ವಿಜಯಪುರ: ‘ಸರ್ಕಾರವೇ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕಿತ್ತು. ಅದರ ಬದಲು ಕಾರ್ಪೋರೇಟ್ ಮನೆತನಗಳಿಗೆ ಬಂಡವಾಳಶಾಹಿಗಳಿಗೆ ಕಾಲೇಜನ್ನು ತೆರೆಯಲು ಅವಕಾಶ ಮಾಡಿಕೊಡಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ’ ಎಂದು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್(ಎಐಯುಟಿಯುಸಿ)ನ ರಾಜ್ಯ ಘಟಕದ ಅಧ್ಯಕ್ಷ ಕೆ.ಸೋಮಶೇಖರ್ ಹೇಳಿದರು.
ನಗರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವಂತೆ ಆಗ್ರಹಿಸಿ 11 ದಿನಗಳಿಂದ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿಯಲ್ಲಿ ಭಾನುವಾರ ಪಾಲ್ಗೊಂಡು ಮಾತನಾಡಿದರು.
‘ಜನಸಾಮಾನ್ಯರಿಗೆ ಆಸ್ಪತ್ರೆ ಬೇಕು, ಬಡ ಮಕ್ಕಳಿಗೆ ಸರ್ಕಾರಿ ವೈದ್ಯಕೀಯ ಕಾಲೇಜು ಬೇಕು. ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭವಾಗುವರೆಗೂ ಹೋರಾಟ ಮುಂದುವರಿಸಿ. ಸರ್ಕಾರ ಇದಕ್ಕೆ ಮಣಿಯಲೇ ಬೇಕಾಗುತ್ತದೆ. ಯಾವುದೇ ಪಟ್ಟಭದ್ರ ಹಿತಾಸಕ್ತಿಗೆ ಮಣಿಯದಂಥೇ ನೋಡಿಕೊಳ್ಳೋಣ. ನಿಮ್ಮ ಜೊತೆ ನಮ್ಮ ಕಾರ್ಮಿಕ ಸಂಘಟನೆ ಬೆಂಬಲವಿದೆ’ ಎಂದರು.
ಅಂಗನವಾಡಿ ಮತ್ತು ಹಾಸ್ಟಲ್ ಕಾರ್ಮಿಕರ ಸಂಘಟನೆಯ ಪ್ರಮುಖರಾದ ಕಾಶಿಬಾಯಿ ಜನಗೊಂಡ, ನಿಂಗಮ್ಮ ಮಠ, ಸಾವಿತ್ರಿ ನಾಗರತ್ತಿ, ಗಾಯತ್ರಿ ಹಿರೇಮಠ, ರೇಣುಕಾ ಹಡಪದ, ಲಕ್ಷ್ಮೀ ಲಕ್ಷೆಟ್ಟಿ, ಮಹಾದೇವಿ ಧರ್ಮಶೆಟ್ಟಿ, ಗಂಗೂಬಾಯಿ ಉಳ್ಳಾಗಡ್ಡಿ ಹೋರಾಟ ಬೆಂಬಲಿಸಿ ಮಾತನಾಡಿದರು.
ಹೋರಾಟ ಸಮಿತಿ ಸದಸ್ಯರಾದ ಅರವಿಂದ ಕುಲಕರ್ಣಿ, ಭಗವಾನ್ ರೆಡ್ಡಿ, ಅನಿಲ ಹೊಸಮನಿ, ಲಲಿತಾ ಬಿಜ್ಜರಗಿ, ಕೆ.ಎಫ್. ಅಂಕಲಿ, ವಿದ್ಯಾವತಿ ಅಂಕಲಗಿ, ಮಲ್ಲಿಕಾರ್ಜುನ ಬಟಗಿ, ಸಿದ್ದಲಿಂಗ ಬಾಗೇವಾಡಿ, ಭರತಕುಮಾರ ಎಚ್.ಟಿ, ಮಲ್ಲಿಕಾರ್ಜುನ ಎಚ್.ಟಿ, ಶಿವಬಾಳಮ್ಮ ಕೊಂಡಗೂಳಿ, ಗೀತಾ ಎಚ್, ನೀಲಾಂಬಿಕಾ ಬಿರಾದರ ಇದ್ದರು.
11 ದಿನ ಪೂರೈಸಿದ ಅನಿರ್ಧಿಷ್ಟಾವಧಿ ಧರಣಿ ಭಂತೆ ಬೋಧಿದತ್ತ ಬೆಂಬಲ ಕಪ್ಪು ಬಟ್ಟೆ ಪ್ರದರ್ಶನ ಇಂದು
ಸರ್ಕಾರದ ಸುಪರ್ದಿಯಲ್ಲಿರುವ ಆಸ್ಪತ್ರೆ ಶಾಲೆ ಕಾಲೇಜುಗಳ ನಿರ್ವಹಣೆಯನ್ನು ಖಾಸಗಿಯವರಿಗೆ ನೀಡುವುದಾದರೆ ಚುನಾವಣೆ ಸರ್ಕಾರ ಮುಖ್ಯಮಂತ್ರಿ ಸಚಿವರು ಶಾಸಕರು ಏಕೆ ಬೇಕು?ಕೆ.ಸೋಮಶೇಖರ್ ಅಧ್ಯಕ್ಷ ರಾಜ್ಯ ಘಟಕ ಎಐಯುಟಿಯುಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.