ADVERTISEMENT

ಬಿಡುಗಡೆಯಾದ ಅನುದಾನ ತಡೆ..!

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2012, 10:00 IST
Last Updated 13 ಅಕ್ಟೋಬರ್ 2012, 10:00 IST

ಶಹಾಪುರ: ಭೀಮರಾಯನಗುಡಿ ಅನುಸೂಚಿತ ಪ್ರದೇಶದಲ್ಲಿ ಸರ್ಕಾರದಿಂದ ಮಂಜೂರಾತಿಯಾಗಿದ್ದ 500 ಮನೆಗಳಲ್ಲಿ ಅರ್ಹ ಫಲಾನುಭವಿಗಳ ಅರ್ಹತೆ ಪರಿಶೀಲಿಸಿ ಕೂಡಲೇ ನಿಗಮಕ್ಕೆ ವರದಿ ನೀಡುವುದು. ಮತ್ತು ವರದಿ ಬರುವರೆಗೂ ಫಲಾನುಭವಿಗಳ ಅನುದಾನ ತಡೆ ಹಿಡಿಯಲು ಕ್ರಮ ಕೈಗೊಳ್ಳಲು ಕೋರಲಾಗಿದೆ ಎಂದು ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಎನ್.ಎನ್.ಮಹಾದೇವ ಪ್ರಸಾದ್ ಅವರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ನಿರ್ದೇಶನ ನೀಡಿದ್ದಾರೆ.

 ಸರ್ಕಾರದ ನಿಯಮಗಳನ್ನು ಗಾಳಿ ತೂರಿ ಭೀಮರಾನಗುಡಿ ಅನಸೂಚಿತ ಪ್ರದೇಶದಲ್ಲಿ ನಾಲ್ಕು ಗ್ರಾಮಗಳು ಸೇರಿ 500 ಮನೆಗಳು ಇರುವುದಿಲ್ಲ. ಉಳ್ಳವರಿಗೆ ಮನೆ ಹಂಚಿಕೆ ಮಾಡಲಾಗಿದೆ. ಶಖಾಪೂರ ತಾಂಡಾದಲ್ಲಿ 46 ಕುಟುಂಬಗಳಿದ್ದು 124 ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಒಂದೇ ಕುಟುಂಬದ 3-4 ಸದಸ್ಯರಿಗೆ ಮನೆ ನೀಡಿದ್ದಾರೆ. ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಮನೆ ಹಂಚಿಕೆ ಅವ್ಯವಹಾರವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ ತನಿಖೆ ನಡೆಸಬೇಕೆಂದು

ಆರೋಪಿಸಿ ವಿಧಾನ ಪರಿಷತ್ ಮಾಜಿ ಸದಸ್ಯರು ಲಿಖಿತವಾಗಿ ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ಸಲ್ಲಿಸಿದ್ದರು. ಹೊತಪೇಟ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯನ್ನು(ಪಿಡಿಒ) ಮನೆಯೊಂದರಲ್ಲಿ ದಿಗ್ಬಂದನ ಹಾಕಿ  ರಾಜಕೀಯ ಒತ್ತಡ ತಂದು ಸುಮಾರು 60 ಚೆಕ್‌ಗಳನ್ನು ಖೊಟ್ಟಿ ಫಲಾನುಭವಿಗಳು ಪಡೆದುಕೊಂಡಿದ್ದಾರೆ.

ನಾನು ವಿಷ ಕುಡಿಯಬೇಕು ಇಲ್ಲವೆ ನೇಣು ಹಾಕಿಕೊಳ್ಳುವ ಸಂದಿಗ್ದ ದುಸ್ಥಿಯನ್ನು  ತಂದಿದ್ದಾರೆ ಎಂದು ಪಿಡಿಒ ದೂರವಾಣಿಯ ಮೂಲಕ ನಮಗೆ ತಿಳಿಸಿದರು. ನಿಜವಾದ ಫಲಾನುಭವಿಗಳನ್ನು ಮಾತ್ರ ಆಯ್ಕೆ ಮಾಡಬೇಕು. ಅನಾವಶ್ಯಕವಾಗಿ ಶಾಸಕರು ಒತ್ತಡ ತಂತ್ರ ಅನುಸರಿಸಿ ಹಿಂಬಾಲಕರಿಗೆ ಮನೆ ಹಂಚಿಕೆ ಮಾಡಲು ಹೊರಟಿದ್ದಾರೆ ಎಂದು ಬಿಜೆಪಿಯ ಹಿರಿಯ ಮುಖಂಡರು ಆಗಿರುವ ಅಮಾತೆಪ್ಪ ಕಂದಕೂರ  `ಪ್ರಜಾವಾಣಿ~ಗೆ ತಿಳಿಸಿದರು.

ಸರ್ಕಾರದಿಂದ ಮಂಜೂರಾತಿ ಪಡೆದ ಮನೆಯಲ್ಲಿ 112 ಮನೆ ಹುಲಕಲ್ ಗ್ರಾಮದ ನಿವಾಸಿಗಳಿಗೆ ಉಳಿದ 388 ಮನೆಗಳನ್ನು ಹೊತಪೇಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಖೊಟ್ಟಿ ಫಲಾನುಭವಿಗಳಿಗೆ ನೀಡಿದ್ದಾರೆ. ದಿಗ್ಗಿ ಗ್ರಾಮದ ರಾಜಕೀಯ ಹಿಂಬಾಲಕರಿಗೂ 20ಕ್ಕೂ ಹೆಚ್ಚು ಮನೆ ಕಲ್ಪಿಸಲಾಗಿದೆ. ಅನುಸೂಚಿತ ಪ್ರದೇಶದ ವ್ಯಾಪ್ತಿಯಲ್ಲಿ ಹೊತಪೇಟ ಗ್ರಾಮ ಪಂಚಾಯಿತಿ ಬರುವುದಿಲ್ಲ.

ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮ ಎಸಲಾಗಿದೆ. ಖೊಟ್ಟಿ ಮನೆ ಫಲಾನುಭವಿಗಳ ಪಟ್ಟಿ ರದ್ದುಪಡಿಸಿ ತನಿಖೆ ನಡೆಸಬೇಕು. ಮತದಾರ ಪಟ್ಟಿಯನ್ನು ತೆಗೆದುಕೊಂಡು ಸಮಗ್ರವಾಗಿ ಪರಿಶೀಲಿಸಿ ಅಕ್ರಮದ ಹೂರಣ ಕಾಣುತ್ತದೆ. ಚುನಾವಣೆಯ ಗಿಮಿಕ್‌ಗಾಗಿ ಇಂತಹ ಓಲೈಕೆ ಮಾಡುವುದು ಸರಿಯಲ್ಲ. ಅಧಿಕಾರಿಗಳು ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಹೋರಾಟ ನಡೆಸಬೇಕಾದಿತ್ತು ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷರಾದ ಮಲ್ಲಣ್ಣ ಮಡ್ಡಿ ಸಾಹು ಎಚ್ಚರಿಕೆ ನೀಡಿದ್ದಾರೆ.

ಸಿರವಾಳ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಂಕರಗೌಡ ಪಾಟೀಲ್, ರಾಮಚಂದ್ರಪ್ಪ ಕಾಶಿರಾಜ, ಯಲ್ಲಯ್ಯ ನಾಯಕ ವನದುರ್ಗ, ವಸಂತ ಸುರಪುರಕರ್, ಹೊನ್ನಪ್ಪ ಕನ್ಯಾಕೊಳ್ಳುರ, ಮಾನಯ್ಯ ವನದುರ್ಗ ಹಾಜರಿದ್ದರು.

ಶಹಾಪುರ: ಭೀಮರಾನಗುಡಿ ಅನುಸೂಚಿತ ಪ್ರದೇಶದ ಫಲಾನುಭವಿಗಳಿಗೆ ಮನೆ ಹಂಚಿಕೆಯಲ್ಲಿ ಅವ್ಯವಹಾರವಾಗಿದ್ದು ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ಬಿಡುಗಡೆಯಾದ ಅನುದಾನವನ್ನು ತಡೆ ಹಿಡಿಯಲಾಗಿದೆ ಎಂದು ಅನುಸೂಚಿತ ಪ್ರದೇಶದ ಆಡಳಿತಾಧಿಕಾರಿ ಹಾಗೂ ತಹಸೀಲ್ದಾರ ಎಂ.ರಾಚಪ್ಪ ಸ್ಪಷ್ಟಪಡಿಸಿದ್ದಾರೆ.

ಅನುಸೂಚಿತ ಪ್ರದೇಶದ ಫಲಾನುಭವಿಗಳನ್ನು ಬಿಟ್ಟು ಹೋತಪೇಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಿದ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ 172 ಫಲಾನುಭವಿಗಳ ಹೆಸರು ತೆಗೆದು ಹಾಕಲಾಗಿದೆ. ಇನ್ನೂ ಖೊಟ್ಟಿ ಫಲಾನುಭವಿಗಳು ಇದ್ದರೆ ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.