ADVERTISEMENT

ಧರೆಪ್ಪಗೆ ಒಲಿದ ಅಧ್ಯಕ್ಷ ಪಟ್ಟ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 6:25 IST
Last Updated 1 ಅಕ್ಟೋಬರ್ 2012, 6:25 IST

ಸುರಪುರ: ಇಲ್ಲಿನ ಪಿಕಾರ್ಡ್ ಬ್ಯಾಂಕಿನ ಅಧ್ಯಕ್ಷರಾಗಿ ಬೂದಿಹಾಳ ಗ್ರಾಮದ ಧರೆಪ್ಪ ಮೇಟಿ ಮತ್ತು ಉಪಾಧ್ಯಕ್ಷರಾಗಿ ಕರ್ನಾಳ ಗ್ರಾಮದ ನೀಲಕಂಠರೆಡ್ಡಿ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.

ನೂತನ ಅಧ್ಯಕ್ಷ ಧರೆಪ್ಪ ಮಾತನಾಡಿ, ಆರ್ಥಿಕವಾಗಿ ಹಿಂದುಳಿದಿದ್ದ ಬ್ಯಾಂಕ್‌ನ್ನು ಹಿಂದಿನ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಸಮರ್ಥವಾಗಿ ಮುನ್ನಡೆಸಿ ಪ್ರಗತಿಪಥದತ್ತ ಕೊಂಡೊಯ್ಯಲು ಶ್ರಮಿಸಿದ್ದಾರೆ. ಇದೆ ಸಹಕಾರ ನನಗೂ ನೀಡಿರಿ. ನಾನೂ ಕೂಡಾ ಬ್ಯಾಂಕಿನ ಪ್ರಗತಿಗೆ ಶ್ರಮಿಸುತ್ತೇನೆ ಎಂದರು.

ಸಾಲಗಾರರು ಪ್ರಾಮಾಣಿಕವಾಗಿ ಸಾಲವನ್ನು ಮರುಪಾವತಿಸಿರಿ. ಸಾಲವನ್ನು ನಿಗದಿತ ಸಮಯಕ್ಕೆ ಕಟ್ಟಿದರೆ ಇನ್ನೊಬ್ಬರಿಗೆ ಸಾಲ ನೀಡಲು ಅನುಕೂಲವಾಗುತ್ತದೆ. ಕಟ್ಟು ಬಾಕಿದಾರರಿಗೆ ಈ ನಿಟ್ಟಿನಲ್ಲಿ ಮನವೊಲಿಸಲಾಗುವುದು. ಬ್ಯಾಂಕಿನ ನಿರ್ದೇಶಕರು ಮತ್ತು ಸಿಬ್ಬಂದಿ ಈ ದಿಸೆಯಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿದಾಗ ಬ್ಯಾಂಕ್ ಆರ್ಥಿಕವಾಗಿ ಸಧೃಢವಾಗುತ್ತದೆ ಎಂದು ಪ್ರತಿಪಾದಿಸಿದರು.

ಪಿಕಾರ್ಡ್ ಬ್ಯಾಂಕ್ ಸಹಕಾರ ತತ್ವದಡಿ ಸ್ಥಾಪಿಸಲ್ಪಟ್ಟಿದೆ. ಬ್ಯಾಂಕಿನ ಅಭಿವೃದ್ಧಿಗೆ ಸಹಕಾರವೇ ಮೂಲಮಂತ್ರ. ರಾಜ್ಯ ಸರ್ಕಾರದ ಅಡಿಯಲ್ಲಿ ಬರುವ ಈ ಬ್ಯಾಂಕಿನ ಸಾಲಗಾರರ ಸಾಲವನ್ನು ಸರ್ಕಾರ ಅನೇಕ ಬಾರಿ ಮನ್ನಾ ಮಾಡಲಾಗಿದೆ. ಬಡ್ಡಿ ದರವೂ ಕಡಿಮೆಯಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಸಾಲ ಮರುಪಾವತಿ ತಮ್ಮ ಕರ್ತವ್ಯವೆಂದು ತಿಳಿದುಕೊಳ್ಳಬೇಕು ಎಂದು ಮಾಜಿ ಅಧ್ಯಕ್ಷ ಗುರುನಾಥರೆಡ್ಡಿ ಹೆಬ್ಬಾಳ ಕರೆ ನೀಡಿದರು.

ನಿರ್ಗಮಿತ ಉಪಾಧ್ಯಕ್ಷ ಚಂದ್ರಕಾಂತ ಕಡೇಚೂರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷ ರಾಮನಗೌಡ ಸುಬೇದಾರ್, ನಿರ್ದೇಶಕರಾದ ವಾಮನರಾವ ದೇಶಪಾಂಡೆ, ಮಾಳಪ್ಪ ದೇವರಗಡ್ಡಿ, ಭೀಮಣ್ಣ ಮಾಚಗುಂಡಾಳ, ಶಿವಪುತ್ರಪ್ಪ ದೇಸಾಯಿ, ಮಾನಯ್ಯ ಸಿದ್ದಾಪುರ, ಮಲ್ಲಿಕಾರ್ಜುನ ಹಂದ್ರಾಳ ವೇದಿಕೆಯಲ್ಲಿದ್ದರು. ವ್ಯವಸ್ಥಾಪಕ ಎಂ. ಸಿದ್ರಾಮಪ್ಪ ಸ್ವಾಗತಿಸಿದರು. ಅಕೌಂಟೆಂಟ್ ಅಭಿಜಿತ್ ದರಬಾರಿ ನಿರೂಪಿಸಿದರು.

ರಾಜಗೋಪಾಲ ಪಾಣಿಭಾತೆ ವಂದಿಸಿದರು. ಎಂ. ಗಂಗಿನಳ್ಳಿ, ಮಹ್ಮದ್ ಮುದಾಸ್ಸೀರ್, ವಾಸುದೇವ, ಸೂಗಯ್ಯಸ್ವಾಮಿ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.