ವಿಜಯಪುರ: ದೇಶದ ನೂರು ಕೋಟಿ ಜನರು ಹಾಗೂ ನಮ್ಮ ರಾಜ್ಯದಲ್ಲಿ ಐದು ಕೋಟಿ ಜನರು ಲಸಿಕೆ ಹಾಕಿಸಿಕೊಂಡರೆ ಮಾತ್ರ ಕೋವಿಡ್ ಸೋಂಕಿನ ಮುಂದಿನ ಅಲೆಗಳಿಂದ ಮುಕ್ತರಾಗಲು ಸಾಧ್ಯ ಎಂದು ಶಾಸಕ ಎಂ.ಬಿ.ಪಾಟೀಲ್ ಅಭಿಪ್ರಾಯಪಟ್ಟರು.
ಬಬಲೇಶ್ವರ ತಾಲ್ಲೂಕಿನ ಕಾರಜೋಳ ಗ್ರಾಮದಲ್ಲಿ ₹ 25 ಲಕ್ಷ ಮೊತ್ತದಲ್ಲಿ ಸಮಾಜದ ಸಮುದಾಯ ಭವನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕಾಯಿಲೆ ಹರಡುವಿಕೆಯನ್ನು ತಡಗಟ್ಟಬೇಕೆಂದರೆ ನಾವೆಲ್ಲರೂ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ಅನಾಹುತಗಳಿಗೆ ನಾವೇ ಕಾರಣರಾಗುತ್ತೇವೆ ಎಂದರು.
ಮೊದಲನೇ ಅಲೆಗಿಂತ ಎರಡನೇಯ ಅಲೆಯು ಯುವಕರಿಗೆ ಹೆಚ್ಚು ಹಾನಿ ಉಂಟು ಮಾಡಿದ್ದು, ಮೂರನೇ ಅಲೆ ಮಕ್ಕಳಿಗೆ ಬರುವ ಸಾಧ್ಯತೆ ಇದೆ ಎಂದು ಕೆಲ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅದಕ್ಕಾಗಿ ನಾವೆಲ್ಲರೂ ಮುಂಜಾಗೃತವಾಗಿ ಸರ್ಕಾರ ರೂಪಿಸಿದ ಎಲ್ಲ ಸುರಕ್ಷಾ ಕ್ರಮಗಳನ್ನು ಪಾಲಿಸಿ, ಕೊರೊನಾ ಮುಕ್ತ ರಾಜ್ಯವನ್ನಾಗಿಸಲು ಪ್ರಯತ್ನಿಸೋಣ ಎಂದರು.
ಜಿ.ಪಂ ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ, ಜಿಲ್ಲಾ ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ, ವಿಜಯಪುರ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ವಿದ್ಯಾರಾಣಿ ತುಂಗಳ, ಕಾಂಗ್ರೆಸ್ ಮಹಿಳಾ ಘಟಕ ಪದಾಧಿಕಾರಿ ಶ್ರೀದೇವಿ ಉತ್ಸಾಲ್ಕರ, ಪಿಡಿಓ ಗೀತಾ ಕಲ್ಲವ್ವಗೋಳ, ಮುಖಂಡರಾದ ಪಾಂಡು ಜಾಧವ, ಪರಶುರಾಮ ಮಲಘಾಣ, ಭೀಮಶಿ ಆಸಂಗಿ, ಆನಂದ ನ್ಯಾಮಗೌಡ, ಅಖಂಡ ತಳೆವಾಡ, ಶಿವಯ್ಯ ಒಡೆಯರ, ದಶರಥ ಕಾರಜೋಳ, ಪೋಮು ಜಾಧವ ಉಪಸ್ಥಿತರಿದ್ದರು.
ಬಬಲೇಶ್ವರಕ್ಕೆ ಭೇಟಿ ನೀಡಿದ ಎಂ.ಬಿ.ಪಾಟೀಲ್, ವೈ ಜಂಕ್ಷನ್ ಮತ್ತು ಶಾಂತವೀರ ವೃತ್ತ, ಗಾಂಧಿ ವೃತ್ತದಿಂದ ಹ್ಯಾಳಕಟ್ಟಿವರೆಗೆ ಸಿಸಿ ರಸ್ತೆ ಕಾಮಗಾರಿ ಹಾಗೂ ಮಿನಿವಿಧಾನಸೌಧ ನಿವೇಶನದ ಪರಿವೀಕ್ಷಣೆ ಮಾಡಿದರು. ಬಬಲೇಶ್ವರದ ಪಟ್ಟಣ ಪಂಚಾಯ್ತಿ ನೂತನ ಕಾರ್ಯಾಲಯ ಉದ್ಘಾಟಿಸಿದರು.
ಮಮದಾಪುರದಲ್ಲಿ ₹ 50 ಲಕ್ಷ ವೆಚ್ಚದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. ₹ 1.6ಕೋಟಿ ವೆಚ್ಚದ ಹೊಸ ಜೈನಾಪುರ-ಹಳೆ ಬೆಳ್ಳುಬ್ಬಿ ವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಕಂಬಾಗಿ ಗ್ರಾಮದ ಸರ್ಕಾರಿ ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳ ಕೊಠಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.