ADVERTISEMENT

‘ಧರ್ಮ ಒಡೆದವರಿಗೆ ಪಾಠ ಕಲಿಸಿ’

ಬಿಜೆಪಿ ಅಭ್ಯರ್ಥಿ ಪರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪ್ರಚಾರ

​ಪ್ರಜಾವಾಣಿ ವಾರ್ತೆ
Published 9 ಮೇ 2018, 13:47 IST
Last Updated 9 ಮೇ 2018, 13:47 IST

ಶಹಾಪುರ: ‘ಧರ್ಮ ಒಡೆದು ರಾಜಕಾರಣ ಮಾಡಬಾರದು. ರಾಜಕೀಯ ಸ್ವಾರ್ಥಕ್ಕಾಗಿ ಸಮಾಜ ಒಡೆದವರಿಗೆ ಮತದಾರರು ತಕ್ಕ ಪಾಠ ಕಲಿಸುವ ಸಂಕಲ್ಪ ಮಾಡಬೇಕು’ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದರು.

ಇಲ್ಲಿನ ಸಿಪಿಎಸ್ ಶಾಲಾ ಮೈದಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬಿಜೆಪಿ ಅಭ್ಯರ್ಥಿ ಗುರು ಪಾಟೀಲ ಶಿರವಾಳ ಪರ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಪರಿವರ್ತನೆಗಾಗಿ ಬಿಜೆಪಿ ಬಲಪಡಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಹೆಸರಿನಲ್ಲಿ ಹಣ ಕೊಳ್ಳೆ ಹೊಡೆದಿದೆ. ಅದನ್ನೇ ಈಗ ಚುನಾವಣಾ ಪ್ರಚಾರಕ್ಕೆ ಬಳಸುತ್ತಿದೆ. ಸರಳ ವ್ಯಕ್ತಿತ್ವದ ಗುರು ಪಾಟೀಲರಿಗೆ ಮತ್ತೊಮ್ಮೆ ಅವಕಾಶ ನೀಡಿ’ ಎಂದು ಮನವಿ ಮಾಡಿದರು.

ADVERTISEMENT

‘ಕಾಂಗ್ರೆಸ್ ಪಕ್ಷಕ್ಕೆ ಈಗ ಜ್ಞಾನೋದಯವಾಗಿದೆ. ಉಜ್ವಲ ಯೋಜನೆ ಅಡಿ ವಿತರಿಸಿದ ಅಡುಗೆ ಅನಿಲ, ಬಡ ಜನರ ಅನುಕೂಲಕ್ಕಾಗಿ ಮುದ್ರಾ ಯೋಜನೆ ಸೇರಿ ಹಲವು ಯೋಜನೆಗಳನ್ನು ಸಹಿಸಿಕೊಳ್ಳಲು ಆಗದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸಿಲಿಂಡರ್ ಹೊತ್ತು, ಬೈಸಿಕಲ್ ತುಳಿದರೆ ಮತದಾರರು ಒಲಿಯುವುದಿಲ್ಲ’ ಎಂದು ಛೇಡಿಸಿದರು.

ಬಿಜೆಪಿ ಅಭ್ಯರ್ಥಿ ಗುರು ಪಾಟೀಲ ಶಿರವಾಳ ಮಾತನಾಡಿ, ‘ಕಾಂಗ್ರೆಸ್‌ ಅಭ್ಯರ್ಥಿ ಎರಡು ಬಾರಿ ಸಚಿವರಾಗಿ ಅಧಿಕಾರ ಅನುಭವಿಸಿದರು. ಈಗ ಮತ್ತೊಮ್ಮೆ ಅವಕಾಶ ನೀಡಿ ಎನ್ನುವುದು ಹಾಸ್ಯಾಸ್ಪದ. ಕನಿಷ್ಠ ಕುಡಿಯುವ ನೀರನ್ನು ಒದಗಿಸದ ಅಭ್ಯರ್ಥಿಯಿಂದ ಕ್ಷೇತ್ರದ ಅಭಿವೃದ್ಧಿ ಸಾಧ್ಯವೆ’ ಎಂದು ಪ್ರಶ್ನಿಸಿದರು.

ಇದೇ ಸಂದರ್ಭದಲ್ಲಿ ನಗರದ ವಿವಿಧ ವಾರ್ಡಿನ ಮುಸ್ಲಿಂ ಸಮಾಜದ ಕಾರ್ಯಕರ್ತೆಯರು ಬಿಜೆಪಿ ಸೇರಿದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಮಲ್ಲಣ್ಣಗೌಡ ಉಕ್ಕನಾಳ, ಅಮಾತೆಪ್ಪ ಕಂದಕೂರ, ಭೀಮಯ್ಯಗೌಡ ಕಟ್ಟಿಮನಿ, ಮರೆಪ್ಪ ಹಯ್ಯಾಳಕರ್, ಯಲ್ಲಯ್ಯನಾಯಕ ವನದುರ್ಗ, ರಾಮಚಂದ್ರ ಕಾಶಿರಾಜ, ರಾಜಶೇಖರ ಗೂಗಲ್, ಡಾ.ಚಂದ್ರಶೇಖರ ಸುಬೇದಾರ,ವಸಂತ ಸುರುಪುರಕರ್, ಎಸ್‌.ಗೋಪಾಲ, ಸಂತೋಷ ಗುತ್ತೆದಾರ, ಲಾಲ್ ಅಹ್ಮದ ಖುರೇಶಿ, ಶ್ರೀಕಾಂತ ಸುಬೇದಾರ, ಬಸವರಾಜ ಆನೇಗುಂದಿ, ರಾಕೇಶ ಸಾಹು ಇದ್ದರು.

**
ಎರಡು ವರ್ಷದ ಬಳಿಕ ಸೋಲಿನ ಭೀತಿಯಿಂದ ಮಗನ ಭವಿಷ್ಯದ ಉಳಿವಿಗಾಗಿ ತಾಯಿ ಪ್ರಚಾರಕ್ಕೆ ಬಂದಿದ್ದಾರೆ
- ಸ್ಮೃತಿ ಇರಾನಿ, ಕೇಂದ್ರ ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.