ಚಿಂಚೋಳಿ: ತಾಲ್ಲೂಕಿಗೆ 1300 ಚೀಲಗಳ ತೊಗರಿಯನ್ನು ಬೆಂಬಲ ಬೆಲೆಗೆ ಖರೀದಿಸಲು ಗುರಿ ನಿಗದಿಪಡಿಸಿದರೂ ಕೂಡ ತೊಗರಿ ಮಂಡಳಿಯ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕೇವಲ 300 ಚೀಲ ಮಾತ್ರ ಖರೀದಿಸಿ ಅಧಿಕಾರಿಗಳು ಕಾಲ್ಕಿತ್ತಿದ ಘಟನೆ ನಡೆದಿದೆ.
`ಕೇವಲ ಭಾನುವಾರ ಹಾಗೂ ಸೋಮವಾರ ತೊಗರಿ ಖರೀದಿಸಿದ ಅಧಿಕಾರಿಗಳು ಆಳಂದದಲ್ಲಿ ರೈತರಿಗೆ ಚೆಕ್ಕುಗಳನ್ನು ನೀಡಿ ಬರುವುದಾಗಿ ಹೇಳಿ ಹೋದವರು ಈ ಕಡೆ ತಿರುಗಿ ನೋಡಿಲ್ಲ. ಮಂಡಳಿಯ ಅಧಿಕಾರಿಗಳ ಬಳಿ ತಾಲ್ಲೂಕಿಗೆ ನಿಗದಿಪಡಿಸಿದ ಹಣವಿದೆ. ಅಧಿಕಾರಿಗಳಿಗೆ ಇಲ್ಲಿ ಖರೀದಿಸುವ ಮನಸ್ಸಿಲ್ಲದ ಕಾರಣ ದೇವರು ಕೊಟ್ಟರೂ ಪೂಜಾರಿ ಕೊಡಲಾರ ಎಂಬಂತಾಗಿದೆ~ ಎಂದು ರೈತರು ದೂರಿದ್ದಾರೆ.
`ನಮ್ಮ ಗೋಳು ಯಾರ್ರೀ ಕೇಳ್ತಾರ್... ಎಲ್ಲರೂ ಚುನಾವಣೆ ಬಂದಾಗ ಓಟ್ ಕೇಳಾಕ್ ಬರ್ತಾರ್. ಬೆಂಬಲ ಬೆಲಿಗಿ ತೊಗರಿ ಖರೀದಿಸುತ್ತೇವೆ ಅಂತಾರಾ. ಇದು ನಂಬಿ ನಾವ್ ತೊಗರಿ ಚೀಲ ತಂದು ಹಾಕಿ 3 ದಿನಾ ಆತು. ಖರೀದಿ ಮಾಡುವ ಅಧಿಕಾರಿಗಳು ಬರುತ್ತಿಲ್ಲ ನೋಡ್ರಿ~ ಎಂದು ಕೊಳ್ಳೂರಿನ ರೈತ ವಿಠಲ್ಗೋಳು ತೋಡಿಕೊಂಡರು .
`21 ಚೀಲ ತಂದ್ ಹಾಕಿವ್ರಿ ಕೇಳೊರ್ ಇಲ್ಲ. ನಮ್ಮ ಮನ್ಯಾಗ್ 9 ಚೀಲ್ ತೊಗರಿ ಅವಾರಿ ತರಬೇಕಾ ಬೇಡ ಅಂತ ಕೇಳಾಕ್ ಬಂದೀನಿ~ ಎಂದವರು ಕನಕಪೂರದ ನಾಗಶೆಟ್ಟಿ ಯಲ್ಮಡಗಿ.
ದಿನದೂಡುವ ಅಧಿಕಾರಿಗಳು: ಸೋಮಲಿಂಗದಳ್ಳಿಯ ಸಂಗಪ್ಪ ಮತ್ತು ಈರಪ್ಪ ಹಾಗೂ ನರನಾಳದ ಸಂಗ್ರಾಮ ಪಾಟೀಲ್, ಲಕ್ಷ್ಮೀನರಸಿಂಹರೆಡ್ಡಿ, ಶರಣಪ್ಪ, ರಾಜಶೇಖರ ಮತ್ತಿತರ ರೈತರು, `ನಾವು ನೂರಾರು ಚೀಲಗಳನ್ನು ತಂದಿದ್ದೇವೆ. ಆದರೆ ಖರೀದಿಸುವ ಅಧಿಕಾರಿಗಳು ಮಾತ್ರ ಇಂದು ನಾಳೆ ಎಂದು ದಿನ ದೂಡುತ್ತಿದ್ದಾರೆ~ ಎಂದರು.
ಮೂಗಿಗೆ ತುಪ್ಪ ಹಚ್ಚಿ ಮರಳಿದ ಅಧಿಕಾರಿಗಳು `ಯಾವಾಗ ಬರ್ತಾರೆ?~ ಎಂದು ರೈತರು ಕಾಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.