ಕೆಲವು ಜನರು ದೇವರ ದರ್ಶನಕ್ಕೆ ಹೋಗುತ್ತೇವೆಂದು ತೀರ್ಥಕ್ಷೇತ್ರಗಳನ್ನು ಸುತ್ತಿ ಸುತ್ತಿ ಬರುವರು. ಗಂಗಾ ಯಮುನಾ, ಸಿಂಧೂ, ತುಂಗಾ ಮುಂತಾದ ನೀರಿನಲ್ಲಿ ಮಿಂದು ಪಾಪ ನಿವಾರಣೆ ಮಾಡಿಕೊಳ್ಳುತ್ತೇವೆಂದು ಭಾವಿಸಿ ನದಿ, ಸರೋವರಗಳಲ್ಲಿ ಮುಳಗಿ ಬರುವರು. ಮತ್ತೆ ಕೆಲವರು ವನಗಳನ್ನು ಸೇರುವರು. ಗಿರಿಗಳ ತುತ್ತತುದಿ ಏರಿ ಅಲ್ಲಿ ನಿಂತು ಪ್ರಾರ್ಥಿಸುವರು. ತಪ್ಪಸು ಮಾಡುವರು, ಮತ್ತೆ ಕೆಲವರು ಉಪವಾಸ ವ್ರತ ಮಾಡಿ ತನುವನ್ನು ಸ್ವಯಂ ಕಷ್ಟಕ್ಕೆ ಒಳಪಡಿಸಿ ನಿತ್ಯ ನೇಮಗಳ ಮೂಲಕ ಸುಟ್ಟುಕೊಳ್ಳುವರು.
ಅಲ್ಲಮ ಪ್ರಭುಗಳು ತಮ್ಮ ವಚನದಲ್ಲಿ ‘ಸುತ್ತಿ ಸುತ್ತಿ ಬಂದಡಿಲ್ಲ, ಲಕ್ಷ ಗಂಗೆಯ ಮಿಂದಡಿಲ್ಲ, ತುತ್ತ ತುದಿಯ ಮೇರುಗಿರಿಯ ಮೆಟ್ಟಿ ಕೂಗಿದಡಿಲ್ಲ, ನಿತ್ಯ ನೇಮದಿಂದ ತನುವ ಮುಟ್ಟುಕೊಂಡಡಿಲ್ಲ, ನಿಚ್ಚಕ್ಕಿನ ಗಮನವಂದಂದಿಗೆ: ಅತ್ತಲಿತ್ತ ಹರಿವ ಮನವ ಚಿತ್ತನಲ್ಲಿ ನಿಲಿಸಬಲ್ಲಡೆ ಬಚ್ಚಬರಿಯ ಬೆಳಗು ಗುಹೇಶ್ವರ ಲಿಂಗವು..’ ಎಂದು ಹೇಳಿದ್ದಾರೆ.
ಚರ್ಮ ತೊಳೆದರೆ ಕರ್ಮಹೋದಿತೆ, ಮಾಡಬಾರದ ಪಾಪಗಳನ್ನು ಮಾಡಿ ನದಿಯಲ್ಲಿ ಮುಳುಗಿದರೆ ಕೇವಲ ಚರ್ಮದ ಮೇಲೆ ಅಂಟಿರುವ ಹೊಲಸು ಮಾತ್ರ ಹೋಗಬಹುದು, ಮಾಡಿದ ಪಾಪ ಹೋಗುವುದಿಲ್ಲ. ಅದಕ್ಕಾಗಿ ದೇವರು ಮನಸ್ಸು ಎನ್ನುವ ಅತ್ಯಂತ ಶಕ್ತಿಶಾಲಿ ಸಾಧನವನ್ನು ಕೊಟ್ಟಿದ್ದಾನೆ. ಅದು ಸದಾ ದೇವನನ್ನು ನೆನೆಯುವ ಸಾಮರ್ಥ್ಯವುಳ್ಳುದು. ಆದರೆ, ಸದಾ ಅತ್ತ ಇತ್ತ ಚಂಚಲತೆಯಿಂದ ಹರಿಯುತ್ತಿರುತ್ತದೆ. ಇಂಥ ಮನಸ್ಸನ್ನು ಚಿತ್ತದಲ್ಲಿ ಸ್ಥಿರವಾಗಿ ನಿಲ್ಲಲು ಸಾಧ್ಯವಾದರೆ ಪರಮಾತ್ಮನು ಇದೇ ಶರೀರದಲ್ಲೇಬಚ್ಚಬರಿಯ ಬೆಳಕಿನ ಸ್ವರೂಪದಲ್ಲಿ ತೋರುವನು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.