ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಲ್ಲಿ ಶನಿವಾರ ತಾಪಮಾನ 7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ನಾಲ್ಕು ದಿನಗಳಿಂದ ತಾಪಮಾನ ತೀವ್ರವಾಗಿ ಕುಸಿತವಾಗುತ್ತಿದ್ದು, ಶೀತಗಾಳಿ ಬೀಸುತ್ತಿದೆ. ಪರಿಣಾಮ ಸಂಜೆ 6 ಗಂಟೆಯಿಂದಲೇ ಚಳಿಯ ವಾತಾವರಣ ಆವರಿಸುತ್ತಿದ್ದು, ಬೆಳಿಗ್ಗೆ 9 ಗಂಟೆಯ ವರೆಗೂ ರಸ್ತೆಗಳಲ್ಲಿ ಜನ ಸಂಚಾರ ವಿರಳವಾಗಿದೆ. ಬೆಳಿಗ್ಗೆ–ಸಂಜೆ ವಾಯು ವಿಹಾರಕ್ಕೆ ತೆರಳುವವರ ಸಂಖ್ಯೆಯೂ ವಿರಳವಾಗಿದೆ.
ಚಳಿಗೆ ಜನ ತತ್ತರಿಸಿದ್ದು, ಮನೆಯಿಂದ ಹೊರಗೆ ಬರಲು ಅಂಜುತ್ತಿದ್ದಾರೆ. ಮಕ್ಕಳು, ವೃದ್ಧರ ಆರೋಗ್ಯದಲ್ಲಿ ಏರುಪೇರು ಉಂಟಾಗತೊಡಗಿದೆ. ಜ್ವರ, ಕೆಮ್ಮು, ಕಫ, ಶೀತ ಮತ್ತಿತರರ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ.
ರಾತ್ರಿ ವೇಳೆ ಕನಿಷ್ಠ ತಾಪಮಾನ, ಹಗಲು ಅತ್ಯಧಿಕ ಬಿಸಿಲು ಜನರನ್ನು ಹೈರಾಣಾಗಿಸಿದೆ. ಜನ ಬೆಚ್ಚಗಿನ ಉಡುಪು, ಬಿಸಿ ಬಿಸಿಯಾದ ಆಹಾರ ಪದಾರ್ಥಗಳ ಸೇವನೆಗೆ ಮೊರೆ ಹೋಗಿದ್ದಾರೆ. ಮೈನಡುಗಿಸುವ ಚಳಿಯು ಜಿಲ್ಲೆಯ ನಗರ, ಪಟ್ಟಣಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿ ಅದರಲ್ಲೂ ನದಿ, ಹೊಳೆ ದಂಡೆ ಪ್ರದೇಶದಲ್ಲಿ ಜನ ಜೀವನದಲ್ಲಿ ವ್ಯತ್ಯಾಸ ಉಂಟು ಮಾಡಿದೆ.
ಹವಾಮಾನ ಇಲಾಖೆಯೂ ಈಗಾಗಲೇ ಶೀತಗಾಳಿ ಬೀಸುವ ಮುನ್ನೆಚ್ಚರಿಕೆ ನೀಡಿದ್ದು, ಡಿಸೆಂಬರ್ 16ರ ವರೆಗೆ ಸಾಮಾನ್ಯ ತಾಪಮಾನಕ್ಕಿಂತ ಕನಿಷ್ಠ 4ರಿಂದ 6 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಲಿದ್ದು, ಜನರು ಜಾಗೃತಿ ವಹಿಸುವಂತೆ ಪ್ರಕಟಣೆಯಲ್ಲಿ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.