ADVERTISEMENT

ಶುದ್ಧೀಕರಣ ಘಟಕದ ನೀರೇ ಅಶುದ್ಧ!

ಅಂದಾಜು ₹22 ಲಕ್ಷ ವೆಚ್ಚ; ಎರಡು ತಿಂಗಳಿಂದ ಸ್ಥಗಿತ

ಮಹಾಂತೇಶ ವೀ.ನೂಲಿನವರ
Published 24 ಆಗಸ್ಟ್ 2019, 19:45 IST
Last Updated 24 ಆಗಸ್ಟ್ 2019, 19:45 IST
ನಾಲತವಾಡದಲ್ಲಿರುವ ಜಲ ಶುದ್ಧೀಕರಣ ಘಕಟದಲ್ಲಿನ ಕೆಂಪು ನೀರನ್ನು ತೋರಿಸಿದ ದಾವಲಸಾಬ್ ಎಚ್. ಹಲಕಟಗಿ
ನಾಲತವಾಡದಲ್ಲಿರುವ ಜಲ ಶುದ್ಧೀಕರಣ ಘಕಟದಲ್ಲಿನ ಕೆಂಪು ನೀರನ್ನು ತೋರಿಸಿದ ದಾವಲಸಾಬ್ ಎಚ್. ಹಲಕಟಗಿ   

ನಾಲತವಾಡ: ಇದ್ದೂ ಇಲ್ಲದಂತಿರುವ ಜಲ ಶುದ್ಧೀಕರಣ ಘಟಕ. ಕಲುಷಿತಗೊಂಡಿರುವ ನದಿ ನೀರು ನೇರವಾಗಿ ಪೂರೈಕೆ. ಇದರಿಂದಾಗಿ ಅನಾರೋಗ್ಯಕ್ಕೆ ತುತ್ತಾಗುವ ಭೀತಿ. ಕಂಡೂ ಕಾಣದಂತಿರುವ ಅಧಿಕಾರಿಗಳು.

–ಇವು ಮುದ್ದೇಬಿಹಾಳ ತಾಲ್ಲೂಕು ನಾಲತವಾಡ ಗ್ರಾಮದ ಜನರು ಎದುರಿಸುತ್ತಿರುವ ಸಮಸ್ಯೆ.

ನದಿ ನೀರು ಹಲವಾರು ಕಾರಣಗಳಿಂದ ಕಲುಷಿತಗೊಂಡಿದ್ದು, ಕಾಯಿಲೆ ಹರಡುತ್ತಿದೆ. ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ 10 ವರ್ಷಗಳ ಹಿಂದೆ ಅಂದಾಜು ₹22 ಲಕ್ಷ ವೆಚ್ಚದಲ್ಲಿ ಜಲ ಶುದ್ಧೀಕರಣ ಘಟಕವನ್ನು ಸ್ಥಾಪಿಸಲಾಗಿದೆ. ಆದರೆ, ಈ ಘಟಕ ಎರಡು ತಿಂಗಳಿನಿಂದ ಸ್ಥಗಿತಗೊಂಡಿದೆ. ಹೆಸರಿಗೆ ಮಾತ್ರ ಜಲಶುದ್ಧೀಕರಣ ಘಟಕ ಇದ್ದು, ಈಗ ಅದು ಇದ್ದೂ ಇಲ್ಲದಂತಾಗಿದೆ.

ADVERTISEMENT

ನಾಲತವಾಡಕ್ಕೆ ಕೃಷ್ಣಾ ನದಿಯ ನೀರನ್ನು ನೇರವಾಗಿ ಕುಡಿಯಲು ಪೂರೈಕೆ ಮಾಡಲಾಗುತ್ತಿದೆ. ಇದರಿಂದಾಗಿ ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

18 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಪಟ್ಟಣದಲ್ಲಿ ರಾಜೀವಗಾಂಧಿ ಜಲ ನಿರ್ಮಲ ಯೋಜನೆಯಡಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಉದ್ದೇಶದಿಂದ 2 ಲಕ್ಷ ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಟ್ಯಾಂಕ್ ಮತ್ತು ಶುದ್ಧ ನೀರನ್ನಾಗಿ ಶೋಧಿಸುವ ಮರಳು ಸಂಗ್ರಹಣೆ 2 ತೊಟ್ಟಿಗಳನ್ನು ಅಳವಡಿಸಲಾಗಿದೆ. ಆದರೆ, ಮೂರು ವರ್ಷಗಳಿಂದ ನಿರ್ವಹಣೆ ಇಲ್ಲ.

‘ಜನತೆಗೆ ಶುದ್ಧ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜಲ ಶುದ್ಧೀಕರಣ ಘಟಕದತ್ತ ಗಮನ ಹರಿಸುತ್ತಿಲ್ಲ. ಹೀಗಾಗಿ ಅಶುದ್ಧ
ನೀರನ್ನೇ ಕುಡಿಯುವಂತಾಗಿದೆ’ ಎಂದು ಗ್ರಾಮದ ರುದ್ರು ಇಲಕಲ್‌ ಹಾಘೂ
ರಾಜು ಮಸಬಿನಾಳ ಬೇಸರ ವ್ಯಕ್ತಪಡಿಸುತ್ತಾರೆ.

‘ಪಟ್ಟಣ ಪಂಚಾಯಿತಿಯಿಂದ ಕ್ಲೋರಿನೇಶನ್, ಬ್ಲೀಚಿಂಗ್ ಪೌಡರ್ ಮೂಲಕ ನೀರನ್ನು ಶುದ್ಧೀಕರಿಸಲು ಕ್ರಮಕೈಗೊಳ್ಳಲಾಗುತ್ತಿದೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾರುತಿ ನಡುವಿನಕೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.