ADVERTISEMENT

ಮಹಿಳೆಯರಿಗೆ ಶಿಕ್ಷಣ ಅವಶ್ಯ: ದಯಾನಂದ ಮಠ

​ಪ್ರಜಾವಾಣಿ ವಾರ್ತೆ
Published 18 ಜನವರಿ 2012, 6:25 IST
Last Updated 18 ಜನವರಿ 2012, 6:25 IST

ಸುರಪುರ: ಪುರುಷ ಪ್ರಧಾನ ದೇಶವಾದ ನಮ್ಮಲ್ಲಿ ಮಹಿಳೆಗೆ ಇಂದಿಗೂ ಸ್ಥಾನ ಮಾನದಲ್ಲಿ ಕೀಳರಿಮೆಯಿಂದ ನೋಡಲಾಗುತ್ತಿದೆ. ಎಂದಿನವರೆಗೆ ಮಹಿಳೆಗೂ ಪುರುಷನಷ್ಟೆ ಸಮಾನತೆ ದೊರಕುವುದಿಲ್ಲವೋ ಅಂದಿನವರೆಗೆ ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ. ಸಮಾಜ ಬೆಳಗಲು ಮಹಿಳೆಯರಿಗೆ ಶಿಕ್ಷಣದ ಅವಶ್ಯಕತೆ ಇದೆ ಎಂದು ಉಪನ್ಯಾಸಕ ದಯಾನಂದ ಮಠ ಪ್ರತಿಪಾದಿಸಿದರು.

ತಾಲ್ಲೂಕಿನ ಕಕ್ಕೇರಾದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ `ಮಹಿಳಾ ಜಾಗ್ರತೆ~ ವಿಷಯದ ಬಗ್ಗೆ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಬಾಲ್ಯಾವಸ್ಥೆಯಲ್ಲಿ ತಂದೆ ತಾಯಿಗಳ ಆಶ್ರಯದಲ್ಲಿ, ಪ್ರೌಢಾವಸ್ಥೆಯಲ್ಲಿ ಪತಿಯ ಆಶ್ರಯದಲ್ಲಿ, ವೃದ್ಧಾವಸ್ಥೆಯಲ್ಲಿ ಮಕ್ಕಳ ಆಶ್ರಯದಲ್ಲಿ ಇರುವ ಮಹಿಳೆಗೆ ಎಂದಿಗೂ ನಾವು ಸ್ವಾತಂತ್ರ್ಯವನ್ನು ಕೊಟ್ಟೇಯಿಲ್ಲ. ಮಹಿಳೆ ಮಕ್ಕಳನ್ನು ಹೆರುವ ಯಂತ್ರವಾಗಿ, ನಾಲ್ಕು ಗೋಡೆಗಳ ಮಧ್ಯೆ ಇರುವ ಅಡುಗೆ ಮನೆಯ ಆಳಾಗಿ ಮಹಿಳೆಯನ್ನು ನೋಡುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಭೀಮಣ್ಣ ಭೋಸಗಿ ಮಾತನಾಡಿ, ಮಧ್ಯರಾತ್ರಿ ಸಮಯದಲ್ಲಿ ಎಂದು ಮಹಿಳೆ ಧೈರ್ಯದಿಂದ ರಸ್ತೆಯಲ್ಲಿ ತಿರುಗಾಡುತ್ತಾಳೋ ಅಂದು ನಮಗೆ ಸ್ವಾತಂತ್ರ್ಯ ದೊರಕಿದಂತೆ ಎಂದು ಗಾಂಧೀಜಿ ಹೇಳಿದ್ದಾರೆ. ಆದರೆ ಇಂದಿಗೂ ಮಹಿಳೆಯ ಶೋಷಣೆ ನಡೆದೆ ಇದೆ. ಇದು ನಿಲ್ಲಬೇಕು. ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ದೊರಕಬೇಕು. ಪ್ರತಿಯೊಬ್ಬರು ತಮ್ಮ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು. ಯಾದಗಿರಿ ಜಿಲ್ಲೆಯ ಎಲ್ಲಾ ಉನ್ನತ ಹುದ್ದೆಗಳಲ್ಲಿ ಮಹಿಳೆಯರೆ ಇದ್ದು ನಮಗೆ ಇದು ಮಾದರಿಯಾಗಬೇಕು ಎಂದು ವಿವರಿಸಿದರು.

ಕಾಂಗ್ರೆಸ್ ಮುಖಂಡ ಗುಂಡಪ್ಪ ಸೋಲಾಪುರ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ರಾಜು ಹವಾಲ್ದಾರ್, ಮಲ್ಲಣ್ಣ ಅಸ್ಕಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಿಂಗಮ್ಮ ಪುಜಾರಿ, ಉಪಾಧ್ಯಕ್ಷ ಬಸಯ್ಯಸ್ವಾಮಿ, ಕಾಲೇಜು ಸುಧಾರಣಾ ಸಮಿತಿ ಉಪಾಧ್ಯಕ್ಷ ರಮೇಶ ಶೆಟ್ಟಿ, ಹಣಮಂತ್ರಾಯಗೌಡ ಮಾಲಿಪಾಟೀಲ, ಲಕ್ಷ್ಮಣ ಲಿಂಗದಳ್ಳಿ, ಪರಮಣ್ಣ ತೇರಿನ್, ನಂದಣ್ಣ ದೇಸಾಯಿ, ಆರ್ಯಶಂಕರ ಬಸವರಾಜ, ಉಪನ್ಯಾಸಕಿ ಸೈದಾಬೇಗಂ ವೇದಿಕೆಯಲ್ಲಿದ್ದರು.

ನ್ಯಾನುಬಾಯಿ ಪ್ರಾರ್ಥನೆ ಗೀತೆ ಹಾಡಿದರು. ಉಪನ್ಯಾಸಕ ವೆಂಕಟೇಶನಾಯಕ ಅರಿಕೇರಿ ಸ್ವಾಗತಿಸಿದರು. ಅನುರಾಧಾ ಗೌಡಗೇರಿ ನಿರೂಪಿಸಿದರು. ಅಶೋಕ ಕೋಳೂರು ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.