ಯಾದಗಿರಿ: ‘ಸ್ವಚ್ಛತೆ ಹಾಗೂ ಉತ್ತಮ ಗುಣಮಟ್ಟದ ನಗರಾಭಿವೃದ್ಧಿಗೆ ಸಿಂಗಾಪೂರ ದೇಶ ಹೆಸರಾಗಿದೆ. ಪೌರಕಾರ್ಮಿಕರು ಅಲ್ಲಿನ ಸ್ವಚ್ಛತೆಯ ಬಗ್ಗೆ ತಿಳಿದುಕೊಂಡು ಅದೇ ಮಾದರಿಯಲ್ಲಿಯೇ ಜಿಲ್ಲೆಯಲ್ಲಿಯೂ ಸ್ವಚ್ಛತೆ ಕಾಪಾಡಬೇಕು ಎಂದು ನಗರಸಭೆ ಪೌರಯುಕ್ತ ಸಂಗಪ್ಪ ಉಪ್ಪಾಸೆ ಹೇಳಿದರು.
ಇಲ್ಲಿನ ನಗರ ಸಭೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಿಂಗಾಪೂರ ಪ್ರವಾಸಕ್ಕೆ ಆಯ್ಕೆಯಾ ಗಿರುವ ಪೌರಕಾರ್ಮಿಕರ ಸನ್ಮಾನ ಮತ್ತು ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸರ್ಕಾರದ ನಿರ್ದೇಶನದಂತೆ ಇಲ್ಲಿನ ಪೌರಕಾರ್ಮಿಕರಾದ ಮಲ್ಲಪ್ಪ, ಭೀಮರಾಯ, ಮೈಲಾರಪ್ಪ, ಮಲ್ಲಪ್ಪ ಅವರನ್ನು ಸಿಂಗಾಪೂರ ಅಧ್ಯಯನ ಪ್ರವಾಸಕ್ಕೆ ಕಳುಹಿಸಲಾಗುತ್ತಿದೆ. ಪೌರಕಾರ್ಮಿಕರ ಖರ್ಚು ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಹೇಳಿದರು.
‘ಪೌರಕಾರ್ಮಿಕರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಇಲ್ಲಿಯವರೆಗೆ ಇಲಾಖೆಯಿಂದ ಗೃಹ ಭಾಗ್ಯ ಯೋಜನೆ ಅಡಿಯಲ್ಲಿ 45 ಜನ ಪೌರಕಾರ್ಮಿಕರಿಗೆ ವಸತಿ ಭಾಗ್ಯ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.
ನಗರ ಸಭೆ ಉಪಾಧ್ಯಕ್ಷ ಸ್ಯಾಂಸನ್ ಮಾಳಿಕೇರಿ, ಸ್ಥಾಯಿ ಸಮಿತಿ ಅಧ್ಯಕ್ಷ ಜಕೀಉದ್ದಿನ್, ಸದಸ್ಯರಾದ ಮರೆಪ್ಪ ಚಟ್ಟರ್ಕರ್, ಶರಣಪ್ಪ ಗುಳಗಿ, ಚಂದಪ್ಪ ಅಕ್ಕನೋರ್, ಸುರೇಶ ಕೊಟಿಮನಿ, ಪಿರ್ ಅಹ್ಮದ್ ಇದ್ದರು.
**
ನಗರ ಸ್ವಚ್ಛತೆ ಕೇವಲ ನಗರಸಭೆ ಕೆಲಸ ಎಂಬ ಮನಸ್ಥಿತಿಯಿಂದ ಜನರು ಹೊರಬಾರದ ಹೊರತು ನಗರದ ಸ್ವಚ್ಛತೆ ಅಸಾಧ್ಯ
– ಸಂಗಪ್ಪ ಉಪಾಸೆ, ಪೌರಾಯುಕ್ತ, ನಗರಸಭೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.