ADVERTISEMENT

ಅಕಾಲಿಕ ಮಳೆ: ದ್ರಾಕ್ಷಿ ಬೆಳೆಗಾರರಿಗೆ ಆತಂಕ

ವಿಜಯಪುರ ಜಿಲ್ಲೆಯ ಹಲವೆಡೆ ಮೊದಲ ಮಳೆಯ ಸಿಂಚನ

ಪರಮೇಶ್ವರ ಎಸ್.ಜಿ.
Published 24 ಫೆಬ್ರುವರಿ 2026, 5:26 IST
Last Updated 24 ಫೆಬ್ರುವರಿ 2026, 5:26 IST
ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ನಿವರಗಿ ಗ್ರಾಮದ ರೈತರೊಬ್ಬರ ತೋಟದಲ್ಲಿ ಬಿರುಗಾಳಿಗೆ ದ್ರಾಕ್ಷಿ ಸಾಲು ನೆಲಕ್ಕುರುಳಿರುವದು.
ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ನಿವರಗಿ ಗ್ರಾಮದ ರೈತರೊಬ್ಬರ ತೋಟದಲ್ಲಿ ಬಿರುಗಾಳಿಗೆ ದ್ರಾಕ್ಷಿ ಸಾಲು ನೆಲಕ್ಕುರುಳಿರುವದು.   

ತಿಕೋಟಾ: ಉತ್ಕೃಷ್ಟ ರುಚಿಗೆ ಪ್ರಸಿದ್ಧವಾದ ದ್ರಾಕ್ಷಿ ಉತ್ಪಾದನೆಗೆ ಹೆಸರಾದ ವಿಜಯಪುರ ಜಿಲ್ಲೆಯ ದ್ರಾಕ್ಷಿ ಬೆಳೆಗಾರರಿಗೆ ದ್ರಾಕ್ಷಿ ಕೈಗೆಟಕುವುದರೊಳಗೆ ಹಲವು ಸಂಕಷ್ಟಗಳು ಎದುರಾಗುತ್ತಿವೆ. ಇನ್ನೇನು ದ್ರಾಕ್ಷಿ ಕಟಾವಣೆ ಮಾಡಿ ರ‍್ಯಾಕ್‌ನಲ್ಲಿ ಹಾಕಿ ಒಣದ್ರಾಕ್ಷಿ ತಯಾರಿ ನಡೆಸುವ ಹಂತಕ್ಕೆ ರೈತರು ಬಂದಿದ್ದಾರೆ.

ಎರಡ್ಮೂರು ದಿನಗಳಿಂದ ವಾತಾವರಣ ಏರುಪೇರಾಗುತ್ತಿದ್ದು, ಅಕಾಲಿಕ ಮಳೆಯು ಸುರiಯುವ ಸಂಭವವಿದೆ. ರೈತರು ಈಗ ದ್ರಾಕ್ಷಿ ಕಟಾವು ಮಾಡಿ ರ‍್ಯಾಕ್‌ನಲ್ಲಿ ಒಣದ್ರಾಕ್ಷಿ ತಯಾರಿಗೆ ಒಣಹಾಕಿದ್ದಾರೆ. ಮೋಡ ಕವಿದ ವಾತಾವರಣ ಜಿಟಿಜಿಟಿ ಮಳೆಯ ಆಗಮನದಿಂದ ಒಣದ್ರಾಕ್ಷಿ ಘಟಕಗಳಲ್ಲಿ ಹಾಕಿದ ದ್ರಾಕ್ಷಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ.

ಮಳೆ ಹನಿಗಳಿಂದ ರ‍್ಯಾಕ್‌ನಲ್ಲಿ ಹಾಕಿದ ಹಣ್ಣು ತೊಯ್ದರೆ ದರ ಕಡಿಮೆಯಾಗುತ್ತದೆ. ಸದ್ಯ ₹300 ರಿಂದ ₹400 ವರೆಗೆ ಒಣದ್ರಾಕ್ಷಿ ದರ ಇದೆ. ಬೆಳೆ ಹಾನಿಯಾದರೆ ದರ ಕುಸಿತದಿಂದ ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕುವಂತಾಗುತ್ತದೆ.

ADVERTISEMENT

ಬಿಸಿಲಿನ ತಾಪಮಾನ ಕಡಿಮೆಯಾದರೆ ಪಡದಲ್ಲಿರುವ ದ್ರಾಕ್ಷಿ ಗೊಣೆಗಳಲ್ಲಿ ಸಕ್ಕರೆ ಅಂಶ ಕಡಿಮೆಯಾಗುತ್ತದೆ. ಮೋಡ ಕವಿದ ವಾತಾವರಣ ನಿರ್ಮಾಣದಿಂದ ರುಚಿಕರವಾಗಿ ದ್ರಾಕ್ಷಿ ಉತ್ಪಾದನೆಯಾಗುವುದಿಲ್ಲ. ಸದ್ಯ ಕಳೆದ ವರ್ಷದಿಂದ ಉತ್ತಮ ದರ ಸಿಗುತ್ತಿದೆ. ಈ ಬಾರಿಯೂ ಮಾರುಕಟ್ಟೆಯಲ್ಲಿ ಉತ್ತಮ ದರವಿದೆ. ಸದ್ಯ ಅಕಾಲಿಕ ಮಳೆ ಬಂದರೆ ರೈತನ ಬದುಕು ಸಂಪೂರ್ಣ ನುಚ್ಚು ನೂರಾಗುತ್ತದೆ.

Quote - ಉತ್ತಮ ಬೆಳೆ ಇದೆ ಅಕಾಲಿಕ ಮಳೆಯಿಂದ ಒಣದ್ರಾಕ್ಷಿ ತಯಾರಿಸಲು ಹಾಕಿರುವ ದ್ರಾಕ್ಷಿ ತೊಯ್ದರೆ ಕಪ್ಪು ಬಣ್ಣಕ್ಕೆ ತಿರುಗಿ ದರ ಕಡಿಮೆಯಾಗುವ ಆತಂಕವಾಗಿದೆ ರವಿ ಬಾಗಲಕೋಟಿ ದ್ರಾಕ್ಷಿ ಬೆಳೆಗಾರ ಸೋಮದೇವರಹಟ್ಟಿ

‘ಬೆಳೆಗಾರರಿಗೆ ಹಾನಿಯಾದರೆ ಅಧಿಕಾರಿಗಳು ಕೂಡಲೇ ಸ್ಪಂದಿಸಲಿ’

‘ದ್ರಾಕ್ಷಿ ಕಟಾವಣೆ ಈಗ ಆರಂಭವಾಗಿದೆ. ಶೇ 30ರಷ್ಟು ದ್ರಾಕ್ಷಿ ಕಟಾವಣೆ ಮಾತ್ರ ಆಗಿದೆ. ಉಳಿದ ಶೇ 70ರಷ್ಟು ದ್ರಾಕ್ಷಿ ಪಡದಲ್ಲಿ ಕಟಾವಣೆ ಆಗಬೇಕಿದೆ. ಒಣದ್ರಾಕ್ಷಿ ಘಟಕದಲ್ಲಿ ಹಾಕಿದ ಕಾಯಿ ತೊಯ್ದರೆ ಕಪ್ಪು ಬಣ್ಣಕ್ಕೆ ತಿರುಗಿ ದರ ಕುಸಿಯುವ ಆತಂಕವಿದೆ. ಇನ್ನೂ ಪಡದಲ್ಲಿರುವ ಕಾಯಿಗೆ ಅಕಾಲಿಕ ಮಳೆ ಆಲಿಕಲ್ಲು ಮಳೆ ಬಿದ್ದರೆ ಕಾಯಿ ಒಡೆದು ಹಾಳಾಗಿ ಹೋಗುತ್ತದೆ. ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಈಗಾಗಲೇ ಮಳೆ ಆರಂಭವಾಗಿದೆ. ಜಿಲ್ಲೆಯ ದ್ರಾಕ್ಷಿ ಬೆಳೆಗಾರರಿಗೆ ಮಳೆಯಿಂದ ಹಾನಿಯಾದರೆ ಕೂಡಲೇ ಅಧಿಕಾರಿಗಳು ಭೇಟಿ ನೀಡಿ ಸ್ಪಂದಿಸಬೇಕು’ ಎಂದು ರಾಜ್ಯ ದ್ರಾಕ್ಷಿ ಬೇಳೆಗಾರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಅಭಯಕುಮಾರ ನಾಂದ್ರೇಕರ ‘ಪ್ರಜಾವಾಣಿ’ ಗೆ ತಿಳಿಸಿದರು. 

ವಿಜಯಪುರ ತಿಕೋಟಾದಲ್ಲಿ ವರ್ಷಧಾರೆ

ವಿಜಯಪುರ: ವಿಜಯಪುರ ನಗರ ತಿಕೋಟಾ ತಾಲ್ಲೂಕು ವ್ಯಾಪ್ತಿಯಲ್ಲಿ ಸೋಮವಾರ ಸಂಜೆ ಗುಡುಗು ಸಿಡಿಲಿನೊಂದಿಗೆ ವರ್ಷದ ಪ್ರಥಮ ಮಳೆಯಾಗಿದೆ. ಬೇಸಿಗೆ ಆರಂಭದಲ್ಲೇ ಬಿಸಿಲಿನಿಂದ ಬಸವಳಿದಿದ್ದ ಜಿಲ್ಲೆಗೆ ಮಳೆ ತಂಪು ನೀಡಿದೆ. ಎರಡು ದಿನಗಳಿಂದ ದಟ್ಟವಾದ ಮೋಡ ಕವಿದ ವಾತಾವರಣ ಇತ್ತು. ಇದೀಗ ಮಳೆಯಾಗಿರುವುದು ಖುಷಿಯ ಸಂಗತಿಯಾದರೂ ಅಕಾಲಿಕ ಮಳೆಯಿಂದ ಪ್ರಮುಖವಾಗಿ ಜಿಲ್ಲೆಯ ದ್ರಾಕ್ಷಿ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.