ADVERTISEMENT

ಎಪಿಎಂಸಿ ಹಮಾಲರ ದಿಢೀರ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 7:05 IST
Last Updated 1 ಫೆಬ್ರುವರಿ 2011, 7:05 IST

ಯಾದಗಿರಿ: ರೈತರಿಂದ ಖರೀದಿಸಿದ ಶೇಂಗಾ ಅನ್ನು ಚೀಲಕ್ಕೆ ತುಂಬುವ ಹಮಾಲಿ ಹೆಚ್ಚಿಸುವಂತೆ ಆಗ್ರಹಿಸಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ ಹಮಾಲರು ಸೋಮವಾರ ಸಂಜೆ ದಿಢೀರ್ ಪ್ರತಿಭಟನೆ ನಡೆಸಿದರು.

ಮಧ್ಯಾಹ್ನದ ವೇಳೆಗೆ ಖರೀದಿ ಪ್ರಕ್ರಿಯೆ ಮುಗಿದಿದ್ದರೂ, ರಾತ್ರಿಯವ ರೆಗೂ ಹಮಾಲರು ಶೇಂಗಾ ಅನ್ನು ಚೀಲಕ್ಕೆ ತುಂಬಲು ಬರಲಿಲ್ಲ. ಇದ ರಿಂದಾಗಿ ವಿವಿಧ ಗ್ರಾಮಗಳಿಂದ ಆಗ ಮಿಸಿದ್ದ ರೈತರು, ಶೇಂಗಾ ರಾಶಿ ಗಳೊಂದಿಗೆ ರಾತ್ರಿ ಪೂರ್ತಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿಯೇ ಕಳೆ ಯುವಂತಾಯಿತು. ಎಪಿಎಂಸಿ ಆವರಣದಲ್ಲಿ ಸೋಮ ವಾರ ಬೆಳಿಗ್ಗೆಯಿಂದಲೇ ಚೀಲ ತುಂಬಲು ಹಮಾಲರು ಒತ್ತಾಯಿಸು ತ್ತಿದ್ದರು. ಆದರೆ ಇದಕ್ಕೆ ಸ್ಪಂದಿಸದ ವರ್ತಕರ ಧೋರಣೆಯಿಂದ ಬೇಸತ್ತ ಹಮಾಲರು ಸಂಜೆಯ ವೇಳೆಗೆ ದಿಢೀರ್ ಪ್ರತಿಭಟನೆಗೆ ಮುಂದಾದರು.

ಪ್ರತಿ ಚೀಲ ತುಂಬಲು ಸದ್ಯಕ್ಕೆ ರೂ.2.50 ನೀಡಲಾಗುತ್ತಿದೆ. ಅದನ್ನು ರೂ.3 ಕ್ಕೆ ಏರಿಸಬೇಕು ಎಂಬುದು ಹಮಾಲರ ಪ್ರಮುಖ ಬೇಡಿಕೆ. ಈ ಬಗ್ಗೆ ಹಲವಾರು ದಿನಗಳಿಂದ ಒತ್ತಾಯಿ ಸುತ್ತಲೇ ಬಂದಿದ್ದರೂ, ಪ್ರಯೋಜನ ಆಗುತ್ತಿಲ್ಲ. ಕೂಡಲೇ ಹಮಾಲಿ ಕುರಿತು ಸ್ಪಷ್ಟ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಂಜೆ ಎಪಿಎಂಸಿ ಕಚೇರಿ ಎದುರು ಜಮಾಯಿಸಿದ ಹಮಾಲರು, ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ದರು. ಸ್ಥಳದಲ್ಲಿದ್ದ ವರ್ತಕರು, ಎಪಿ ಎಂಸಿ ಸಿಬ್ಬಂದಿಗಳು ಹಮಾಲರ ಮನ ವೊಲಿಕೆಗೆ ಮಾಡಿದ ಯತ್ನ ವಿಫಲ ವಾಯಿತು. ಪರಿಸ್ಥಿತಿ ಹತೋಟಿ ಮೀರು ತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ್ದ ಸಿಪಿಐ ಲೋಕೇಶ, ನಗರ ಠಾಣೆ ಪಿಎಸ್‌ಐ ಪ್ರದೀಪ, ಗ್ರಾಮೀಣ ಠಾಣೆ ಪಿಎಸ್‌ಐ ಯಶವಂತ ಬಿಸನಳ್ಳಿ ಹಾಗೂ ಸಿಬ್ಬಂದಿ, ಹಮಾಲರ ಮನವೊಲಿಕೆಗೆ ಮುಂದಾ ದರು. ವರ್ತಕರ ಸಂಘದ ತುನ್ನೂರು ಚೆನ್ನಾರೆಡ್ಡಿ, ಬಾಬು ದೋಖಾ ಸೇರಿ ದಂತೆ ಹಲವಾರು ವರ್ತಕರು ಹಮಾ ಲರ ಜೊತೆ ಮಾತುಕತೆ ನಡೆಸಿದರು.

ಇದರಿಂದ ರೈತರಿಗೆ ತೊಂದರೆ ಆಗಲಿದೆ. ಹೀಗಾಗಿ ಇಂದು ಖರೀದಿ ಆಗಿರುವ ಶೇಂಗಾ ಬೀಜಗಳನ್ನು ಚೀಲಕ್ಕೆ ತುಂಬುವಂತೆ ಮನವಿ ಮಾಡಿ ದರು. ಶೇಂಗಾ ತುಂಬಲು ಪ್ರತಿ ಚೀಲಕ್ಕೆ ರೂ.2.50 ರ ಜೊತೆಗೆ ಹಮಾಲರ ಸಂತೋಷಕ್ಕಾಗಿ ಇನ್ನೂ ಹೆಚ್ಚಿನ ಕೂಲಿ ನೀಡಲು ಕೆಲ ವರ್ತಕರು ಮುಂದಾದ ಹಿನ್ನೆಲೆಯಲ್ಲಿ ಹಮಾಲರು ಚೀಲಕ್ಕೆ ಶೇಂಗಾ ತುಂಬುವ ಕಾರ್ಯ ಆರಂಭಿಸಿ ದರು.

ಪ್ರತಿಭಟನೆ ಮುಗಿದಿಲ್ಲ. ಮಂಗಳ ವಾರವೂ ಪ್ರತಿಭಟನೆ ಮುಂದುವರಿಯ ಲಿದೆ. ಹಮಾಲರ ಬೇಡಿಕೆಗಳನ್ನು ಈಡೇರಿಸಬೇಕು. ಕೂಲಿಗೆ ಸಂಬಂಧಿ ಸಿದಂತೆ ಸ್ಪಷ್ಟ ನಿಲುವು ಹೊರಬರ ಬೇಕು ಎಂದು ಹಮಾಲರ ಸಂಘದ ಅಧ್ಯಕ್ಷ ಶಂಕರ ಗೋಸಿ ತಿಳಿಸಿದರು.

ಪರದಾಡಿದ ರೈತರು: ಬೆಳಿಗ್ಗೆ ಯಿಂದಲೇ ಎಪಿಎಂಸಿಗೆ ಶೇಂಗಾ ತಂದಿದ್ದ ರೈತರು, ರಾತ್ರಿಯಾದರೂ ಚೀಲಕ್ಕೆ ತುಂಬದಿರುವುದರಿಂದ ಸಾಕಷ್ಟು ಪರದಾಡಬೇಕಾಯಿತು. ಎಪಿಎಂಸಿಯ ರಸ್ತೆಗಳಲ್ಲಿ ಸುರಿದಿದ್ದ ಶೇಂಗಾ ಖರೀದಿ ಪ್ರಕ್ರಿಯೆ ಮಧ್ಯಾ ಹ್ನವೇ ಮುಗಿದಿದ್ದರೂ, ಹಮಾಲರ ದಿಢೀರ್ ಪ್ರತಿಭಟನೆಯಿಂದಾಗಿ ರಾತ್ರಿ ಯಾದರೂ ರೈತರು ಶೇಂಗಾ ಕಾಯುತ್ತ ಕುಳಿತುಕೊಳ್ಳುವಂತಾಯಿತು.

ಚಳಿಯಲ್ಲಿಯೇ ಶೇಂಗಾ ತುಂಬಲು ಹಮಾಲರು ಬರುವ ದಾರಿಯನ್ನೇ ನೋಡುತ್ತ ಮಲಗಿದ್ದ ಕೆಲ ರೈತರು, ಅಲ್ಲಿಯೇ ನಿದ್ದೆಗೆ ಜಾರಿದ್ದು ಕಂಡು ಬಂತು. ಈಗಾಗಲೇ ಕೆಲ ವರ್ತಕರು ಪ್ರತಿ ಚೀಲಕ್ಕೆ ರೂ. 3 ನೀಡುತ್ತಿದ್ದು, ಕೆಲ ರೈತರು ಮೊದಲಿನಂತೆಯೇ ರೂ.2.50 ಮಾತ್ರ ನೀಡುತ್ತಿರುವುದ ರಿಂದ ರೊಚ್ಚಿಗೆದ್ದ ಹಮಾಲರು ಸೋಮವಾರ ಪ್ರತಿಭಟನೆಗೆ ಇಳಿ ದಿದ್ದಾರೆ ಎಂಬ ಮಾತುಗಳು ಎಪಿಎಂಸಿ ಆವರಣದಲ್ಲಿ ಕೇಳಿ ಬಂದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.