಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ ಶಾಸಕ ರಾಜುಗೌಡ ಪಾಟೀಲ (ಕುದರಿಸಾಲವಾಡಗಿ) ಮಾತನಾಡಿ, ಹಿಂದಿನ ಸರ್ಕಾರದ ಅವಧಿಯಲ್ಲಿಯೇ ಬಸ್ ನಿಲ್ದಾಣದ ಶಂಕುಸ್ಥಾಪನೆಯೊಂದಿಗೆ ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ಸಚಿವರು ಬಸ್ ನಿಲ್ದಾಣದ ಆವರಣದಲ್ಲಿ ಮಾಚಿದೇವರ ಪ್ರತಿಮೆ ಸ್ಥಾಪನೆಗೆ ಹಾಗೂ ಬಸ್ ಡಿಪೋ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಸಿಂದಗಿ ಪಟ್ಟಣದಿಂದ ಮೂವರು ಶಾಸಕರುಗಳಿಗೆ ಅನುಕೂಲವಾಗುವಂತೆ ಕಲ್ಯಾಣರಥ ಬಸ್ ಓಡಿಸಲು ವಿನಂತಿಸಿದರು.
ಕ.ಕ.ರ.ಸಾ. ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, 1.16 ಎಕರೆ ಜಾಗದಲ್ಲಿ ₹ 4.95 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಬಸ್ ನಿಲ್ದಾಣದಲ್ಲಿ 16 ಬಸ್ ನಿಲುಗಡೆಗಳಿವೆ. ನಿತ್ಯ 800 ಬಸ್ಗಳ ಓಡಾಟವಿದೆ ಎಂದರು.
ಸಾನಿಧ್ಯ ವಹಿಸಿದ್ದ ಸ್ಥಳೀಯ ಸದಯ್ಯನಮಠದ ವೀರಗಂಗಾಧರ ಶ್ರೀಗಳು ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಸಚಿವರು ದೇವರಹಿಪ್ಪರಗಿ ಗೆಳೆಯರ ಬಳಗದ ಸುರೇಶ ದೇಸಾಯಿ ಅವರನ್ನು ಸನ್ಮಾನಿಸಿದರು.
ನಾಗಠಾಣ ಕ್ಷೇತ್ರದ ಶಾಸಕ ವಿಠ್ಠಲ ಕಟಕಧೋಂಡ, ಇಂಡಿ ಉಪವಿಭಾಗಾಧಿಕಾರಿ ಅನುರಾಧ ವಸ್ತ್ರದ, ತಹಶೀಲ್ದಾರ್ ಪ್ರಕಾಶ ಸಿಂದಗಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ದೇವಣಗಾಂವ, ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಸಹಿತ ಸಾರಿಗೆ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಇದ್ದರು.
ಸಾರಿಗೆ ಇಲಾಖೆ ಅಧಿಕಾರಿಗಳು ಕಾರ್ಯಕ್ರಮವನ್ನು ಗೊಂದಲದ ಗೂಡಾಗಿ ಮಾಡಿದರು. ಆಮಂತ್ರಣ ಪತ್ರಿಕೆಯಲ್ಲಿ ಪಟ್ಟಣ ಪಂಚಾಯಿತಿ ಬದಲು ಪುರಸಭೆಯನ್ನಾಗಿ ಮುದ್ರಿಸಿ ಮೇಲ್ದರ್ಜೆಗೇರಿಸಿದ ಸಾರಿಗೆ ಇಲಾಖೆ ಅಧಿಕಾರಿಗಳು. ಆಮಂತ್ರಣ ಪತ್ರಿಕೆಯಲ್ಲಿ ತಹಶೀಲ್ದಾರ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಮುಖ್ಯಾಧಿಕಾರಿಗಳ ಹೆಸರೇ ಮಾಯ. ಸ್ಥಳೀಯರ ನಿರ್ಲಕ್ಷ್ಯ ಸಾರಿಗೆ ಅಧಿಕಾರಿಗಳಿಗೆ ಮಾತ್ರ ಮೀಸಲಾದ ಕಾರ್ಯಕ್ರಮ. ಬಸ್ ನಿಲ್ದಾಣ ನಿರ್ಮಾಣದ ರೂವಾರಿ ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರು ಅವರು ಕಾರ್ಯಕ್ರಮಕ್ಕೆ ಬಂದರೂ ಅವರನ್ನು ವೇದಿಕೆ ಮೇಲೆ ಕರೆಯಲಿಲ್ಲ. ಇದರಿಂದ ಅಸಮಾಧಾನಗೊಂಡ ಶಾಸಕರು ತೆರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.