ADVERTISEMENT

ಜೋಗುಂಡಬಾವಿಯಲ್ಲಿ ಪ್ರತಿಭಾ ಕಾರಂಜಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 9:06 IST
Last Updated 13 ಡಿಸೆಂಬರ್ 2012, 9:06 IST

ಹುಣಸಗಿ: ಸಮೀಪದ ಜೋಗುಂಡಬಾವಿ ಶಾಲೆಯಲ್ಲಿ ನಾರಾಯಣಪುರ ಮತ್ತು ಮಾರನಾಳ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಮಟ್ಟದ ಪ್ರತಿಭಾ ಕಾರಂಜಿ ನಡೆಯಿತು. ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೆಶಕ ಆರ್.ಎಸ್. ಕರಡ್ಡಿ ಮಾತನಾಡಿ, ಪ್ರತಿಭಾ ಕಾರಂಜಿಗಳು ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರ ಹಾಕಲು ಉತ್ತಮ ವೇದಿಕೆ ಎಂದರು.

ಬೆಳೆಯುವ ಸಿರಿ ಮೋಳಕೆಯಲ್ಲಿ ನೋಡು ಎನ್ನುವಂತೆ ಮಕ್ಕಳ ಪ್ರತಿಭೆಗಳನ್ನು ಇಂದೇ ಗುರುತಿಸಬಹುದಾಗಿದೆ. ಆದರೆ ಪ್ರತಿಭೆಗಳನ್ನು ಪ್ರಾಮಾಣಿಕವಾಗಿ ಗುರುತಿಸಿ ತಾಲ್ಲೂಕು, ಜಿಲ್ಲೆ, ರಾಜ್ಯ ಮಟ್ಟಕ್ಕೆ ಕಳುಹಿಸುವ ಕೆಲಸ ಶಿಕ್ಷಕರು ಮಾಡಿ. ಯಾವುದೇ ಮಕ್ಕಳಿಗೂ ನೋವಾಗದಂತೆ ನೊಡಿಕೊಳ್ಳಿ ಎಂದು ನುಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಭೀಮಣ್ಣ ಕಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಿ.ಆರ್.ಪಿ ಸಿದ್ದಲಿಂಗಯ್ಯ ಮನಗೂಳಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗದ್ದೆಪ್ಪ ಪೂಜಾರಿ ಉದ್ಘಾಟಿಸಿದರು. ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ ಕೋರಿ, ಎಸ್.ಡಿ.ಎಂ,ಸಿ ಅಧ್ಯಕ್ಷ ಅಮರಣ್ಣ ಹುಡೇದಮನಿ, ನಾಗಯ್ಯ ಹಿರೇಮಠ, ಎಸ್.ಎಚ್.ಹಾವೇರಿ, ಬಸವರಾಜ ಹಳ್ಳದಕೇರಿ, ಮನೋಹರ ಪತ್ತಾರ, ಕೋರಿಸಂಗಯ್ಯ, ರುದ್ರಪ್ಪ ಕುಂಬಾರ ಇದ್ದರು.

ಪ್ರತಿಭಾ ಕಾರಂಜಿಯಲ್ಲಿ ಕಂಠಪಾಠ. ಲಘುಸಂಗೀತ, ಛದ್ಮವೇಶ, ಚಿತ್ರಕಲೆ, ಆಶುಭಾಷಣ, ಪ್ರಬಂಧಸ್ಪರ್ಧೆ ಹಾಗೂ ಅನೇಕ ಸ್ಪರ್ಧೆಗಳು ನಡೆದವು.ಪ್ರಾಥಮಿಕ ಮತ್ತು ಪ್ರೌಢ ಸೇರಿದಂತೆ ಸುಮಾರು 30ಶಾಲೆಗಳ ನೂರಾರು ಮಕ್ಕಳು ಪಾಲ್ಗೊಂಡಿದ್ದರು. ಲಚ್ಚಪ್ಪ ಶಿವಪೂರ ಸ್ವಾಗತಿಸಿದರು. ಗುರುಸಂಗಪ್ಪ ಹಾದಿಮನಿ ವಂದಿಸಿದರು. ಬಸವರಾಜ ಕುಂಟೋಜಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.