ಯಾದಗಿರಿ: ಸಮಿಪದ ಖಾನಾಪುರ ಗ್ರಾಮದಲ್ಲಿ ಕಾರ ಹುಣ್ಣಿಮೆಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆ ಎತ್ತುಗಳಿಗೆ ಸ್ನಾನ ಮಾಡಿಸಿ, ಕೊಂಬಿಗೆ ಬಣ್ಣ ಹಚ್ಚಿ ವಿವಿಧ ರೀತಿಯಿಂದ ಶೃಂಗರಿಸಿ, ಎತ್ತು ಹಾಗೂ ಹೋರಿಗಳನ್ನು ಸುರಪುರ ಕ್ರಾಸ್ ಹತ್ತಿರ ತಂದು ನಿಲ್ಲಿಸುತ್ತಾರೆ. ಅಲ್ಲಿದ ಎತ್ತುಗಳ ಮೆರವಣಿಗೆ ಮಂಗಲ ವಾದ್ಯಗಳೊಂದಿಗೆ ಆರಂಭವಾಗುತ್ತದೆ ಎಂದು ರೈತ ಸಣ್ಣಮಲ್ಲಪ್ಪ ತಿಳಿಸಿದರು.
ದಾರಿಯುದ್ದಕ್ಕೂ ಮಹಿಳೆಯರು ಬಾಲಕರು ಮೆರವಣಿಗೆ ಹೊರಟ ಎತ್ತುಗಳ ಮೇಲೆ ಚುರುಮುರಿಯನ್ನು ಎಸೆಯುತ್ತ ಆನಂದಿಸಿದರು. ಯುವಕರು ಪಟೆ (ಬಡಿಗೆಯನ್ನು ಒಂದೇ ಕೈಯಿಂದ ತಿರುಗಿಸುವುದು) ತಿರುಗಿಸಿ ತಮ್ಮ ಪ್ರತಿಭೆ ತೋರಿಸಿದರು. ಯಾದಗಿರಿ ರಸ್ತೆಯ ಹನುಮಾನ ಗುಡಿಯ ಹತ್ತಿರ ಮೆರವಣಿಗೆ ಮುಕ್ತಾಯವಾಯಿತು.
ಅರಕೇರಾ ಕೆ: ಜಿಲ್ಲೆಯಲ್ಲಿ ಕಳೆದ ರಾತ್ರಿ ಸುರಿದ ಮಳೆಯು ಅನ್ನದಾತನ ಹಬ್ಬವಾದ ಕಾರಹುಣ್ಣಿಮೆಯ ಸಂಭ್ರಮವನ್ನು ಇಮ್ಮಡಿಸಿತು.
ಹುಣ್ಣಿಮೆಯ ದಿನವಾದ ಭಾನುವಾರ ಗ್ರಾಮೀಣ ಪ್ರದೇಶಗಳಲ್ಲಿ ರೈತರು ಉತ್ಸಾಹದಿಂದಲೇ ಎತ್ತುಗಳನ್ನು ಸಿಂಗರಿಸಿ ಸಂಭ್ರಮದಿಂದ ಹಬ್ಬ ಆಚರಿಸಿ ದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಲಂಕೃತ ಎತ್ತುಗಳ ಮೆರವಣಿಗೆ ಮಾಡಿ ರೈತ ವರ್ಗ ಸಂಭ್ರಮ ಪಟ್ಟಿತು.
ತಾಲ್ಲೂಕಿನ ಅರಕೇರಾ (ಕೆ) ಗ್ರಾಮದಲ್ಲಿ ರೈತರು ಸಿಂಗರಿಸಿದ ಎತ್ತುಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಿದರು. ಟೋಕರಿ ಕೋಲಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ ಮುದ್ನಾಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.