ADVERTISEMENT

ಭಗವಾನ್ ಪಾರ್ಶ್ವನಾಥ ಮೂರ್ತಿ ಪ್ರತಿಷ್ಠಾಪನೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2011, 11:15 IST
Last Updated 21 ಅಕ್ಟೋಬರ್ 2011, 11:15 IST

ಯಾದಗಿರಿ: ನಗರದ ಹೊಸಳ್ಳಿ ಕ್ರಾಸ್‌ನಲ್ಲಿ ನಿರ್ಮಿಸಲಾಗಿರುವ ಜೈನ್ ಮಂದಿರದಲ್ಲಿ ಗುರುವಾರ ಭಗವಾನ್ ಪಾರ್ಶ್ವನಾಥರ ಮೂರ್ತಿಯನ್ನು ಸಕಲ ವಿಧಿವಿಧಾನಗಳೊಂದಿಗೆ ಪ್ರತಿಷ್ಠಾಪಿಸಲಾಯಿತು.

ಬೆಳಿಗ್ಗೆ ನಗರಕ್ಕೆ ಆಗಮಿಸಿದ ಮೂರ್ತಿಯನ್ನು ಇಲ್ಲಿಯ ಬಸ್‌ನಿಲ್ದಾಣದಿಂದ ಮೆರವಣಿಗೆ ಮೂಲಕ ಮಂದಿರಕ್ಕೆ ತರಲಾಯಿತು. ಬಸ್‌ನಿಲ್ದಾಣದ ಬಳಿ ಮೂರ್ತಿಗೆ ಪೂರ್ಣಕುಂಭದೊಂದಿಗೆ ಪೂಜೆ ಸಲ್ಲಿಸುವ ಮೂಲಕ ಬರಮಾಡಿಕೊಳ್ಳಲಾಯಿತು. ಜೈಪುರದಿಂದ ತರಲಾದ ಈ ಮೂರ್ತಿಯನ್ನು ಅಲಂಕೃವಾದ ವಾಹನದಲ್ಲಿ ಹೊಸಳ್ಳಿ ಕ್ರಾಸ್‌ವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು.

ವಾದ್ಯ ವೈಭವ, ಸುಮಂಗಲಿಯರ ಕುಂಭಕಳಶಗಳೊಂದಿಗೆ ಸಾಗಿದ ಮೆರವಣಿಗೆಯಲ್ಲಿ ನಗರದ ಜೈನ್ ಸಮಾಜದ ಮುಖಂಡರು ಸಾಕಷ್ಟು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ನಂತರ ಹೊಸಳ್ಳಿ ಕ್ರಾಸ್‌ನಲ್ಲಿರುವ ಮಂದಿರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.

ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಪಾರಸಮಲ್ ಜೈನ್, ರಮೇಶ ಕಾಂಗಠಾಣ, ಮಹೇಂದ್ರ ಭಂಡಾರಿ, ನೇಮಿಚಂದ ಸೋಲಂಕಿ, ಸುಭಾಷ ಗಾಂಧಿ, ಮಾಂಗಿಲಾಲ ಗಾಂಧಿ, ಫೂಲಚಂದ ಗಾಂಧಿ, ಸುಭಾಷ ಅಷ್ಟೇಕರ, ಕಾಂತಿಲಾಲ ಸೋಲಂಕಿ, ವಿನೋದ ಜೈನ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.