ADVERTISEMENT

ಪ್ರಳಯದ ಬಗ್ಗೆ ಆತಂಕ ಬೇಡ: ಕಲಾಲ್

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2012, 8:37 IST
Last Updated 24 ಡಿಸೆಂಬರ್ 2012, 8:37 IST

ಯಾದಗಿರಿ: ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಗಳು ಸಾಯಲೇಬೇಕು. ಅದರೆ ಅದಕ್ಕೆ ತಮ್ಮದೇ ಆದ ಸಮಯ ಇರುತ್ತದೆ. ಆಕಾಶದಲ್ಲಿರುವ ಪ್ರತಿಯೊಂದು ಕಾಯಗಳಿಗೂ ಹುಟ್ಟು ಸಾವಿದೆ ಎಂದು ಹನುಮಯ್ಯ ಕಲಾಲ್ ಹೇಳಿದರು.

ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಘಟಕ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಉಪನ್ಯಾಸ ಮಾಲಿಕೆಯಲ್ಲಿ ಅವರು ಮಾತನಾಡಿದರು. ಸೂರ್ಯ ಹುಟ್ಟಿ ಅನೇಕ ವರ್ಷಗಳು ಗತಿಸಿದವು. ಈಗ ಅವನು ಯೌವನಾವಸ್ಥೆಯಲ್ಲಿದ್ದಾರೆ. ಇನ್ನು ಅವನು ನಮ್ಮ ಭೂಮಿಗೆ ಬೆಳಕು ಚೆಲ್ಲುತ್ತಾನೆ. ಭಯ ಪಡಬೇಡಿ ಎಂದರು.

ಪ್ರಳಯ ಆಗುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವೇ ಇಲ್ಲ. ಅನವಶ್ಯಕವಾಗಿ ಪ್ರಳಯದ ಭೀತಿ ಹೆಚ್ಚಿದೆ ಎಂದು ತಿಳಿಸಿದರು.
ಅತಿಥಿಯಾಗಿ ಆಗಮಿಸಿದ್ದ ಲಿಂಗೇರಿ ಸ್ಟೇಶನ್ ಸರ್ಕಾರಿ ಪ್ರೌಢಶಾಲೆ ವಿಜ್ಞಾನ ಶಿಕ್ಷಕ ಸೂರ್ಯಪ್ರಕಾಶ ಘನಾತೆ, ಪ್ರಳಯದ ಕುರಿತು ಹರಡಿರುವ ವದಂತಿಗೆ ಕಿವಿ ಕೊಡಬೇಡಿ. ಯಾವದೇ ವಿಷಯವನ್ನು ವೈಜ್ಞಾನಿಕವಾಗಿ ವಿಚಾರ ಮಾಡಿ. ಪ್ರಳಯದ ಎಂದರೆ ಅಲ್ಲಲ್ಲಿ ಆಗುವ ಪ್ರಕೃತಿ ವಿಕೋಪಗಳು. ಇದಕ್ಕೆ ಮಾನವನೇ ಹೊಣೆ. ಪರಿಸರವನ್ನು ಹಾಳು ಮಾಡುವುದು, ಕೈಗಾರೀಕರಣ, ವಾಹನಗಳ ಹೆಚ್ಚಳ, ಮರಭೂಮಿಕರಣ ಮುಂತಾದವು ಹೆಚಿವೆ. ಹವಾಮಾನ ವೈಪರೀತ್ಯದಿಂದ ಹಿಮಾಲಯದಲ್ಲಿನ ಮಂಜು ಕರಗಿ ನೀರಾಗಿ ಸಮುದ್ರ ಮಟ್ಟ ಹೆಚ್ಚಾಗುತ್ತಿದೆ. ನಗರಗಳ ಮುಳುಗುವ ಭೀತಿ ಆರಂಭವಾಗಿದೆ. ಅದಕ್ಕಾಗಿ ಪರಿಸರವನ್ನು ಉಳಿಸುವುದು ತುರ್ತು ಅವಶ್ಯಕವಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಉಪಪ್ರಾಚಾರ್ಯ ಸಲೀಮಾ ಬೇಗಂ, ಪ್ರಳಯದ ಬಗ್ಗೆ ಅನೇಕ ಕಡೆ ಕೇಳುತ್ತಿದ್ದೇವೆ. ಆದರೆ ಆತಂಕ ಪಡುವುದು ಬೇಡ. ಇಂದಿನ ವೈಜ್ಞಾನಿಕ ಯುಗದಲ್ಲಿ ಈ ರೀತಿ ವಿಚಾರ ಮಾಡುವುದು ಸರಿಯಲ್ಲ. ಪ್ರಕೃತಿ ವಿಕೋಪಕ್ಕೆ ನಾವೇ ಹೊಣೆ ಎಂದರು.
ಅತಿಥಿಗಳಾಗಿ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ ಉಪಾಧ್ಯಕ್ಷ ಸಿದ್ರಾಮರೆಡ್ಡಿ, ಜಿಲ್ಲಾ ಸಂಚಾಲಕ ಬಿ. ರಾಜಶೇಖರಗೌಡ ಆಗಮಿಸಿದ್ದರು. ಮಹಿಬೂಬ ನಿರೂಪಿಸಿದರು. ರಿಯಾಜ್ ಅಹ್ಮದ್ ವಂದಿಸಿದರು. ಶಂಕ್ರಮ್ಮ, ಬಸವರಾಜ, ಸತ್ಯನಾರಾಯಣ, ಚಂದಪ್ಪ ನಾಯ್ಕೋಡಿ, ಭೀಮರಾಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.