
ವಿಜಯಪುರ: ತುಬಚಿ -ಬಬಲೇಶ್ವರ ಯೋಜನೆಯಡಿ ಹಂಚಿಕೆಯಾದ ನೀರನ್ನು ಗರಿಷ್ಠ ಮಟ್ಟದಲ್ಲಿ ಸದ್ಭಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಬಾಬಾನಗರದ ಹತ್ತಿರದಲ್ಲಿರುವ ಸರ್ಕಾರಿ ಜಮೀನಿನಲ್ಲಿ 0.8 ಟಿಎಂಸಿ ಸಾಮರ್ಥ್ಯದ ಜಲಸಂಗ್ರಹಗಾರ ನಿರ್ಮಾಣ ಮಾಡಲು ಸಮಗ್ರ ಯೋಜನಾ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.
ತಿಕೋಟಾ ತಾಲ್ಲೂಕಿನ ಬಾಬಾನಗರ ಹತ್ತಿರವಿರುವ ಉದ್ದೇಶಿತ ಯೋಜನಾ ಪ್ರದೇಶಕ್ಕೆ ಅಧಿಕಾರಿಗಳು, ರೈತ ಮುಖಂಡರೊಂದಿಗೆ ಭಾನುವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ತುಬಚಿ -ಬಬಲೇಶ್ವರ ಯೋಜನೆಯಡಿ ಈಗಾಗಲೇ ಕೇವಲ 2 ಟಿಎಂಸಿ ನೀರು ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಎಫ್ಐಸಿ ಆದ ನಂತರವೂ ಸಹ ಕೇವಲ 3 ಟಿಎಂಸಿ ನೀರು ಮಾತ್ರ ಬಳಕೆಯಾಗುತ್ತದೆ. ಹಾಗಾಗಿ ಉಳಿದ 2.5 ಟಿಎಂಸಿ ನೀರನ್ನು ಮಳೆಗಾಲದಲ್ಲಿ ನೀರನ್ನು ಶೇಖರಿಸಿಕೊಂಡು ಗರಿಷ್ಠ ಮಟ್ಟದ ನೀರನ್ನು ಬಳಕೆಗೆ ಮಾಡುವ ನಿಟ್ಟಿನಲ್ಲಿ 0.8 ಟಿಎಂಸಿ ಜಲಸಂಗ್ರಹಾರ ನಿರ್ಮಾಣ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.
ತುಬಚಿ ಬಬಲೇಶ್ವರ ಯೋಜನೆಯಡಿ 5.5 ಟಿಎಂಸಿ ನೀರು ಇದ್ದರೂ ಸಹ ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಮಳೆಗಾಲದಲ್ಲಿ ಮಾತ್ರ ಏತನೀರಾವರಿ ಮೂಲಕ ನೀರನ್ನು ಒದಗಿಸಲಾಗುತ್ತದೆ. ಬೇಸಿಗೆಯಲ್ಲಿ ಈ ನೀರನ್ನ ಸದ್ಭಳಕೆ ಮಾಡಿಕೊಂಡು ಕೆರೆ-ಹಳ್ಳಗಳಿಗೆ ನೀರೊದಗಿಸಲು, ಉಳಿತಾಯವಾದ ನೀರನ್ನು ಗರಿಷ್ಠ ಮಟ್ಟದಲ್ಲಿ ಸದ್ಭಳಕೆ ಮಾಡುವ ನಿಟ್ಟಿನಲ್ಲಿ ಮಳೆಗಾಲದಲ್ಲಿ ನೀರನ್ನು ಸಂಗ್ರಹಗಾರದಲ್ಲಿ ನೀರನ್ನು ಸಂಗ್ರಹಿಸಿಕೊಂಡು ಬೇಸಿಗೆ ಕಾಲದಲ್ಲಿ ನೀರು ಕೆರೆಗಳಿಗೆ ಹಳ್ಳಕ್ಕೆ ನೀರು ಒದಗಿಸಲು ಯೋಜನೆ ರೂಪಿಸಲಾಗಿದೆ ಎಂದರು.
ಬಾಬಾನಗರದ ಹತ್ತಿರ 500 ಎಕರೆ ಸರ್ಕಾರಿ ಜಮೀನು ಲಭ್ಯವಿದ್ದು, ಜಲ ಸಂಗ್ರಹಗಾರ ನಿರ್ಮಾಣಕ್ಕೆ ಯಾವುದೇ ಭೂಸ್ವಾಧೀನಕ್ಕೆ ಹಣ ವೆಚ್ಚ ಮಾಡುವ ಅವಶ್ಯಕತೆ ಇಲ್ಲ. ತೆಗ್ಗು ಪ್ರದೇಶ, ನೈಸರ್ಗಿಕವಾಗಿ ಇರುವ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಂಡು ನೀರಿನ ಸದ್ಭಳಕೆ ಮಾಡಿಕೊಳ್ಳಲು ಯೋಜನೆ ಹಾಕಿಕೊಳ್ಳಲಾಗಿದೆ. ಈ ಕುರಿತು ಈಗಾಗಲೇ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳಿಗೆ ಮನದಟ್ಟು ಮಾಡಲಾಗಿದ್ದು, ಮುಂದಿನ ಬಜೆಟ್ನಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಕಳೆದ 2013-18ರ ಅವಧಿಯಲ್ಲಿ ತುಬಚಿ ಬಬಲೇಶ್ವರ ಯೋಜನೆಗೆ ಈ ಭಾಗದ ಅತಿ ಎತ್ತರದ ಪ್ರದೇಶವಾದ ಕನಮಡಿ, ಬಾಬಾನಗರ, ಬಿಜ್ಜರಗಿ, ತಿಕೋಟಾ ತಾಲ್ಲೂಕು ಹಾಗೂ ಸಾವಳಗಿ ತಾಲ್ಲೂಕಿನ 1.30 ಲಕ್ಷ ಎಕರೆ ಸುಮಾರು 6.3 ಟಿಎಂಸಿ, 5.5 ತಿಕೋಟಾ ಹೋಬಳಿ, ಸಾವಳಿಗೆ 0.8 ಟಿಎಂಸಿ ನೀರೊದಗಿಸಲು ₹3600 ಕೊಟಿ ವೆಚ್ಚ ಮಾಡಲಾಗಿದೆ. ಈಗಾಗಲೇ ಅಂತರ್ಜಲ ಮಟ್ಟ ಹೆಚ್ಚಾಗಿ ರೈತರು ಸಂತಸದಲ್ಲಿದ್ದಾರೆ. ಎಫ್ಐಸಿ ಯೋಜನೆ ಪೂರ್ಣಗೊಂಡು ಕೆರೆಗಳಿಗೆ ನೀರು ಒದಗಿಸಲಾಗುತ್ತಿದೆ. ಟೆಂಡರ್ ಆಗಿ ಕಾಮಗಾರಿ ನಡೆಯುತ್ತಿದ್ದು, ಮುಂದಿನ 6 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು ರೈತರ ಹೊಲಗಳಿಗೆ ನೀರು ಹರಿಸಲಾಗುವುದು ಎಂದು ಅವರು ಹೇಳಿದರು.
ಕರ್ನಾಟಕ ನೀರಾವರಿ ನಿಗಮದ ಬೆಳಗಾವಿ ವೃತ್ತದ ಅಧೀಕ್ಷಕ ಎಂಜಿನಿಯರ್ ಬಿ.ಆರ್.ರಾಠೋಡ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಂಬಣ್ಣ, ನೀರಾವರಿ ತಜ್ಞ ಡಾ. ಹುಗ್ಗಿ ಇದ್ದರು.
ಜಲ ಸಂಗ್ರಹಗಾರ ನಿರ್ಮಾಣಕ್ಕೆ ಎಲ್ಲರ ಸಲಹೆ ಸೂಚನೆಗಳನ್ನು ಪಡೆದುಕೊಂಡು ಯಾವುದೇ ತಾಂತ್ರಿಕ ಸಮಸ್ಯೆಗಳಿದ್ದರೂ ಸರಿಪಡಿಸಿಕೊಂಡು ಸಮಗ್ರ ಯೋಜನಾ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು
-ಎಂ.ಬಿ.ಪಾಟೀಲಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.