ADVERTISEMENT

ಅಂಧರಿಗೆ ಸಿಗದ ಮಾಸಾಶನ

​ಪ್ರಜಾವಾಣಿ ವಾರ್ತೆ
Published 5 ಜೂನ್ 2012, 8:50 IST
Last Updated 5 ಜೂನ್ 2012, 8:50 IST

ಗುರುಮಠಕಲ್: ಹುಟ್ಟು ಕುರುಡ ರಾಗಿರುವ ಎರಡು ಹೆಣ್ಣು ಮಕ್ಕಳನ್ನು ಹೊಂದಿರುವ ಕುಟುಂಬ ಒಪ್ಪತ್ತಿನ ಊಟಕ್ಕಾಗಿ ಪರಿತಪಿಸುವ ಸ್ಥಿತಿಯಲ್ಲಿ ಸಾಗುತ್ತಿದೆ. ಇವರಿಗೆ ಆಸ್ತಿಯೂ ಇಲ್ಲ, ಸರ್ಕಾರದ ಸಹಾಯ ಹಸ್ತವೂ ಸಿಗದೆ ಅಂಧಕಾರದ ಬದುಕಿನಲ್ಲಿ ಈ ಕುಟುಂಬ ಬೆಂದು ಹೋಗಿದೆ.

ಇಲ್ಲಿನ ಕಂದೂರಗೇರಿ ಬಡಾವಣೆಯ ನಿವಾಸಿ ಹುಸೇನಪ್ಪ ಎಂಬುವವರ ಮಕ್ಕಳಾದ ಹುಸೇನಮ್ಮ ಮತ್ತು ಅನಿತ ಅಂಧ ಬಾಲಕಿಯರು. ಇವರಿಗೆ ಕಳೆ ಎರಡು ವರ್ಷಗಳಿಂದ ಸರ್ಕಾರದಿಂದ ಸಿಗಬೇಕಾದ ಸಹಾಯ ಧನ ಸ್ಥಗಿತ ಗೊಂಡಿದೆ. ದಿನ ನಿತ್ಯದ ಜೀವನ ಸಾಗಿಸಲು ಬಾಲಕಿಯರ ತಂದೆ ಹುಸೇನಪ್ಪ, ತಾಯಿ ಮಾಣಿಕಮ್ಮ ಕೂಲಿ ಕೆಲಸವನ್ನು ಅವಲಂಬಿಸಿದ್ದಾರೆ.

ಅಂಧ ಮಕ್ಕಳಿಗೆ ಬರಬೇಕಾದ ಮಾಸಿಕ ಸಹಾಯ ಧನಕ್ಕಾಗಿ, ವೇತನ ನವೀಕರಣ ಅರ್ಜಿ ಸಲ್ಲಿಸಿ ಒಂದುವರೆ ವರ್ಷ ಗತಿಸಿದೆ, ಕಚೇರಿಗಳಿಗೆ ಅಲೆದು ಅಲೆದು ಸುತ್ತಾಗಿದ್ದು, ಅಧಿಕಾರಿಗಳು ಮಾತ್ರ ಯಾವುದಾರೊಂದು ನೆಪ ಹೇಳುತ್ತಲೇ ಇದ್ದಾರೆ ಎಂದು ತಂದೆ ಆರೋಪಿಸಿದ್ದಾರೆ.

ಅಂಧ ಮಕ್ಕಳ ದೈನಂದಿನ ಕೆಲಸಗಳನ್ನು ತಾಯಿ ನೋಡಿಕೊಳ್ಳುತ್ತಾರೆ. ಅಂಧ ಬಾಲಕಿಯರು ಕೆಲಸ ಕಾರ್ಯಗಳಿಗೆ ತಾಯಿ ಪ್ರತಿ ಕ್ಷಣ ಕೈ ಹಿಡಿಯಲೇ ಬೇಕು. ಬೇರೆಯವರ ಮನೆ ಕೆಲಸ ಮಾಡುತ್ತ, ಅಂಧ ಮಕ್ಕಳ ಪಾಲನೆ ಜವಬ್ದಾರಿ ತಾಯಿ ಹೊತ್ತರೆ, ತಂದೆ ಹಮಾಲಿ ಕೆಲಸ ಮಾಡಿ ಬಂದ ಹಣದಿಂದ ಜೀವನ ಸಾಗಿಸುತ್ತಿದ್ದರೆ. ಕೃಷಿ ಕಾರ್ಯ ಮಾಡಲು ಜಮಿನಿಲ್ಲ, ಗುಡಿಸಲು ಮನೆಯಲ್ಲಿ ಕಾಲ ಕಳೆಯುವ ಪರಿಸ್ಥಿತಿ ಅವರದ್ದಾಗಿದೆ.

ವಿಪರ್ಯಸವೆಂದರೆ ಈ ಕುಟುಂಬಕ್ಕೆ ಬಿಪಿಎಲ್ ಕಾರ್ಡ್ ಬದಲಿಗೆ ಎಪಿಎಲ್ ಕಾರ್ಡ್ ವಿತರಣೆ ಮಾಡಿರುವುದು ಅಧಿಕಾರಿಗಳ ದಿವ್ಯ ನಿಲಕ್ಷ್ಯಕ್ಕೆ ಕಾರಣವಾಗಿದೆ. ಸರ್ಕಾರ ಪಡಿತರ ಅಂಗಡಿಯಿಂದ ಬರುವ ಕಡಿಮೆ ದರದ ಆಹಾರ ಕೂಡ ಇವರಿಗೆ ಸಿಗುತ್ತಿಲ್ಲ

ಆಹಾರ ಮತ್ತು ಸರಬರಾಜು ಅಧಿಕಾರಿಗಳಿಗೆ ವಿಚಾರಿಸಿದಾಗ ನಾವೇನು ಮಾಡಲಿಕ್ಕೆ ಬರುವುದಿಲ್ಲ ಆನ್ ಲೈನ ಮೂಲಕ ಅರ್ಜಿ ಸಲ್ಲಿಸಿರಿ ನೋಡೋಣ ಎಂದು ನುಣಚಿಕೊಳ್ಳುತ್ತಿದ್ದಾರೆ. ಸರ್ಕಾರದ ಯಾವುದೇ ರೀತಿಯ ಸೌಲಭ್ಯವು ಸಿಗದೇ, ಶ್ರೀಮಂತರ ಪಡಿತರ ಕಾರ್ಡ್ ಹಿಡಿದು ನಿತ್ಯ ಜೀವನ ಸಾಗಿಸಲು ಬಾಲಕಿಯರ ಪಾಲಕರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ.

ಸಂಬಂಧ ಪಟ್ಟ ಅಧಿಕಾರಿಗಳು ಸರ್ಕಾರದಿಂದ ಬಾಲಕಿಯರಿಗೆ ಸಿಗಬೇಕಾದ ಅಂಗವಿಕಲ ವೇತನ ಶೀಘ್ರವಾಗಿ ದೊರಕುವಲ್ಲಿ ಮತ್ತು ಬಡ ಕುಟುಂಬಕ್ಕೆ ಪಡಿತರ ಅಂಗಡಿಯಿಂದ ಸಿಗಬೇಕಾದ ಕಡಿಮೆ ದರದ ಆಹಾರ ಸಿಗುವಲ್ಲಿ ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಗಮನ ಹಿರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಬಡ ಕುಟುಂಬಕ್ಕೆ ಕೂಡಲೇ ಸಹಾಯ ಮಾಡುವಲ್ಲಿ ಕ್ರಮ ಕೈಗೊಳ್ಳುವಂತೆ ಬಡಾವಣೆಯ ನಿವಾಸಿಗಳು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.