ADVERTISEMENT

ನೀರಿಗೆ ಪರದಾಟ: ತಾಪಂ ಅಧಿಕಾರಿ ತರಾಟೆಗೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 8:55 IST
Last Updated 3 ಅಕ್ಟೋಬರ್ 2011, 8:55 IST

ಯಾದಗಿರಿ: ಕಳೆದ 15 ದಿನಗಳಿಂದ ಕುಡಿಯುವ ನೀರಿಗಾಗಿ ಪರದಾಡುತ್ತಿರುವ ತಾಲ್ಲೂಕಿನ ಹತ್ತಿಕುಣಿ ಗ್ರಾಮದ ಜನರು, ಶನಿವಾರ ಗ್ರಾಮಕ್ಕೆ ಆಗಮಿಸಿದ್ದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ದ್ವಾರಕಾನಾಥ ಅವರನ್ನು ತರಾಟೆಗೆ ತೆಗೆದುಕೊಂಡರು.

ಶಿಥಿಲಗೊಂಡಿರುವ ನೀರಿನ ಟ್ಯಾಂಕ್ ವೀಕ್ಷಿಸಿದ ದ್ವಾರಕಾನಾಥ ಅವರಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಗ್ರಾಮಸ್ಥರು ಹರಿಸಿದರು. ಗ್ರಾಮ ಪಂಚಾಯಿತಿ ಸದಸ್ಯರು, ಕಾರ್ಯದರ್ಶಿ, ಸ್ವತಃ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ನೂತನ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗುತ್ತಿದೆ. ಅಲ್ಲದೇ ಮೂರು ದಿನಗಳಲ್ಲಿ ಗ್ರಾಮದಲ್ಲಿ ಹೊಸ ಬೊರ್‌ವೆಲ್ ಕೊರೆಯಿಸಿ, ನೀರಿಗೆ ವ್ಯವಸ್ಥೆ ಮಾಡುವಂತೆ ಪಂಚಾಯತ್ ರಾಜ್ ಎಂಜಿನಿಯರಿಂಗ್‌ನ ಬನ್ನಪ್ಪ ಅವರಿಗೆ ಸೂಚಿಸಿದರು. ಆದರೆ ಬೋರವೆಲ್ ಹಾಕಿಸಲು ಹಣವೇ ಇಲ್ಲ ಎಂದು ಉತ್ತರಿಸಿದರು. ಹಣದ ವ್ಯವಸ್ಥೆ ಮಾಡುವುದಾಗಿ ದ್ವಾರಕನಾಥ ಭರವಸೆ ನೀಡಿದರೂ, ಗ್ರಾಮಸ್ಥರು ಮಾತ್ರ ಸಮಾಧಾನ ಆಗಲಿಲ್ಲ.

ಶರಣಪ್ಪ ಸೋಮಣ್ಣೋರ್, ಭೀಮರೆಡ್ಡಿ ರಾಂಪೂರಳ್ಳಿ, ಶರಣಪ್ಪಗೌಡ ಮಾಲಿಪಾಟೀಲ, ಬಸವರಾಜ ಬಾಚವಾರ್, ಚಂದ್ರಕಾಂತ ಕವಾಲ್ದಾರ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.