ಸುರಪುರ: ಮಹರ್ಷಿ ವಾಲ್ಮೀಕಿ ಶ್ರೇಷ್ಠ ದಾರ್ಶನಿಕ. ರಾಮಾಯಣವನ್ನು ಜಗತ್ತಿಗೆ ಉಣಬಡಿಸಿದ ಅವರು ಹಿಂದೂ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದಾರೆ. ಅವರ ತತ್ವಾದರ್ಶಗಳು ಇಂದು ಹೆಚ್ಚು ಪ್ರಸ್ತುತ.
ವಾಲ್ಮೀಕಿ ಜನಾಂಗ ಅವರ ಆಶೀರ್ವಾದದಿಂದ ಈಗ ಎಲ್ಲ ರಂಗಗಳಲ್ಲಿ ಮುಂದೆ ಬರುತ್ತಿರುವುದು ಉತ್ತಮ ಬೆಳವಣಿಗೆ. ಯುವಕರು ವಾಲ್ಮೀಕಿ ಜನಾಂಗದ ಸಂಘಟನೆಗೆ ಮತ್ತು ಅಭಿವೃದ್ಧಿಗೆ ಶ್ರಮಿಸಬೇಕು ಎಂದು ರಾಜಾ ವೆಂಕಟಪ್ಪನಾಯಕ್ ವನದುರ್ಗ ಕರೆ ನೀಡಿದರು.
ತಾಲ್ಲೂಕಿನ ಕರಡಕಲ್ ಗ್ರಾಮದಲ್ಲಿ ಬುಧವಾರ ನಡೆದ ವಾಲ್ಮೀಕಿ ವೃತ್ತ ಉದ್ಘಾಟನೆ ಮತ್ತು ವಾಲ್ಮೀಕಿ ನಾಯಕ ಸಂಘದ ನಾಮಫಲಕ ಅನಾವರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜನಾಂಗದ ಅಭಿವೃದ್ಧಿಗೆ ಶಿಕ್ಷಣ ಮುಖ್ಯ. ವಾಲ್ಮೀಕಿ ಜನಾಂಗದ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ವಾಲ್ಮೀಕಿ ಯುವಕ ಸಂಘ ಈ ದಿಸೆಯಲ್ಲಿ ಹೆಚ್ಚು ಪ್ರಯತ್ನಶೀಲರಾಗಬೇಕು. ಇತರ ಜನಾಂಗದವರೊಂದಿಗೆ ಭಾತೃತ್ವತೆ ಹೊಂದಿರಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ವೃತ್ತ ಉದ್ಘಾಟಿಸಿದ ಸಂಸ್ಥಾನಿಕ ರಾಜಾ ಪಿಡ್ಡನಾಯಕ್, ಸುರಪುರ ಸಂಸ್ಥಾನಿಕರು ವಾಲ್ಮೀಕಿ ಜನಾಂಗದವರು. ತಮ್ಮ ವಂಶಜರು ಸುರಪುರದ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದ್ದಾರೆ.
ನಮ್ಮ ಪೂರ್ವಜ ನಾಲ್ವಡಿ ರಾಜಾ ವೆಂಕಟಪ್ಪನಾಯಕ್ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಕ್ಷಿಣ ಭಾರತದ ನೇತೃತ್ವ ವಹಿಸಿದ್ದರು. ನಮ್ಮ ಜನಾಂಗ ಸಂಘಟಿತರಾಗುತ್ತಿರುವುದು ತಮಗೆ ಸಂತಸ ತಂದಿದೆ ಎಂದರು.
ಬಬ್ಲು ದೊರೆ, ರಾಜು ಧಣಿ ಧರ್ಮರಮಠ ಮುಖ್ಯ ಅತಿಥಿಗಳಾಗಿದ್ದರು. ಹಣಮಂತ್ರಾಯ, ಮಾನಶಯ್ಯ ಗಂಟಿ, ದೇವಿಂದ್ರಪ್ಪ ಹಾಲಗಡ್ಲಿ, ಭೀಮಣ್ಣ ನಾರಾಯಣಪುರ ಉಪಸ್ಥಿತರಿದ್ದರು.ಸಂಘದ ಅಧ್ಯಕ್ಷ ಗೋವಿಂದ ಗಂಟಿ ಸ್ವಾಗತಿಸಿ ನಿರೂಪಿಸಿದರು. ಉಪಾಧ್ಯಕ್ಷ ಗೋಪಾಲನಾಯಕ ಜಾಗೀರದಾರ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.