ADVERTISEMENT

`ದೇಶ ಕಂಡ ಉತ್ತಮ ಪ್ರಧಾನಿ ವಾಜಪೇಯಿ'

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2012, 6:33 IST
Last Updated 26 ಡಿಸೆಂಬರ್ 2012, 6:33 IST

ಸುರಪುರ: ಅಟಲ್ ಬಿಹಾರಿ ವಾಜಪೇಯಿ ಹೆಸರು ಕೇಳಿದರೆ ಏನೋ ರೋಮಾಂಚನವಾಗುತ್ತದೆ. ದೇಶದ ಪ್ರಧಾನಿಯಾಗಿ ಅವರು ನೀಡಿದ ಕೊಡುಗೆ ಅನನ್ಯ. ಅಜಾತಶತ್ರುವಾಗಿರುವ ವಾಜಪೇಯಿ ಆದರ್ಶಪ್ರಾಯರು. ಪ್ರಾಮಾಣಿಕತೆ ಉತ್ತಮ ಆಡಳಿತ ವೈಖರಿಗೆ ಅವರಿಗೆ ಅವರೇ ಸಾಟಿ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೇಣುಗೋಪಾಲ ಜೇವರ್ಗಿ ಗುಣಗಾನ ಮಾಡಿದರು.

ಇಲ್ಲಿನ ಗಾಂಧಿವೃತ್ತದಲ್ಲಿ ಮಂಗಳವಾರ ಏರ್ಪಡಿಸಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 89ನೆ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಗಿಲ್ ಯುದ್ಧದಲ್ಲಿ ಅಮೋಘ ಜಯ, ಅಮೇರಿಕಾ ಅಧ್ಯಕ್ಷರಿಗೆ ಕೊಟ್ಟ ಉತ್ತರ, ನ್ಯೂಕ್ಲಿಯರ್ ಟೆಸ್ಟ್, ಲಾಹೋರ್ ಒಪ್ಪಂದ, ದೆಹಲಿ ಲಾಹೋರ ಬಸ್‌ಗೆ ಚಾಲನೆ ವಾಜಪೇಯಿ ಅವರ ದಿಟ್ಟತನಕ್ಕೆ ಸಾಕ್ಷಿಯಾಗಿವೆ. ನದಿ ಜೋಡಣೆ, ಚತುಷ್ಪತ ರಸ್ತೆ, ಭ್ರಷ್ಟಾಚಾರ ರಹಿತ ಆಡಳಿತ, ಕೋಮು ಸಾಮರಸ್ಯ ಅವರ ಸಾಧನೆಗಳು ಎಂದು ವಿವರಿಸಿದರು. 1924 ಡಿಸೆಂಬರ್ 10 ರಂದು ಉತ್ತರಪ್ರದೇಶ ಬತೇಶ್ವರದಲ್ಲಿ ಬ್ರಾಹ್ಮಣ ಜನಾಂಗದ ಮಧ್ಯಮ ವರ್ಗ ಕುಟುಂಬದಲ್ಲಿ ಜನಿಸಿದರು. ಜನ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ವಾಸ ಅನುಭವಿಸಿದ್ದಾರೆ. 5 ವರ್ಷ ಪ್ರಧಾನಿಯಾಗಿ ಅವಧಿ ಪೂರೈಸಿದ ಕಾಂಗ್ರೆಸ್ಸೇತರ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದರು.

9ಸಲ ಲೋಕಸಭಾ ಸದಸ್ಯರಾಗಿ, 2 ಸಲ ರಾಜ್ಯ ಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. 4 ದಶಕಗಳ ಕಾಲ ದೇಶಕ್ಕೆ ಸೇವೆ ಸಲ್ಲಿಸಿರುವ ವಾಜಪೇಯಿ ಅನಾರೋಗ್ಯದ ನಿಮಿತ್ತ ರಾಜಕೀಯದಿಂದ ದೂರವಿದ್ದಾರೆ. ಪದ್ಮವಿಭೂಷಣ ಮತ್ತು ಉತ್ತಮ ಸಂಸತ್‌ಪಟು ಗೌರವಕ್ಕೆ ಪಾತ್ರರಾಗಿದ್ದಾರೆ. ದೇಶದ ಭವಿಷ್ಯಕ್ಕೆ ಅವರ ಮಾರ್ಗದರ್ಶನದ ಅವಶ್ಯಕತೆ ಇದೆ ಎಂದು ನುಡಿದರು.

ವಾಜಪೇಯಿಗೆ ದೇವರು ಉತ್ತಮ ಆರೋಗ್ಯ ನೀಡಲಿ ಎಂದು ದೇವಸ್ಥಾನಗಳಲ್ಲಿ ಕಾರ್ಯಕರ್ತರು ಪೂಜೆ ಸಲ್ಲಿಸಿದರು. ಮಲ್ಲಾರಾವ ಕುಲಕರ್ಣಿ, ಮಲ್ಲೇಶಿ ನಾಗರಾಳ, ಚಂದಾಸಾ ನಾಗರಾಳ, ಮಲ್ಲಣ್ಣ ನಾರಾಯಣಪುರ, ಪುರಸಭೆ ಸದಸ್ಯ ಅಮರೇಶನಾಯಕ ಜೇವರ್ಗಿ, ಬಸವರಾಜ ಜಡಿಮರಳ, ಭೀಮರಾವ ರಫುಗಾರ, ಪೃಥ್ವಿರಾಜ ಪ್ಯಾಪ್ಲಿ, ಚನ್ನಪ್ಪ ಹೂಗಾರ, ಚಂದ್ರಶೇಖರ ಹೂಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.