ಬಸವನಬಾಗೇವಾಡಿ:‘ಪ್ರಾಮಾಣಿಕವಾಗಿ ಸತ್ಯ- ಶುದ್ಧಿಯಿಂದ ಬಸವಾದಿ ಶರಣರು ಕಾಯಕ ಮಾಡುತ್ತಿದ್ದರು. ಇದೇ ರೀತಿ ನಾವು ಸಹ ಕಾಯಕ ಮಾಡುವವರಾಗಬೇಕು’ ಎಂದು ಹಿರೇಆಸಂಗಿಯ ವೀರಬಸವದೇವರು ಹೇಳಿದರು.
ಪಟ್ಟಣದ ವಿರಕ್ತ ಮಠದಲ್ಲಿ ಶುಕ್ರವಾರ ಸಂಜೆ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ವಚನ ಚಿಂತನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಿಸ್ವಾರ್ಥ ಸೇವೆಯಿಂದ ಕಾಯಕ ಮಾಡಿದರೆ, ಅಂತಹವರಿಗೆ ಭಗವಂತ ಸದಾ ಒಳ್ಳೆಯದನ್ನು ಮಾಡುತ್ತಾನೆ. ಆಸೆ ಬಿಟ್ಟವರನ್ನು ಜಗತ್ತು ಸದಾ ಕಾಲವೂ ಸ್ಮರಿಸುತ್ತದೆ. ನಾವೆಲ್ಲರೂ ಸತ್ಯ ಶುದ್ಧ ಕಾಯಕ ಮಾಡಬೇಕು’ ಎಂದರು.
ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಣ್ಣ ಮರ್ತುರ ಮಾತನಾಡಿ, ‘ಶರಣರು ಕಾಯಕಕ್ಕೆ ಹೆಚ್ಚು ಮಹತ್ವ ನೀಡಿದ್ದರು. ಅವರು ಕಾಯಕ ಕಲಿಗಳಾಗಿದ್ದರು. ಅಹಂ ತೊರೆದು ಸೇವಾ ಮನೋಭಾವದಿಂದ ನಾವೆಲ್ಲರೂ ಕಾಯಕ ಮಾಡಬೇಕು’ ಎಂದರು.
ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಶ್ರಾಂತ ಶಿಕ್ಷಕ ಎಸ್.ಆರ್.ಹೂಗಾರ ಉಪಸ್ಥಿತರಿದ್ದರು. ಗೀತಾ ಘೋರ್ಪಡೆ ಪ್ರಾರ್ಥಿಸಿದರು. ಮಹಾಂತೇಶ ಸಂಗಮ ಸ್ವಾಗತಿಸಿದರು. ಬಸವರಾಜ ನಂದಿಹಾಳ ನಿರೂಪಿಸಿದರು. ಎಸ್.ಬಿ.ಬಶೆಟ್ಡಿ ಮಂಗಳಗೀತೆ ಹಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.