ವಿಜಯಪುರ: ದ್ರಾಕ್ಷಿಗೆ ಏಕರೂಪದ ಬೆಳೆವಿಮೆ ನೀಡಬೇಕು ಹಾಗೂ 2024–25ನೇ ಸಾಲಿನ ಬೆಳೆ ವಿಮೆ ತಕ್ಷಣ ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘದಿಂದ ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಬೆಂಗಳೂರಿನಲ್ಲಿ ವಿಮಾ ಕಂಪನಿ ಕಾರ್ಯಾಲಯ ಇರುವುದರಿಂದ ಈ ಭಾಗದ ದ್ರಾಕ್ಷಿ ಬೆಳೆಗಾರರ ಸಂಪರ್ಕಕ್ಕೆ ಅನಾನುಕೂಲವಾಗುತ್ತಿರುವುದರಿಂದ ವಿಮಾ ಕಂಪನಿ ಕಾರ್ಯಾಲಯವನ್ನು ವಿಜಯಪುರದಲ್ಲಿ ಆರಂಭಿಸುವಂತೆ ಬೆಳೆಗಾರರು ಆಗ್ರಹಿಸಿದರು.
ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವುದರಿಂದ ದ್ರಾಕ್ಷಿ ಬೆಳೆಗೆ ಹಾನಿಯಾಗಿದ್ದು, ಈ ವರ್ಷ ದ್ರಾಕ್ಷಿ ಬೆಳೆ ಸಂಪೂರ್ಣ ಕೈಕೊಡುವ ಸಾಧ್ಯತೆ ಇದ್ದು, ತಕ್ಷಣ ಕಂದಾಯ ಮತ್ತು ತೋಟಗಾರಿಕೆ ಇಲಾಖೆಯಿಂದ ಜಂಟಿ ಸಮೀಕ್ಷೆ ಕೈಗೊಂಡು ಹಾನಿ ಬಗ್ಗೆ ವಿಮಾ ಕಂಪನಿಗಳಿಗೆ ವರದಿ ನೀಡಬೇಕು ಎಂದು ಒತ್ತಾಯಿಸಿದರು.
ಕಳಪೆ ಗುಣಮಟ್ಟದ ಔಷಧ ವಿತರಣೆ ತಡೆಗೆ ಮುಂಜಾಗೃತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಭಯಕುಮಾರ್ ನಾಂದ್ರೇಕರ್, ದ್ರಾಕ್ಷ ರಸ ಮತ್ತು ವೈನ್ ಬೋರ್ಟ್ ಮಾಜಿ ಅಧ್ಯಕ್ಷ ಎಂ.ಎಸ್.ರುದ್ರಗೌಡರ, ದ್ರಾಕ್ಷಿ ಬೆಳೆಗಾರರ ಸಂಘದ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್.ಲೋಣಿ, ಉಪಾಧ್ಯಕ್ಷ ಭರತೇಶ ಜಮಖಂಡಿ, ಎಚ್.ಎಸ್.ನಾಡಗೌಡರ, ಸಿದಗೊಂಡ ರುದ್ರಗೌಡರ, ಗುರುನಿಂಗ ಮಾಳಿ, ಭೀಮರಾಯ ಮಸಳಿ, ಯಾಕೂಬ್ ಜತ್ತಿ, ಪ್ರಕಾಶ ಆಯತವಾಡ, ಸುಭಾಷಗೌಡ ಪಾಟೀಲ, ಪ್ರಶಾಂತ ಪಾಟೀಲ, ಶರಣು ಅವಟಿ, ರಾಜಕುಮಾರ ಪೂಜಾರಿ, ಅಶೋಕ ಬಿರಾದಾರ, ಮಹಮ್ಮದ್ ಆರೀಫ್ ಮಕಾನದಾರ ಸೇರಿದಂತೆ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.