ADVERTISEMENT

ಯಮರಾಯನಿಗೆ ಇರಲಿಲ್ಲ ದಯೆ : ಶವಗಳು ಗುರುತು ಸಿಗದಷ್ಟು ವಿಕಾರ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2011, 8:50 IST
Last Updated 11 ಅಕ್ಟೋಬರ್ 2011, 8:50 IST

ಸುರಪುರ: ವೆಂಕಟೇಶ್ವರನ ದರ್ಶನ ಪಡೆಯಲು ಸುರಪುರದಿಂದ ತಿರುಪತಿಗೆ ಹೊರಟಿದ್ದ ಏಳು ಜನ ಭಕ್ತರು ಸೋಮವಾರ ಬೆಳಗಿನ ಜಾವ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಶವಗಳು ಗುರುತು ಸಿಗದಷ್ಟು ವಿಕಾರಗೊಂಡಿವೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಮೃತರ ಸಂಬಂಧಿಕರು ತಿಳಿಸಿದ್ದಾರೆ. ಇದು ಅಪಘಾತದದ ಭೀಕರತೆಗೆ ಸಾಕ್ಷಿಯಾಗಿದೆ.

ಎದುರಿನಿಂದ ಬಂದ ಟೂರಿಸ್ಟ ಬಸ್ ಜೀಪಿನ ಮೇಲೆ ಏರಿ ಹೋಗಿದೆ. ಜೀಪು ಅಪ್ಪಚ್ಚಿಯಾಗಿದೆ. ಗಾಯಗೊಂಡ ಇಬ್ಬರ ಸ್ಥಿತಿ ಗಂಭೀರವಾಗಿದೆ. ಭೂವೈಕುಂಠ ಎಂದೆ ಹೆಸರಾದ ತಿರುಪತಿಯ ವೆಂಕಟೇಶ್ವರನ ದರ್ಶನಕ್ಕೆ ಹೊರಟಿದ್ದ ಭಕ್ತರು ವೈಕುಂಠವಾಸಿಗಳಾಗಿದ್ದು ದುರಾದೃಷ್ಟ.

ಪವಾಡ ಸದೃಶ್ಯ: ಬಾಲಕ ನರಸಿಂಹ (10) ಅಪಘಾತದಲ್ಲಿ ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿದ್ದಾನೆ. ಬಾಲಕನ ಎರಡೂ ಕಾಲುಗಳಿಗೆ ಗಾಯಗಳಾಗಿವೆ. ಬೆಳಿಗ್ಗೆ ಆತನೆ ಮೊಬೈಲ್ ಮೂಲಕ ಎಲ್ಲರಿಗೂ ಸುದ್ದಿ ತಿಳಿಸಿದ್ದಾನೆ. ಆತನ ತಂದೆ ಹನುಮೇಶ ಜಾಗೀರಾದರ ತನ್ನ ಎದುರಲ್ಲೆ ಮೃತ ಪಟ್ಟರೂ ಧೃತಿಗೆಡದೆ ಫೋನ್ ಮಾಡಿದ್ದಾನೆ.

ಒಬ್ಬನೆ ಮಗ: ಮೃತ ಪಟ್ಟ ಅಶೋಕ ಪತ್ತಾರ (30) ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿರುವ ದೇವಿಂದ್ರಪ್ಪ ಪತ್ತಾರ ಅವರಿಗೆ ಏಕೈಕ ಪುತ್ರ. ಪಕ್ಕದ ಮನೆಯವರು ದೇವರ ದರ್ಶನಕ್ಕೆ ಹೊರಟಾಗ ಈತನೂ ಜೀಪಿನಲ್ಲಿ ಹೋಗಿದ್ದ. ಅವರ ತಾಯಿ ಮತ್ತು ಕುಟುಂಬದವರ ರೋದನ ಕರುಳು ಚುರುಕ್ ಎನಿಸುವಂತಿತ್ತು.

ಮೃತಪಟ್ಟವರಲ್ಲಿ ನಾಲ್ಕು ಪ್ರತ್ಯೇಕ ಕುಟುಂಬದ ಸದಸ್ಯರಿದ್ದಾರೆ. ಅಂಬಮ್ಮ ಮತ್ತು ಮಹಾದೇವಿ ತಾಯಿ ಮತ್ತು ಮಗಳು. ಮಲ್ಲಪ್ಪ ಮತ್ತು ಜಯಶ್ರೀ ಅಪ್ಪ ಮತ್ತು ಮಗಳು, ಚಾಲಕ ರಾಮಮೂರ್ತಿ, ಹನುಮೇಶ ಮತ್ತು ಅಶೋಕ ಪ್ರತ್ಯೇಕ ಕುಟುಂಬಕ್ಕೆ ಸೇರಿದವರು. ಎಲ್ಲಾ ಕುಟುಂಬದವರು ಅಕ್ಕ ಪಕ್ಕದಲ್ಲಿ ವಾಸಿಸುತ್ತಿದ್ದು ಅನ್ಯೋನ್ಯವಾಗಿದ್ದಾರೆ. ಎಲ್ಲರೂ ಸೇರಿ ದೇವರ ದರ್ಶನ ಮಾಡಲು ನಿರ್ಧರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.